ಮನೆ ಕಾನೂನು ಬಂಡಾಯ ಶಾಸಕರು ಮಹಾರಾಷ್ಟ್ರಕ್ಕೆ ಮರಳಲು ಸೂಚಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

ಬಂಡಾಯ ಶಾಸಕರು ಮಹಾರಾಷ್ಟ್ರಕ್ಕೆ ಮರಳಲು ಸೂಚಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

0

ಶಿವಸೇನಾದ ಏಕನಾಥ್‌ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಕೂಡಲೇ ಗುವಾಹಟಿಯಿಂದ ರಾಜ್ಯಕ್ಕೆ ಮರಳುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

 [ಉತ್ಪಲ್ ಚಂದಾವರ್ ಮತ್ತು ಏಕನಾಥ್ ಶಿಂಧೆ ನಡುವಣ ಪ್ರಕರಣ]

ಸಾರ್ವಜನಿಕ ಹಕ್ಕುಗಳು ಮತ್ತು ಉತ್ತಮ ಆಡಳಿತಕ್ಕೆ ಅಗೌರವ ತೋರಿದ ಬಂಡಾಯ ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲರಾದ ಅಸಿಮ್ ಸರೋದೆ ಮತ್ತು ಅಜಿಂಕ್ಯ ಉದನೆ ಅವರ ಮೂಲಕ ಉತ್ಪಲ್ ಚಂದಾವರ್ ಅವರು ಸಲ್ಲಿಸಿರುವ ಪಿಐಎಲ್‌ ಕೋರಿದೆ.

ಇಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಮಕರಂದ್ ಕಾರ್ಣಿಕ್ ಅವರ ಪೀಠದೆದುರು ಅರ್ಜಿ ಉಲ್ಲೇಖಿಸಲಾಗಿದ್ದು, ಪ್ರಕರಣವನ್ನು ಶೀಘ್ರದಲ್ಲೇ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಅರ್ಜಿಯ ಪ್ರಮುಖಾಂಶಗಳು

ಚುನಾಯಿತ ಪ್ರತಿನಿಧಿಗಳು ಇಷ್ಟು ದೊಡ್ಡ ಮೊತ್ತದ ಹಣವನ್ನು ಹೇಗೆ ಖರ್ಚು ಮಾಡುತ್ತಿದ್ದಾರೆ, ಸಾರ್ವಜನಿಕ ಹಣವನ್ನು ಚಾರ್ಟರ್ಡ್ ವಿಮಾನಗಳಲ್ಲಿ ಪ್ರಯಾಣಿಸಲು ಮತ್ತು ಐಷಾರಾಮಿ ಪಂಚತಾರಾ ಹೋಟೆಲ್‌ಗಳಲ್ಲಿ ವಾಸಿಸಲು ಬಳಸುತ್ತಿದ್ದಾರೆಯೇ ಎಂಬುದನ್ನು ಜನರಿಗೆ ತಿಳಿಯಪಡಿಸುವುದು ಸೂಕ್ತ.

ಬಂಡಾಯ ಎದ್ದವರಲ್ಲಿ ವಿವಿಧ ಸಚಿವರು ಕೂಡ ಇದ್ದು ಮಳೆಗಾಲದಲ್ಲಿ ಬಹುತೇಕ ನಗರಗಳು ಸಮಸ್ಯೆ ಎದುರಿಸುತ್ತಿರುವಾಗ 37 ಶಾಸಕರೊಂದಿಗೆ ನಗರಾಭಿವೃದ್ಧಿ ಸಚಿವ ಶಿಂಧೆ ಅವರು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯಿಂದ ಪಲಾಯನ ಮಾಡಿದ್ದಾರೆ. ಇದರಿಂದ ಸಾರ್ವಜನಿಕ ಹಕ್ಕುಗಳಿಗೆ ಅಡ್ಡಿಯಾಗಿದೆ.

ಪ್ರಸ್ತುತ ಋತು ರೈತರಿಗೆ ಬಹಳ ನಿರ್ಣಾಯಕವಾಗಿದ್ದು ಸಂಬಂಧಿಸಿದ ಕೃಷಿ ಸಚಿವರು ಹಲವು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ದುರದೃಷ್ಟವಶಾತ್‌ ಸಚಿವ ದಾದಾ ಭೂಸೆ ಅವರು ಗುವಾಹಟಿಯಲ್ಲಿದ್ದಾರೆ.

ಐಪಿಸಿ ಸೆಕ್ಷನ್ 268ರ ಪ್ರಕಾರ ರಾಜಕೀಯ ತೊಂದರೆ ಸಾರ್ವಜನಿಕರ ಮೇಲೂ ಪರಿಣಾಮ ಬೀರುವುದರಿಂದ ಅದನ್ನು ಕ್ಷಮಿಸಲು ಸಾಧ್ಯವಿಲ್ಲ. ಹೀಗಾಗಿ, ಶಿವಸೇನಾ ಶಾಸಕರ ಬಂಡಾಯ ಮತ್ತು ಅದರ ಪರಿಣಾಮದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ‘ಕಾನೂನಿನ ಪ್ರಶ್ನೆ’ಯನ್ನು ನಿರ್ಧರಿಸಬೇಕು.

ಹಿಂದಿನ ಲೇಖನಮಹಾರಾಷ್ಟ್ರ: ಬಂಡಾಯ ಶಾಸಕರ ಅನರ್ಹತೆಗೆ ಸುಪ್ರೀಂಕೋರ್ಟ್ ತಡೆ
ಮುಂದಿನ ಲೇಖನಸಾಧಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