ಮೈಸೂರು (Mysuru)- ಜಾತಿ ಬಲ, ಹಣ ಬಲ, ಗೂಂಡಾ ಬಲ ಹಾಗೂ ತೋಳು ಬಲದಿಂದ ನಾವು ರಾಜಕೀಯ ಮಾಡಲ್ಲ. ಕೇವಲ ಅಭಿವೃದ್ಧಿ ಮಾತ್ರ ನಮ್ಮ ಉದ್ದೇಶ ಎಂದು ನಿವೃತ್ತ ಪೋಲಿಸ್ ಅಧಿಕಾರಿ, ಆಮ್ ಆದ್ಮಿ ಪಾರ್ಟಿ ಮುಖಂಡ ಭಾಸ್ಕರ್ ರಾವ್ (Bhaskar Rao) ಹೇಳಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನ ಸಾಮಾನ್ಯರು ರಾಜಕೀಯದ ಬಗ್ಗೆ ಭಯ ಬಿಡಬೇಕು. ರಾಜಕೀಯ ಮಾಡಲು ಜಾತಿ, ಧರ್ಮ, ಹಣ ಬೇಕಿಲ್ಲ. ನಾವು ನಿಮಗೆ ರಾಜಕೀಯ ವೇದಿಕೆ ಕೊಡಲು ನಾವು ಸಿದ್ದರಿದ್ದೇವೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವವ ಒಬ್ಬ ವ್ಯಕ್ತಿ ಪಂಜಾಬ್ ನಲ್ಲಿ ಗೆದ್ದು ಬರ್ತಾನೆ. ಎಲ್ಲಾ ರಾಜಕೀಯ ಪಕ್ಷಗಳು ಅವರ ಕುಟುಂಬದ ಸದಸ್ಯರು ಮಾತ್ರ ಇರಬೇಕು ಎಂದು ಗೂಟ ಹಾಕೊಂಡು ಕುಳಿತಿದ್ದಾರೆ. ಆದ್ರೆ ಆಮ್ ಆದ್ಮಿ ಪಕ್ಷ ಯುವಕರಿಗೆ ಅವಕಾಶ ನೀಡಲಿದೆ ಎಂದರು.
ಕೇವಲ ಅಭಿವೃದ್ಧಿ ಮಾತ್ರ ನಮ್ಮ ಉದ್ದೇಶ ಅಷ್ಟೇ. ಭ್ರಷ್ಟಾಚಾರವನ್ನ ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಜಾತಿ, ಪಾರಂಪರಿಕ ರಾಜಕೀಯ ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕ ವಕೀಲರು ವೈದ್ಯರು, ಇತರ ಉದ್ಯೋಗಿಗಳು. ಯುವಕರು, ಪತ್ರಕರ್ತರ ಕೂಡ ನಮ್ಮ ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ. ನಮ್ಮ ಪಕ್ಷ ಅವರಿಗೆ ಆಹ್ವಾನ ನೀಡುತ್ತಿದೆ. ಆವರು ಬರಲು ಆಸಕ್ತಿ ತೋರಿದ್ದಾರೆ. ಕೇಜ್ರಿವಾಲ್ ಸರ್ಕಾರ ಬಿಟ್ಟಿ ಕೊಟ್ಟು ಜನರನ್ನ ಸೋಮಾರಿ ಮಾಡ್ತಿದೆ ಅನ್ನೊ ಆರೋಪ ಇದೆ. ಆದರೆ ಯಾವುದನ್ನು ಬಿಟ್ಟಿ ಕೊಟ್ಟಿಲ್ಲ. ಜನರ ಟ್ಯಾಕ್ಸ್ ಹಣ ಯಾರಿಗೆ ತಲುಪಬೇಕು ಅವರಿಗೆ ಕೊಡುತ್ತಿದ್ದೇವೆ ಎಂದರು.
