ಮನೆ Uncategorized ಮಂಗಳೂರು ದುರಂತ: ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದ ಅಕ್ಕ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ

ಮಂಗಳೂರು ದುರಂತ: ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದ ಅಕ್ಕ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ

0

ಮಂಗಳೂರು : ಈ ಸಾವು ಅನ್ನೋದು ಯಾರಿಗೆ ಯಾವಾಗ ಯಾವ ರೂಪದಲ್ಲಿ ಬರುತ್ತದೆ ಅಂತ ಹೇಳಕ್ಕಾಗಲ್ಲ. ಇದೀಗ ಮಂಗಳೂರಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ತಮ್ಮನ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಅಕ್ಕನು ಸಹ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೌದು ತಮ್ಮನ ಅಂತ್ಯ ಸಂಸ್ಕಾರಕ್ಕೆಂದು ಚೆನ್ನೈನಿಂದ ಬಂದಿದ್ದ ಅಕ್ಕ ನಗರದ ಹೊರವಲಯದ ಪಾವಂಜೆ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೆ, ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ನಗರದ ಬಂಗ್ರಕೂಳೂರು ನಿವಾಸಿ ಶ್ರುತಿ (27) ಮೃತಪಟ್ಟವರು ಎಂದು ತಿಳಿದುಬಂದಿದೆ.

ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿರುವ ಶ್ರುತಿ ಚೆನ್ನೈನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು. ಮೆಕ್ಯಾನಿಕ್ ಆಗಿದ್ದ ತನ್ನ ಸಹೋದರ ಸುಜಿತ್ ಜೂನ್ 10ರಂದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಕೆಲಸಕ್ಕೆ ರಜೆ ಹಾಕಿ ಮನೆಗೆ ಬಂದಿದ್ದರು. ಈ ನಡುವೆ ಬ್ಯಾಂಕ್ ಕೆಲಸಕ್ಕೆಂದು ತಂದೆಯೊಂದಿಗೆ ಸ್ಕೂಟರ್​ನಲ್ಲಿ ಕಿನ್ನಿಗೋಳಿ ಕಡೆಗೆ ಹೋಗಿ ಮತ್ತೆ ಮನೆಯತ್ತ ಹಿಂದೆ ಬರುತ್ತಿದ್ದರು.

ಮಳೆ ಬಂದ ಹಿನ್ನೆಲೆಯಲ್ಲಿ ಪಾವಂಜೆ ಬಳಿ‌ ಸ್ಕೂಟರ್ ನಿಲ್ಲಿಸಿ, ರೈನ್ ಕೋಟ್ ಹಾಕುತ್ತಿದ್ದ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಕೂಟರ್​ ಹಾಗೂ ಅಲ್ಲೇ ನಿಂತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಕಾರು, ಶ್ರುತಿಯವರ ಸಹಿತ ಎಳೆದೊಯ್ದು ಹೆದ್ದಾರಿ ಬದಿಯಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ಅಪ್ಪಳಿಸಿದೆ.

ಪರಿಣಾಮ ಗಂಭೀರ ಗಾಯಗೊಂಡ ಶ್ರುತಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ ತಂದೆ ಗೋಪಾಲ ಆಚಾರ್ಯ (57) ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು, ಇಬ್ಬರು ಮಕ್ಕಳನ್ನು ಕಣ್ಣೆದುರೇ ಕಳೆದುಕೊಂಡಿದ್ದು ತೀವ್ರ ದುಃಖ ಉಂಟುಮಾಡಿದೆ. ಅಪಘಾತದ ಬಗ್ಗೆ ಮುಲ್ಕಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.