ಕನಕಗಿರಿ: ತಾಲ್ಲೂಕಿನ ಕನಕಾಪುರ ಗ್ರಾಮದಲ್ಲಿ ಶನಿವಾರ ನಡೆದ ಮಾರುತೇಶ್ವರ ಜಾತ್ರಾ ಮಹೋತ್ಸವದ ವೇಳೆ ಉಚ್ಛಾಯಕ್ಕೆ ಹೂವಿನಹಾರ ಕಟ್ಟುವ ಸಮಯದಲ್ಲಿ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾನೆ.
ಮೃತಪಟ್ಟವನು ಮಾರುತಿ ಹುಗ್ಗಿ ( 23) ಎಂದು ತಿಳಿದು ಬಂದಿದೆ. ಉಚ್ಛಾಯ ಹಾಗೂ ಜಾತ್ರೆಯ ನಿಮಿತ್ತ ಗ್ರಾಮಸ್ಥರು ಸಂಭ್ರಮದಲ್ಲಿದ್ದರು.
ಉಚ್ಛಾಯ ನೆರವೇರಿಸುವ ನಿಮಿತ್ತ ಭಕ್ತರು ಹೂವಿನಹಾರ ಹಾಗೂ ಬಲೂನ್ ಕಟ್ಟಿ ಶೃಂಗಾರ ಮಾಡುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.
ಕಾಲು ಜಾರಿ ಬಿದ್ದ ರಭಸಕ್ಕೆ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು ಮೊದಲು ಕನಕಗಿರಿ ಬಳಿಕ ಗಂಗಾವತಿ ಹಾಗೂ ಕೊಪ್ಪಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾನೆ.
ಗ್ರಾಮದ ಯುವಕ ಮೃತಪಟ್ಟ ಘಟನೆಯಿಂದ ಉಚ್ಛಾಯ ಸಂಕ್ಷಿಪ್ತವಾಗಿ ಎಳೆದು ಕಾರ್ಯಕ್ರಮ ಮುಗಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಭಾನುವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.














