ಮನೆ ಸುದ್ದಿ ಜಾಲ ಗಣರಾಜ್ಯೋತ್ಸವ ಪೆರೇಡ್: ರಾಜ್ಯದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ

ಗಣರಾಜ್ಯೋತ್ಸವ ಪೆರೇಡ್: ರಾಜ್ಯದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ

0

ನವದೆಹಲಿ: ಇಂಡಿಯಾ ಗೇಟ್‌ನಿಂದ ರಾಜಪಥದಲ್ಲಿ ಜನವರಿ 26ರಂದು ನಡೆದಿದ್ದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ರಾಜ್ಯದ ಸ್ತಬ್ಧಚಿತ್ರಕ್ಕೆ ಅತ್ಯುತ್ತಮ ಸ್ತಬ್ಧಚಿತ್ರ ವಿಭಾಗದಲ್ಲಿ ದ್ವಿತೀಯ ಸ್ಥಾನ ದೊರೆತಿದೆ.

ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ತಜ್ಞರ ಸಮಿತಿ ಶುಕ್ರವಾರ ಪ್ರಶಸ್ತಿ ಘೋಷಿಸಿದ್ದು, ರಾಜ್ಯದ ಸ್ತಬ್ಧಚಿತ್ರವು ಕರಕುಶಲ ಕಲೆಯ ವೈಭವವನ್ನು ಬಿಂಬಿಸಿ ಗಮನ ಸೆಳೆದಿತ್ತು.ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಕಾರಿಡಾರ್ ಕುರಿತ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದಿದ್ದು, ಮೇಘಾಲಯದ ಮಹಿಳೆಯರ ಸಹಕಾರ ಸಂಘ ಹಾಗೂ ರಾಜ್ಯದ ಸುವರ್ಣ ಮಹೋತ್ಸವ ಸಂಭ್ರಮ ಬಿಂಬಿಸುವ ಸ್ತಬ್ಧಚಿತ್ರ ತೃತೀಯ ಸ್ಥಾನಕ್ಕೆ ಪಾತ್ರವಾಗಿದೆ.

‘ವಂದೇ ಭಾರತಮ್’ ನೃತ್ಯ ತಂಡವು ವಿಶೇಷ‌ ಬಹುಮಾನ ಪಡೆದಿದೆ. ಹುಬ್ಬಳ್ಳಿಯ ಮಯೂರ ಭರತ ನೃತ್ಯ ಅಕಾಡೆಮಿಯ ನೃತ್ಯಪಟುಗಳು ಈ ತಂಡದಲ್ಲಿ ಭಾಗವಹಿಸಿದ್ದರು. ಕೇಂದ್ರದ ವಿವಿಧ ಇಲಾಖೆಗಳ ವಿಭಾಗದಲ್ಲಿ ಶಿಕ್ಷಣ ಹಾಗೂ ನಾಗರಿಕ ವಿಮಾನಯಾನ ಸಚಿವಸಲಯಗಳ ಸ್ತಬ್ಧಚಿತ್ರಗಳು ವಿಶೇಷ ಬಹುಮಾನ ಪಡೆದಿವೆ. ಪಥ ಸಂಚಲನದಲ್ಲಿ ಭಾಗವಹಿಸಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಹಾಗೂ ನೌಕಾದಳದ ಸಿಬ್ಬಂದಿಗೆ ವಿಶೇಷ‌ ಬಹುಮಾನ ನೀಡಲಾಗಿದೆ. ಕೇಂದ್ರದ ಲೋಕೋಪಯೋಗಿ ಇಲಾಖೆಯ ಸುಭಾಷ್-125 ಸ್ತಬ್ಧಚಿತ್ರಕ್ಕೂ ವಿಶೇಷ ಬಹುಮಾನ ನೀಡಲಾಗಿದೆ.