ಮನೆ ರಾಜಕೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆಯಲಾಗುವುದು: ಗೃಹ ಸಚಿವ ಜಿ ಪರಮೇಶ್ವರ್

ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆಯಲಾಗುವುದು: ಗೃಹ ಸಚಿವ ಜಿ ಪರಮೇಶ್ವರ್

0

ಬೆಂಗಳೂರು: ನಾಳೆ ಸಂಸದ ಪ್ರಜ್ವಲ್ ರೇವಣ್ಣ ಬರುತ್ತಾರೆ ಎನ್ನುವ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಎಸ್​ಐಟಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ವಿಮಾನ ನಿಲ್ದಾಣದಲ್ಲಿಯೇ ಅವರನ್ನು ವಶಕ್ಕೆ ಪಡೆಯಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ದೇಶಕ್ಕೆ ಹೋಗಿ ಸುಲಭವಾಗಿ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಆ ರೀತಿ ಮಾಡಲು ಬರುವುದಿಲ್ಲ. ಹೊರ ದೇಶದಲ್ಲಿ ಬಂಧನ ಎಂಬುದು ನೆಲಮಂಗಲಕ್ಕೆ ಹೋಗಿ ಬಂಧನ ಮಾಡಿದಷ್ಟು ಸುಲಭವಲ್ಲ. ಕೇಂದ್ರ ಕೂಡ ಬೇರೆ ದೇಶದಲ್ಲಿ ಬಂಧಿಸುವ ಅಧಿಕಾರ ಹೊಂದಿಲ್ಲ. ಇದೇ ಕಾರಣಕ್ಕೆ ಇಂಟರ್​ಪೋಲ್​ ಇದೆ. ಅವರು ಬರುವುದಾಗಿ ಈಗಾಗಲೇ ವಿಡಿಯೋದಲ್ಲಿ ತಿಳಿಸಿದ್ದಾರೆ. ಅವರು ಬಂದರೆ ಎಲ್ಲಾ ಕಾನೂನು ಪ್ರಕ್ರಿಯೆ ಆರಂಭ ಆಗಲಿದೆ ಎಂದರು.

ಈಗಾಗಲೇ ಪ್ರಜ್ವಲ್​ ಬಂಧನಕ್ಕೆ ವಾರೆಂಟ್​ ಜಾರಿಯಾಗಿದೆ. ಈ ಹಿನ್ನೆಲೆ ಅವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧನವಾಗಬೇಕು. ಅವರ ಪಾಸ್​ ಪೋರ್ಟ್​ ರದ್ದತಿಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು, ಕೇಂದ್ರ ಕಾನೂನು ಪ್ರಕ್ರಿಯೆ ಅನುಸಾರ ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಕೇಂದ್ರ ಕೂಡ ಈಗಾಗಲೇ ತಿಳಿಸಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಇದೇ ವೇಳೆ ಪ್ರಜ್ವಲ್​ ಬಂಧನ ಚುನಾವಣೆ ಮೇಲೆ ಪರಿಣಾಮ ಬೀರಲಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ತಿಳಿದಿಲ್ಲ. ಆದರೆ, ಎಲ್ಲಾ ಕಾನೂನು ಪ್ರಕಾರ ಕ್ರಮ ನಡೆಸಲಾಗುವುದು ಎಂದರು.

ಡೆತ್​ನೋಟ್​ ಸತ್ಯಾಸತ್ಯತೆ ಪರಿಶೀಲನೆ: ವಾಲ್ಮೀಕಿ ನಿಗಮದ ಅವ್ಯವಹಾರ ಕುರಿತ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್​, ಪ್ರಕರಣ ಕುರಿತು ಸಿಐಡಿ ತನಿಖೆಗೆ ಆದೇಶವಾಗಿದೆ. ತನಿಖೆ ಬಳಿಕ ಎಲ್ಲ ಗೊತ್ತಾಗುತ್ತೆ. ಹಣ ವರ್ಗಾವಣೆಯಲ್ಲಿ ನಾಲ್ಕೈದು ಅಕೌಂಟ್​​ಗೆ ಹೋಗಿದೆ. ತನಿಖೆ ಆಗುವರೆಗೂ ಏನೂ ಹೇಳಲು ಆಗಲ್ಲ. ನಿನ್ನೆ 185 ಕೋಟಿ ರೂಪಾಯಿ ಅಂತ ಹೇಳಿದ್ರೆ. 97 ಕೋಟಿ‌ ಅಂತ ಇವತ್ತು ಹೇಳುತ್ತಿದ್ದಾರೆ. ಎಲ್ಲವೂ ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ತಿಳಿಸಿದರು.

ಸಚಿವರ ತಲೆದಂಡಕ್ಕೆ ಬಿಜೆಪಿ ಪಟ್ಟು ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಇದಕ್ಕೆ ಪುರಾವೆ ಬೇಕು. ಡೆತ್​​ನೋಟ್ ನಲ್ಲಿ ಸಚಿವರು ಮೌಖಿಕ ಆದೇಶ ಕೊಟ್ಟಿದ್ದಾರೆ ಅಂತ‌ ಬರೆದಿದ್ದಾರೆ. ನಾನು ಡೆತ್ ನೋಟ್ ನೋಡಿಲ್ಲ. ಡೆತ್ ನೋಟ್ ಪರಿಶೀಲನೆ ಆಗುವರೆಗೆ ಸ್ಪಷ್ಟವಾಗಿ ಹೇಳಲು ಬರಲ್ಲ. ಡೆತ್ ನೋಟ್ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಮುಂದಕ್ಕೆ ಹೋಗುತ್ತೇವೆ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಅಂದಿನ ಸಚಿವ ಈಶ್ವರಪ್ಪ ರಾಜೀನಾಮೆ ವಿಚಾರವನ್ನು ಇದಕ್ಕೆ ಹೋಲಿಕೆ ಮಾಡಬೇಡಿ. ಆ ಪ್ರಕರಣದಲ್ಲಿ ಈಶ್ವರಪ್ಪ ಹೆಸರಿತ್ತು. ಇಲ್ಲಿ ಆ ರೀತಿ ಆಗಿಲ್ಲ. ತನಿಖೆ ಆಗುವವರೆಗೆ ಕಾಯಬೇಕು. ಅವರು ಮಾಡಿದರು ಎಂದು ನಾವು ಮಾಡಿದರೆ ಅದು ಸರಿಯಾಗಲ್ಲ ಎಂದು ಪರಮೇಶ್ವರ್ ಸಮಜಾಯಿಷಿ ನೀಡಿದರು.

ವಿಧಾನ ಪರಿಷತ್ ಟಿಕೆಟ್ ಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ದೆಹಲಿಯಲ್ಲಿ ಆಯ್ಕೆ ನಡೆಯುತ್ತಿದೆ. ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದರು.