ಬೆಂಗಳೂರು: ಸರ್ಕಾರ ರಚನೆ ಸಂಬಂಧ ಯಾವುದೇ ಪಕ್ಷಗಳು ನನ್ನನ್ನು ಸಂಪರ್ಕಿಸಿಲ್ಲ ಎಂದು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ಮತ ಎಣಿಕೆ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ಇನ್ನು 2–3 ಗಂಟೆಯಲ್ಲಿ ಎಲ್ಲವೂ ತಿಳಿಯುತ್ತದೆ. ಮತಗಟ್ಟೆ ಸಮೀಕ್ಷೆಗಳು ಎರಡು ರಾಷ್ಟ್ರೀಯ ಪಕ್ಷಗಳು ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಹೇಳಿವೆ. ನಾವು 30–32 ಸೀಟುಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ. ನಮ್ಮದು ಸಣ್ಣ ಪಕ್ಷ. ಹಾಗಾಗಿ ನಮಗೆ ಬೇಡಿಕೆ ಇಲ್ಲ. ಒಳ್ಳೆಯದಾಗಲಿದೆ ಎನ್ನುವ ನಂಬಿಕೆ ಇದೆ ಎಂದು ಅವರು ಹೇಳಿದರು.
ಈವರೆಗೆ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಅಂತಿಮ ಫಲಿತಾಂಶ ಏನಾಗುತ್ತದೆ ಎನ್ನುವುದನ್ನು ನೋಡೋಣ. ಮತದಾನೋತ್ತರ ಸಮೀಕ್ಷೆ ಪ್ರಕಾರ ಯಾವುದೇ ಆಯ್ಕೆಗಳು ಇಲ್ಲ. ಕೊನೆವರೆಗೂ ಕಾದು ನೋಡೋಣ ಎಂದು ಅವರು ನುಡಿದರು.