ಮದ್ದೂರು:ಕುಟುಂಬ ಕಲಹದಿಂದ ಬೇಸತ್ತು ಗೃಹಿಣಿಯೊರ್ವರು ಜಿಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಕೆಸ್ತೂರು ಗ್ರಾಮದ ಗಿರೀಶ್ ಅವರ ಪತ್ನಿ ದಿವ್ಯ (31) ಆತ್ಮಹತ್ಯೆ ಶರಣಾದ ಮಹಿಳೆ.
ಮೃತರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯಿದ್ದು ಕುಟುಂಬ ಕಲಹದಿಂದ ಬೇಸತ್ತು ಸೋಮವಾರ ಮಧ್ಯಾಹ್ನ ಜಿಮ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.
ಮದ್ದೂರು ತಾಲೂಕಿನ ಮಾಚಳ್ಳಿ ಗ್ರಾಮದ ಗೋವಿಂದ ಅವರ ಪುತ್ರಿ ದಿವ್ಯ ಅವರನ್ನು ಕಳೆದ ಎಂಟು ವರ್ಷಗಳ ಹಿಂದೆ ಕೆಸ್ತೂರು ಗ್ರಾಮದ ಗಿರೀಶ್ ಗೆ ವಿವಾಹ ಮಾಡಿಕೊಡ ಲಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ದಂಪತಿಗಳಿಬ್ಬರು ಕೆಸ್ತೂರು ಗ್ರಾಮದಲ್ಲಿ ವೈಭವ್ ಫಿಟೈಸ್ ಎಂಬ ಜಿಮ್ ಅನ್ನು ತೆರೆದು ಜೀವನ ಸಾಗಿಸುತ್ತಿದ್ದೆರನ್ನಲಾಗಿದೆ.
ಎಂದಿನಂತೆ ಜಿಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿವ್ಯ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದು ಪತಿ ಗಿರೀಶ್ ಸ್ಥಳದಿಂದ ಪರಾರಿಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಘಟನಾ ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಮೃತಳ ತಂದೆ ಗೋವಿಂದ ಅವರು ನೀಡಿದ ದೂರಿನ ಮೇರೆಗೆ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.