ನಾವು ದೆಹಲಿ ಕೊಡ್ತಾ ಇರುವ ಸೌಲಭ್ಯ ಸಾಲ ಮಾಡಿಕೊಡುತ್ತಿಲ್ಲ. ಕಾಮಗಾರಿಗಳಲ್ಲಿ ಹಣ ಉಳಿತಾಯ ಮಾಡ್ತಾ ಇದ್ದೇವೆ. ಭ್ರಷ್ಟಾಚಾರ ಮಕ್ತ ಮಾಡಿ 0 % ಸರ್ಕಾರ ಮಾಡ್ತಾ ಇರೋದ್ರಿಂದ ಇದೆಲ್ಲ ಆಗುತ್ತಿದೆ. ದೆಹಲಿಯ ಮುಖ್ಯಮಂತ್ರಿ ಯಾವುದೇ ವಿದೇಶಕ್ಕೆ ಹೋಗುತ್ತಿಲ್ಲ. ಬದಲಾಗಿ ಶಿಕ್ಷಕರನ್ನ ವಿದೇಶಕ್ಕೆ ಕಳುಹಿಸಿ ಅಲ್ಲಿನ ಪದ್ದತಿ ಅಳವಡಿಕೊಳ್ಳುತ್ತಿದೆ. ದೆಹಲಿಯಲ್ಲಿ ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆ ಸೇರುತ್ತಿದ್ದಾರೆ. ಪಂಜಾಬ್ ದೆಹಲಿ ಮಾದರಿಯಲ್ಲೇ ಸರ್ಕಾರ ಮಾಡಬೇಕು ಎಂಬುದು ನಮ್ಮ ಉದ್ದೇಶ. ಹಣದ ಸೋರಿಕೆ ಯಶಸ್ವಿಯಾಗಿ ತಡೆಗಟ್ಟಿದ್ದರೆ ಇದು ಸಾಧ್ಯ. ಸ್ಟ್ರಾಂಗ್ ಗುಡ್, ಕ್ಲೀನ್ ಅಡ್ಮಿನಿಸ್ಟ್ರೇಶನ್ ಕೇಳುವುದು ಮೂಲಭೂತ ಹಕ್ಕು. ಸಾಕಷ್ಟು ಜನರು ನಮ್ಮ ಸರ್ಕಾರ ಬಗ್ಗೆ ಉತ್ಸಾಹ ತೋರಿದ್ದಾರೆ. ಭ್ರಷ್ಟಾಚಾರ ಸರ್ಕಾರ ನೋಡಿ ಜನರಿಗೆ ಜಿಗುಪ್ಸೆ ಆಗಿದೆ ಎಂದು ಹೇಳಿದರು.
32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಈಗ ಆಮ್ ಆದ್ಮಿ ಪಾರ್ಟಿ ಸೇರಿದ್ದೇನೆ. ಬೆಳೆಯುತ್ತಿರುವ ಪಕ್ಷ ಸೇರಿಕೊಂಡು ಭ್ರಷ್ಟಾಚಾರ ರಹಿತ ಆಡಳಿತ ಸಿಗಬೇಕು. ಹೊಸಬರು ಯುವಕರು ರಾಜಕೀಯಕ್ಕೆ ಬರಬೇಕು ಅಂತ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದೇನೆ ಎಂದು ಹೇಳಿದರು.
ದಕ್ಷಿಣ ಪದವೀದರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ಪ್ರಸನ್ನ ಅವರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡುತ್ತಿದೆ. ಚಳವಳಿ ಹಿನ್ನೆಲೆಯುಳ್ಳ ವ್ಯಕ್ತಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಸನ್ನ ಅವರಿಗೆ ಬೆಂಬಲ ನೀಡಿದ್ದೇವೆ. ಉತ್ತಮ ಕೆಲಸ ಮಾಡುವವರಿಗೆ ನಮ್ಮ ಬೆಂಬಲ ಸದಾ ಇರುತ್ತೆ. ಪ್ರಸನ್ನ ಕುಮಾರ್ ಗೆಲುವಿಗೆ ನಮ್ಮ ಪಕ್ಷ ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ. ಪ್ರಸನ್ನ ಕುಮಾರ್ ಅವರು ಹೊಸ ಮುಖ. ಅಂತಹ ರೈತರಿಗೆ ಅಧಿಕಾರ ಸಿಗಬೇಕು ಎಂದರು.
ಪಿಎಸ್ ಐ ಪರೀಕ್ಷಾ ಅಕ್ರಮ ವಿಚಾರ ಕುರಿತು ಮಾತನಾಡಿದ ಭಾಸ್ಕರ್ ರಾವ್, ನಾನು ಕಮಿಷನರ್ ಆದ ಸಂದರ್ಭದಲ್ಲಿ ಈ ಅಕ್ರಮದ ವಾಸನೆ ಬಂದಿತ್ತು. ಒಬ್ಬ ಕಿರಿಯ ಅಧಿಕಾರಿಯನ್ನು ನೇಮಕಾತಿ ವಿಭಾಗದಲ್ಲಿ ಕಮಿಷನರ್ ಮಾಡಬೇಕು ಅಂದಾಗ ನನಗೆ ಅನುಮಾನ ಬಂದಿತ್ತು. ನನಗಿಂತ ಕಿರಿಯ ಅಧಿಕಾರಿಯನ್ನು ನೇಮಕ ಮಾಡಲು ಮುಂದಾದಾಗ ಈ ಅನುಮಾನ ಬಂದಿತ್ತು. ತಮ್ಮ ರಾಜಕೀಯ ಹಿತಾಸಕ್ತಿಗೆ ಹೀಗೆ ಮಾಡುತ್ತಿದ್ದರು ಎಂದು ಈಗ ಅನಿಸುತ್ತಿದೆ ಎಂದು ತಿಳಿಸಿದರು.