ಉಡುಪಿ : ಪಾಂಚಜನ್ಯ ಊದಲು ಪ್ರಧಾನಿ ಮೋದಿ ಬರ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದರು. ಉಡುಪಿಯಲ್ಲಿ ಮಾತನಾಡಿದ ಸುನಿಲ್ ಕುಮಾರ್ ಅವರು, ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಉತ್ಸಾಹದ ಸಿದ್ಧತೆ ನಡೆದಿದೆ. ರೋಡ್ ಶೋ ಜಾಗದಲ್ಲಿ ಜನ ಜಮಾಯಿಸಲಿದ್ದಾರೆ.
ರಾಮಮಂದಿರದಲ್ಲಿ ರಾಮಧ್ವಜವನ್ನು ಮೋದಿ ಹಾರಿಸಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ಮೋದಿ ಪಾಂಚಜನ್ಯ ಊದಲಿದ್ದಾರೆ. ಭಗವದ್ಗೀತೆ ಸಮಾವೇಶ ದೇಶದಲ್ಲಿ ಸಾಂಸ್ಕೃತಿಕ, ಧಾರ್ಮಿಕ ವಾತಾವರಣ ನಿರ್ಮಾಣ ಮಾಡಲಿದೆ. ರಾಜ್ಯಪಾಲರಾದ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರು ಮತ್ತು ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕದನ ಕುರಿತು ಮಾತನಾಡಿ, ರಾಜ್ಯದಲ್ಲಿ ಎರಡು ತಿಂಗಳಿಂದ ಆಡಳಿತ ನಡೆಯುತ್ತಿಲ್ಲ. ಶಾಸನ ಇಲ್ಲದ ದುಶ್ಯಾಸನ ಆಡಳಿತ ನಡೆಯುತ್ತಿದೆ. ಶೇ.90 ರಷ್ಟು ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಮುಖ್ಯಮಂತ್ರಿ ಮೈಸೂರಿಗೆ, ಡಿಸಿಎಂ ಡೆಲ್ಲಿಗೆ ಸೀಮಿತರಾಗಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸುತ್ತೇವೆ. ಈ ಸರ್ಕಾರ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡಿದೆ. ಸಿಎಂ, ಡಿಸಿಎಂ, ಸಚಿವರು, ಶಾಸಕರ ನಡುವೆ ವಿಶ್ವಾಸವಿಲ್ಲ. ಸದನದಲ್ಲಿ ನಾವು ವಿಶ್ವಾಸ ಮತವನ್ನು ಯಾಚಿಸುತ್ತೇವೆ ಎಂದರು.
ಎನ್ಡಿಎ ಒಕ್ಕೂಟದಲ್ಲೂ ಕೂಡ ಈ ಬಗ್ಗೆ ಮಾತುಕತೆ ಮಾಡುತ್ತೇವೆ. ರಾಜ್ಯದ ಹಿತ ಮರೆತಿರುವ ಸರ್ಕಾರವನ್ನು ಬಯಲಿಗೆಳೆಯುತ್ತೇವೆ. ಜಾತಿ, ಸಮಾಜವನ್ನು ಕಾಂಗ್ರೆಸ್ ಒಡೆದಿದೆ. ಕುರ್ಚಿಯನ್ನು ಉಳಿಸಿಕೊಳ್ಳಲು ಸ್ವಾಮೀಜಿಗಳ ಬಾಯಲ್ಲಿ ಹೇಳಿಕೆ ಕೊಡಿಸುತ್ತಿದ್ದಾರೆ. ಗೊಂದಲದ ವಾತಾವರಣವನ್ನು ಸಿಎಂ, ಡಿಸಿಎಂ ಸೃಷ್ಟಿ ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ, ದಲಿತ ನಾಯಕ ಖರ್ಗೆಯನ್ನು ಕಡೆಗಣಿಸಲಾಗಿದೆ. ರಾಷ್ಟ್ರೀಯ ಅಧ್ಯಕ್ಷರೇ ಹೈಕಮಾಂಡ್ ಎನ್ನುತ್ತಾರೆ.
ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಮಾಡಲು ಮುಂದಾಗಲ್ಲ. ಕಾಂಗ್ರೆಸ್ ತನ್ನ ಭಾರದಿಂದಲೇ ಕುಸಿದು ಬೀಳಲೆಂದು ಕಾದು ನೋಡುತ್ತಿದ್ದೇವೆ. ಡಿಸಿಎಂ ಜೊತೆ 140 ಜನ ಎಲ್ಲಿದ್ದಾರೆ? ರಾಹುಲ್ ಗಾಂಧಿ, ಸಿಎಂ ಅವರ ಜೊತೆಯಲ್ಲಿ ಇಲ್ಲ. ಲಾಬಿ, ರಂಪಾಟ, ಡೆಲ್ಲಿ ಟೂರ್ಗೆ ಏನು ಕಾರಣ ಎಂದು ಪ್ರಶ್ನಿಸಿದ್ದಾರೆ.














