ಪ್ರಯಾಗರಾಜ್: ಇಲ್ಲಿನ ಮಹಾ ಕುಂಭಮೇಳದಲ್ಲಿ ಭಕ್ತರಿಗೆ ಸಮುದಾಯ ಭೋಜನಕ್ಕಾಗಿ ತಯಾರಿಸಲಾಗುತ್ತಿದ್ದ ಆಹಾರದಲ್ಲಿ ಬೂದಿ ಬೆರೆಸಿದ ವಿಡಿಯೊ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯೊಬ್ಬರನ್ನು ಗುರುವಾರ ಅಮಾನತು ಮಾಡಲಾಗಿದೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಸೊರನ್ನ ಠಾಣಾಧಿಕಾರಿ (ಎಸ್ಎಚ್ಒ) ಬ್ರಿಜೇಶ್ ಕುಮಾರ್ ತಿವಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ (ಗಂಗಾ ನಗರ) ಕುಲದೀಪ್ ಸಿಂಗ್ ಗುಣವತ್ ಹೇಳಿದ್ದಾರೆ.
ಒಲೆಯ ಮೇಲೆ ತಯಾರಿಸಲಾಗುತ್ತಿದ್ದ ಆಹಾರಕ್ಕೆ ಪೊಲೀಸ್ ಅಧಿಕಾರಿಯು ಬೂದಿಯನ್ನು ಸೇರಿಸುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್ನಲ್ಲಿ ಡಿಸಿಪಿ ಗಂಗಾ ನಗರ ಅವರ ಖಾತೆಗೆ ವಿಡಿಯೊವನ್ನು ಟ್ಯಾಗ್ ಮಾಡುವ ಮೂಲಕ ಪೋಸ್ಟ್ ಮಾಡಿದ್ದರು. ಈ ನಾಚಿಕೆಗೇಡಿನ ಕೃತ್ಯಕ್ಕಾಗಿ ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.
ಈ ಸಂಬಂಧ ಕ್ರಮ ಕೈಗೊಂಡು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಡಿಸಿಪಿ, ಎಸಿಪಿ ವರದಿ ಆಧರಿಸಿ ಅಧಿಕಾರಿಯನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ವಿಡಿಯೊವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರು ಇದನ್ನು ಗಮನಿಸುವಂತೆ ಒತ್ತಾಯಿಸಿದ್ದಾರೆ.