ಜೈಪುರ : ರಾಜಸ್ಥಾನದ ಅಜ್ಮೀರ್ನ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಸ್ರೇಲ್ ವಿರುದ್ಧ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುವ ಸ್ಟಿಕ್ಕರ್ಗಳನ್ನು ಅಂಟಿಸಿದ ಬ್ರಿಟಿಷ್ ದಂಪತಿಗೆ ಭಾರತವನ್ನು ತೊರೆಯುವಂತೆ ಸೂಚಿಸಲಾಗಿದೆ. ಗುಪ್ತಚರ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಪೊಲೀಸರಿಗೆ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿತ್ತು. ಇಬ್ಬರು ಬ್ರಿಟಿಷ್ ಪ್ರಜೆಗಳನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಭಾರತ ತೊರೆಯುವಂತೆ ಆದೇಶಿಸಲಾಗಿದೆ.
ಲೂಯಿಸ್ ಗೇಬ್ರಿಯಲ್ ಡಿ ಮತ್ತು ಗೆಳತಿ ಅನುಷಿ ಎಮ್ಮಾ ಕ್ರಿಸ್ಟೀನ್ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ಪುಷ್ಕರ್ನಲ್ಲಿ ತಂಗಿದ್ದರು. ಜನವರಿ 21 ರಂದು ದಂಪತಿ ಸ್ಟಿಕ್ಕರ್ ಅಂಟಿಸಿದ್ದ, ವಿಚಾರ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿತು. ಗುಪ್ತಚರ ಇಲಾಖೆ ಸಿಸಿಟಿವಿ ದೃಶ್ಯಾವಳಿಯನ್ನು ಪರಿಕ್ಷಿಸಿ ವಿಷಯ ಗಂಭೀರವಾಗಿದೆ ಎಂದು ಪರಿಗಣಿಸಿದ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಮೀನಾ ನೇತೃತ್ವದ ತಂಡವು ಇವರ ವಿಚಾರಣೆ ನಡೆಸಿತು.
ವಲಸೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರವಾಸಿ ವೀಸಾದಲ್ಲಿರುವಾಗ ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿ ಷರತ್ತುಗಳ ಉಲ್ಲಂಘಿಸಿದ್ದಕ್ಕೆ ಇಬ್ಬರ ವೀಸಾವನ್ನು ರದ್ದುಗೊಳಿಸಲಾಗಿದೆ. ಒಂದು ವೇಳೆ ಸರ್ಕಾರ ಕಠಿಣ ಕ್ರಮ ಕೈಗೊಂಡು ಇವರನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಭವಿಷ್ಯದಲ್ಲಿ ಭಾರತಕ್ಕೆ ಪ್ರವೇಶಿಸುವುದನ್ನು ತಡೆಯುತ್ತದೆ. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದ ವ್ಯಕ್ತಿಗಳು ದೇಶದ ಒಳಗಡೆ ಯಾವುದೇ ರೀತಿಯ ರಾಜಕೀಯ, ಪ್ರತಿಭಟನೆ ಅಥವಾ ಸೈದ್ಧಾಂತಿಕ ಚಟುವಟಿಕೆಗೆಯಲ್ಲಿ ಭಾಗಿಯಾಗುವಂತಿಲ್ಲ ಎಂದು ತಿಳಿಸಿದೆ.














