ಮನೆ ರಾಷ್ಟ್ರೀಯ ಪಿಎಂ ಇ-ಡ್ರೈವ್ ಯೋಜನೆಗೆ ಬಲ: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳ ಭರವಸೆ – ಹೆಚ್.ಡಿ. ಕುಮಾರಸ್ವಾಮಿ

ಪಿಎಂ ಇ-ಡ್ರೈವ್ ಯೋಜನೆಗೆ ಬಲ: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳ ಭರವಸೆ – ಹೆಚ್.ಡಿ. ಕುಮಾರಸ್ವಾಮಿ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಯಾದ ಪಿಎಂ ಇ-ಡ್ರೈವ್ ಅಡಿಯಲ್ಲಿ ಭಾರತ ಸರ್ಕಾರ ಇತ್ತೀಚೆಗೆ ಮಹತ್ತರ ನಿರ್ಧಾರ ಕೈಗೊಂಡಿದೆ. ಅದರಂತೆ ಮೊದಲ ಹಂತದಲ್ಲಿಯೇ ರಾಷ್ಟ್ರದ ಐದು ಪ್ರಮುಖ ನಗರಗಳಿಗೆ ಒಟ್ಟು 10,900 ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡುವ ಯೋಜನೆ ರೂಪಿಸಲಾಗಿದೆ. ಈ ಮಹತ್ವದ ಯೋಜನೆಯಲ್ಲಿ ಬೆಂಗಳೂರು ನಗರಕ್ಕೆ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುವ ಭರವಸೆ ದೊರೆತಿದೆ ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಸಭೆಯಲ್ಲಿ, ಎಲೆಕ್ಟ್ರಿಕ್ ಬಸ್ ಹಂಚಿಕೆ ಕುರಿತಂತೆ ಕರ್ನಾಟಕ, ತೆಲಂಗಾಣ, ಗುಜರಾತ್ ಹಾಗೂ ದೆಹಲಿಯ ಅಧಿಕಾರಿಗಳ ಜೊತೆ ಸಚಿವರು ಚರ್ಚಿಸಿದರು. ಈ ವೇಳೆ, ಇಂಧನ ಖರ್ಚು ಕಡಿಮೆ ಮಾಡುವ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಬಳಕೆಯನ್ನು ಉತ್ತೇಜಿಸುವುದು ರಾಷ್ಟ್ರದ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ. ಪ್ರಸಾದ್ ಅವರ ಪ್ರಕಾರ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗಾಗಿ 7,000 ಎಲೆಕ್ಟ್ರಿಕ್ ಬಸ್‌ಗಳ ಬೇಡಿಕೆ ಸಲ್ಲಿಸಲಾಗಿತ್ತು. ಈ ಬಗ್ಗೆ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರೂ ಕೂಡ ಕೆಲ ದಿನಗಳ ಹಿಂದೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಪೈಕಿ ಪ್ರಸ್ತುತ 4,500 ಬಸ್‌ಗಳನ್ನು ಹಂಚಿಕೆ ಮಾಡುವ ಭರವಸೆ ಕೇಂದ್ರದಿಂದ ದೊರೆತಿದ್ದು, ಇದು ದೇಶದ ಇತರೆ ನಗರಗಳಿಗಿಂತ ಹೆಚ್ಚು.

ಬೆಂಗಳೂರಿನಲ್ಲಿ ಸದ್ಯ 800 ಕಿ.ಮೀ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಹೆಚ್ಚಿನ ಜನಸಂಖ್ಯೆ, ವಾಹನ ದಟ್ಟಣೆ ಮತ್ತು ಪರಿಸರ ಮಾಲಿನ್ಯವನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

ಇತರೆ ನಗರಗಳಿಗೆ ಹಂಚಿಕೆ ಹೀಗಿದೆ:

  • ದೆಹಲಿ: 2,800 ಬಸ್‌ಗಳ ಬೇಡಿಕೆಗೆ ಸಂಪೂರ್ಣ ಪೂರೈಕೆ
  • ಹೈದರಾಬಾದ್: 2,800 ಬಸ್‌ಗಳ ಬೇಡಿಕೆಯಲ್ಲಿ 2,000 ಬಸ್‌ಗಳ ಭರವಸೆ
  • ಸೂರತ್: 600 ಬಸ್‌ಗಳ ಸಂಪೂರ್ಣ ಪೂರೈಕೆ
  • ಅಹಮದಾಬಾದ್: 1,000 ಬಸ್‌ಗಳ ಭರವಸೆ

ಒಟ್ಟಾರೆ, ಐದು ನಗರಗಳಿಂದ 14,200 ಎಲೆಕ್ಟ್ರಿಕ್ ಬಸ್‌ಗಳ ಬೇಡಿಕೆ ಬಂದಿದ್ದು, ಅದರಲ್ಲಿ ಮೊದಲ ಹಂತದಲ್ಲಿ 10,900 ಬಸ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಬಸ್‌ಗಳ ಹಂಚಿಕೆಗಿಂತ ಮೊದಲು, ನಗರಗಳ ಸಾರಿಗೆ ಸಂಸ್ಥೆಗಳು ಚಾರ್ಜಿಂಗ್ ಕೇಂದ್ರಗಳು ಹಾಗೂ ಇತರೆ ಮೂಲಸೌಕರ್ಯಗಳನ್ನು ನಿರ್ಮಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಇರುವ ಡಿಪೋಗಳನ್ನು ಮೇಲ್ದರ್ಜೆಗೆ ಏರಿಸುವುದು, ಹಾಗೂ ಅಗತ್ಯವಿದ್ದರೆ ಹೊಸ ಡಿಪೋಗಳ ನಿರ್ಮಾಣ ಮಾಡುವುದು ಅಗತ್ಯವಿದೆ ಎಂದು ಕುಮಾರಸ್ವಾಮಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.