ಮನೆ ರಾಜಕೀಯ ಸಿದ್ದರಾಮಯ್ಯ ಹಿಂದೂ ವಿರೋಧಿ: ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ

ಸಿದ್ದರಾಮಯ್ಯ ಹಿಂದೂ ವಿರೋಧಿ: ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ

0

ಮೈಸೂರು (Mysuru): ಸಿದ್ದರಾಮಯ್ಯ ಓರ್ವ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿಗಳ ಪೋಷಕ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ವೀರ ಸಾವರ್ಕರ್ ವಿಚಾರವಾಗಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್‌ ಸಿಂಹ ಅವರು, ಸರ್ಕಾರದ ಎಲ್ಲ ಅನುದಾನಿತ ಮದರಸಾಗಳಲ್ಲೂ ರಾಷ್ಟ್ರಧ್ವಜ ಹಾರಿಸಬೇಕು. ಶಾಸಕ ಜಮೀರ್ ಅಹ್ಮದ್ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಮತ್ತು ಗಣೇಶೋತ್ಸವ ಮಾಡಲು ಬಿಡುವುದಿಲ್ಲ ಎನ್ನುತ್ತಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದ್ದಾರೆ.


ಸ್ವಾತಂತ್ರ್ಯ ಹೋರಾಟಕ್ಕೆ ಆರ್ಎಸ್ಎಸ್ ಹಾಗೂ ಬಿಜೆಪಿಯ ಕೊಡುಗೆ ಏನು ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಏನು ಮೂಲ ಕಾಂಗ್ರೆಸ್ಸಿನವರೇ? ಅವರ ಕುಟುಂಬ ಏನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತಾ? ನೆಹರು-ಇಂದಿರಾ ಗಾಂಧಿ ಎಲ್ಲಿ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತರು ಎಂದು ಪ್ರಶ್ನಿಸಿದರು.

ಭಗತ್ ಸಿಂಗ್, ರಾಜ್ ಗುರು ಅವರಂತ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತವರು. ಇತಿಹಾಸದ ಕನಿಷ್ಠ ಜ್ಞಾನವು ಸಿದ್ದರಾಮಯ್ಯಗೆ ಇಲ್ಲ. ಕ್ರಾಂತಿಕಾರಿಗಳು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು. ಅಂದಿನ ಕಾಂಗ್ರೆಸ್ ಸ್ವಾತಂತ್ರ್ಯ ಸಂಗ್ರಾಮಕ್ಕೆ ಒಂದೇ ಸೂರಿನಡಿ ಹೋರಾಟ ಮಾಡಲು ಹುಟ್ಟಿಕೊಂಡಿತು. ಸ್ವಾತಂತ್ರ್ಯ ನಂತರ ಅದೇ ಕಾಂಗ್ರೆಸ್ ಅನ್ನು ಗಾಂಧಿ ಅವರು ವಿಸರ್ಜಿಸುವಂತೆ ಹೇಳಿದ್ದರು. ಅದನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದು ಯಾರು?. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಂದಿನ ಕಾಂಗ್ರೆಸ್‌ ಗೂ, ರಾಜಕೀಯಕ್ಕೆ ಬದಲಾಗಿರುವ ಇಂದಿನ ಕಾಂಗ್ರೆಸ್‌ ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.

ಈಗಾಗಲೇ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ನೀಡಲಾಗಿದೆ. ಆದರೆ, ಇಲ್ಲೇ ಉಳಿದಿರುವವರು ಸಂವಿಧಾನಕ್ಕೆ ಗೌರವ ಕೊಟ್ಟು ಬದುಕುವುದನ್ನು ಕಲಿಯಿರಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಎಂಬ ಎರಡು ಟೀಂ ಇದೆ. ಸಿದ್ದರಾಮಯ್ಯ ಟೀಂಗೆ ಜಮೀರ್ ಅಹ್ಮದ್ ವೈಸ್ ಕ್ಯಾಪ್ಟನ್, ಡಿ.ಕೆ.ಟೀಂಗೆ ನಲಪಾಡ್ ವೈಸ್ ಕ್ಯಾಪ್ಟನ್ ಎಂದು ಸಂಸದ ಪ್ರತಾಪ್ ಟೀಕಿಸಿದರು.

ಹಿಂದಿನ ಲೇಖನಸ್ವಾತಂತ್ರ್ಯ ಹೋರಾಟಗಾರರ ಜಾಹೀರಾತಿನಲ್ಲಿ ನೆಹರೂ ಅವರನ್ನು ಕೈ ಬಿಟ್ಟ ಸರ್ಕಾರ: ಆಕ್ರೋಶ ವ್ಯಕ್ತ
ಮುಂದಿನ ಲೇಖನಸ್ವಾತಂತ್ರ್ಯ ದಿನಾಚರಣೆಯಂದು ದಾಳಿ ನಡೆಸಲು ಸಂಚು: 7 ಉಗ್ರರ ಬಂಧನ