ಬೆಂಗಳೂರು: ರಾಜ್ಯವನ್ನು ಸುಸ್ಥಿರವಾಗಿ ಅಭಿವೃದ್ಧಿ ಮಾಡಲು ನಮ್ಮ ಪಕ್ಷ ಕೆಲಸ ಮಾಡಲಿದೆ ಎಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಎಂ.ಬಿ.ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷ ಈಗ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕಳೆದ 4 ವರ್ಷಗಳಲ್ಲಿ ರಾಜ್ಯದ ಆಡಳಿತ ಹದಗೆಟ್ಟಿದೆ. ಮುಂದಿನ 5 ವರ್ಷದಲ್ಲಿ ರಾಜ್ಯದ ಅಭಿವೃದ್ಧಿ ಸಲುವಾಗಿ ಹಲವು ಯೋಜನೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಈ ಹಿಂದೆ ನಮ್ಮ ನಾಯಕರು ಮಾಡಿರುವ ಒಳ್ಳೆಯ ಕೆಲಸಗಳನ್ನು ಮತ್ತೆ ತರುವ ಮೂಲಕ ರಾಜ್ಯದ ಗತವೈಭವ ಮರುಳಿಸಬೇಕಿದೆ ಎಂದರು ಹೇಳಿದರು.
24 ಜನ ಶಾಸಕರು ಮಾತ್ರ ಸಚಿವರಾಗಲು ಸಾಧ್ಯ. ಸದ್ಯ 10 ಜನ ಪ್ರಮಾಣ ವಚನ ಸ್ವೀಕರಿಸಲಿದ್ದೇವೆ. ಈಗಾಗಲೇ ಗೃಹ ಸಚಿವನಾಗಿ, ಜಲಸಂಪನ್ಮೂಲ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಈಗ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಈ ಮೂಲಕ ಜನರಿಗೆ ಒಳ್ಳೆಯದಾಗುವಂತೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಸ್ಲಿಂ, ಎಸ್ ಟಿ ಜನಾಂಗ, ಲಿಂಗಾಯತರು ಸೇರಿದಂತೆ ಪ್ರತಿಯೊಬ್ಬರೂ ನಮಗೆ ಆಶಿರ್ವಾದ ಮಾಡಿದ್ದಾರೆ. ಕ್ಯಾಬಿನೆಟ್ ಸಭೆ ಆಗುತ್ತಿದ್ದಂತೆ ನಮ್ಮ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ತೀರ್ಮಾನ ಆಗುತ್ತದೆ. ಅದರ ಬಗ್ಗೆ ನಾನು ಈಗ ಮಾತನಾಡಲು ಸಾಧ್ಯವಿಲ್ಲ. 5 ವರ್ಷ ರಾಜ್ಯದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ರಾಜ್ಯದ ಹಣಕಾಸು ವ್ಯವಸ್ಥೆ ತೀರಾ ಹದಗೆಟ್ಟಿದೆ ಎಂದು ಹೇಳಿದರು.
ಪಕ್ಷದ ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುವುದರಿಂದ ಯಾವುದೇ ಗೊಂದಲ ಇಲ್ಲ. ಹಿರಿತನ ನೋಡಿ ಸ್ಥಾನಮಾನ ಕೊಡಲಾಗುತ್ತದೆ. ನಮ್ಮಇಚ್ಛೆಯ ಖಾತೆಯನ್ನು ತಿಳಿಸುತ್ತೇವೆ, ಕೊಡುವುದು ಸಿಎಂ ಅವರ ಪರಮಾಧಿಕಾರ ಎಂದರು.