ಮನೆ ಕಾನೂನು ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಕೋರಿಕೆ: ಐಎಎಸ್‌ ಅಧಿಕಾರಿ ವೆಂಕಟರಾಜಗೆ ಅಫಿಡವಿಟ್‌ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಕೋರಿಕೆ: ಐಎಎಸ್‌ ಅಧಿಕಾರಿ ವೆಂಕಟರಾಜಗೆ ಅಫಿಡವಿಟ್‌ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

0

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ಸಂಪೂರ್ಣ ಸಿಸಿ ಟಿವಿ ದೃಶ್ಯಾವಳಿ ನಾಪತ್ತೆಯಾಗಿರುವ ಕುರಿತು ಅಫಿಡವಿಟ್‌ ಸಲ್ಲಿಸುವಂತೆ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಆಗಿದ್ದ ಸದ್ಯ ಕೊಡಗು ಜಿಲ್ಲಾಧಿಕಾರಿಯಾಗಿರುವ ವೆಂಕಟರಾಜ ಅವರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

Join Our Whatsapp Group

ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕಾಂಗ್ರೆಸ್‌ನ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ನಡೆಸಿತು.

ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೊ ದೃಶ್ಯಾವಳಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು, ವಿಫಲವಾದಲ್ಲಿ ಕೋಲಾರ ಜಿಲ್ಲಾ ಚುನಾವಣಾಧಿಕಾರಿ ಆಗಸ್ಟ್‌ 27ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಹೇಳಿತ್ತು. ಅದರಂತೆ, ಸದ್ಯ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಹಾಲಿ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರಾಗಿದ್ದರು.

ಈ ವೇಳೆ ಜಿಲ್ಲಾ ಚುನಾವಣಾಧಿಕಾರಿ ಪರ ವಕೀಲ ಶರತ್ ದೊಡ್ಡವಾಡ ಅವರು, ಮತ ಎಣಿಕೆ ಕಾರ್ಯದ ವಿಡಿಯೊ ದೃಶ್ಯಾವಳಿಗಳನ್ನು ಪತ್ತೆ ಮಾಡಲು ಪ್ರಯತ್ನಿಸಲಾಗಿದೆ. ಆದರೆ, ಚುನಾವಣೆ, ಮತ ಎಣಿಕೆ ಎಲ್ಲವೂ ಹಿಂದಿನ ಜಿಲ್ಲಾ ಚುನಾವಣಾಧಿಕಾರಿಗಳ ಅವಧಿಯಲ್ಲಿ ನಡೆದಿದೆ. ಸ್ಟ್ರಾಂಗ್‌ ರೂಂ ತೆರೆಯುವ ಪ್ರಕ್ರಿಯೆ ಸಹ ಹಿಂದಿನ ಜಿಲ್ಲಾ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ. ಆಗಿನ ಮತ ಎಣಿಕೆಯ ವಿಡಿಯೊ ಚಿತ್ರೀಕರಣ, ಸಿಸಿ ಟಿವಿ ದೃಶ್ಯಾವಳಿಗಳ ಬಗ್ಗೆ ಈಗಿನ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ಇಲ್ಲ. ಈ ವಿಚಾರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಸಿಸಿ ಕ್ಯಾಮರಾಗಳನ್ನು ಪೂರೈಸಿದ ಖಾಸಗಿ ಕಂಪೆನಿಯಿಂದಲೂ ಮಾಹಿತಿ ಕೇಳಲಾಗಿತ್ತು. ಒಟ್ಟಾರೆ, ಚುನಾವಣೆ, ಮತ ಎಣಿಕೆ ನಡೆದಾಗ ಈಗಿನ ಜಿಲ್ಲಾ ಚುನಾವಣಾಧಿಕಾರಿಗಳು ಕೋಲಾರ ಜಿಲ್ಲಾಧಿಕಾರಿ ಆಗಿರಲಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಈ ವಾದ ದಾಖಲಿಸಿದ ಪೀಠವು ಮತ ಎಣಿಕೆ ಕಾರ್ಯದ ವಿಡಿಯೊ ರೆಕಾರ್ಡಿಂಗ್ ನಾಪತ್ತೆಯಾಗಿರುವ ಬಗ್ಗೆ ಚುನಾವಣೆ ನಡೆದಾಗ ಜಿಲ್ಲಾ ಚುನಾವಣಾಧಿಕಾರಿ ಆಗಿದ್ದ, ಸದ್ಯ ಕೊಡಗು ಜಿಲ್ಲಾಧಿಕಾರಿಯಾಗಿರುವ ಅಂದಿನ ಕೋಲಾರ ಜಿಲ್ಲಾಧಿಕಾರಿ ಆಗಿದ್ದ ವೆಂಕಟರಾಜ ಅವರಿಗೆ ಅಫಿಡವಿಟ್‌ ಸಲ್ಲಿಸುವಂತೆ ನಿರ್ದೇಶನ ನೀಡಿತು. ಅಲ್ಲದೇ ಈ ಬಗ್ಗೆ ವೆಂಕಟರಾಜು ಅವರು ತಮ್ಮದೇ ಆದ ತನಿಖೆ ಸಹ ನಡೆಸಬಹುದು ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿತು.

ಕಳೆದ ವಿಚಾರಣೆ ವೇಳೆ ಜಿಲ್ಲಾ ಚುನಾವಣಾಧಿಕಾರಿಯ ಪರ ವಕೀಲರು ಮತ ಎಣಿಕೆ ವೇಳೆ ವಿವಿ ಪ್ಯಾಟ್ ಎಣಿಕೆ ಮತ್ತು ಹೊಂದಾಣಿಕೆ ಕಾರ್ಯದ ಚಿತ್ರೀಕರಣದ ದೃಶ್ಯಾವಳಿ ಒಳಗೊಂಡ ಆರು ಸಿಡಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಜೊತೆಗೆ, ಮತ ಎಣಿಕೆ ವೇಳೆ ಅಭ್ಯರ್ಥಿಗಳ ಏಜೆಂಟರಿಗೆ ನೀಡಲಾಗಿದ್ದ ಫಾರ್ಮ್ ನಂ.17(ಸಿ)ನ ನಕಲು ಪ್ರತಿಗಳನ್ನು ಸಲ್ಲಿಸಿದ್ದರು. ಮತ ಎಣಿಕೆ ಕಾರ್ಯದ ವಿಡಿಯೊ ಶೋಧಿಸಲಾಗುತ್ತಿದೆ ಎಂದು ಹೇಳಿದ್ದರು.

ಮಾಲೂರು ವಿಧಾನಸಭೆ ಕ್ಷೇತ್ರ ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಲವು ಲೋಪ ದೋಷಗಳು ಆಗಿವೆ. ಇದರಿಂದ ಆ ಕ್ಷೇತ್ರದಿಂದ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.