ಚಿಕ್ಕಮಗಳೂರು: ಕಳೆದ 3 ವರ್ಷದಿಂದ ಅತಿವೃಷ್ಟಿಯಿಂದಾಗಿ ಕುಸಿದಿದ್ದ ಗುಡ್ಡ, ರಸ್ತೆಗಳು ಇನ್ನೂ ಸಹಜ ಸ್ಥಿತಿಗೆ ತಲುಪಿಲ್ಲ. ಇಂತಹ ಸ್ಥಿತಿಯಲ್ಲಿ ಶಿರಾಡಿಯಲ್ಲಿ ಸಾಗುವ ವಾಹನಗಳು ಚಾರ್ಮಾಡಿ ರಸ್ತೆಯಲ್ಲಿ ಸಂಚರಿಸಿದರೆ, 3ರಿಂದ 4 ಪಟ್ಟು ವಾಹನ ಸಂಚಾರ ಅಧಿಕಗೊಳ್ಳುತ್ತದೆ. ಇದರಿಂದ ಚಾರ್ಮಡಿ ಘಾಟ್ ಪ್ರದೇಶ ಇನ್ನಷ್ಟು ಅಪಾಯಕ್ಕೆ ತಲುಪುವ ಸಾಧ್ಯತೆಯಿದೆ.
ಕಾರಣ 2 ದಶಕದಿಂದ ಬೆಂಗಳೂರು ನಗರದಿಂದ ಕರಾವಳಿ ಪಟ್ಟಣ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಡಿ ಘಾಟ್ ರಸ್ತೆ ಕಾಮಗಾರಿ ನಡೆಸಲು 6 ತಿಂಗಳು ಬಂದ್ ಮಾಡಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ತಲುಪಲು ಅತಿ ಸೂಕ್ಷ್ಮ ಪ್ರದೇಶವಾಗಿರುವ ಚಾರ್ಮಾಡಿ ಘಾಟ್ ರಸ್ತೆವೊಂದೇ ಬದಲಿ ಮಾರ್ಗ.
ಈಗಾಗಲೇ ಅತೀವೃಷ್ಟಿ ಹಾಗೂ ಘನ ವಾಹನಗಳ ಸಂಚಾರದಿಂದಾಗಿ ಚಾರ್ಮಾಡಿ ಘಾಟ್ ರಸ್ತೆ ಸೇರಿದಂತೆ ಘಾಟ್ ತಪ್ಪಲಲ್ಲಿರುವ ಆಲೆಖಾನ್, ಯಡಿಯೂರು, ಮಲೆಮನೆ, ದುರ್ಗದಹಳ್ಳಿ ಭಾಗದಲ್ಲಿ ಸಂಪೂರ್ಣ ಭೂ ಕುಸಿತ ಉಂಟಾಗಿ ಸಾವಿರಾರು ಎಕರೆ ಅರಣ್ಯ ನಾಶವಾಗಿದೆ. ಇಲ್ಲಿ ರಸ್ತೆ ಕುಸಿದರೆ ದುರಸ್ತಿ ಪಡಿಸಲು ಸುಲಭದ ಮಾತಲ್ಲವೆಂಬುದು ತಜ್ಞರು ತಿಳಿಯದ ವಿಚಾರವೇನಲ್ಲ. ಈಗಲೂ ಬಹುತೇಕ ಕಡೆ ಸಣ್ಣ ವಾಹನ ಸಂಚರಿಸುವುದೇ ಕಷ್ಟವಾಗಿದೆ. ತಿರುವುಗಳಲ್ಲಿ ಸರಿಯಾದ ಕೆಲಸವಾಗಿಲ್ಲ. ಈ ಸಂದರ್ಭದಲ್ಲಿ ಶಿರಾಡಿಯಲ್ಲಿ ಚಲಿಸುವ ವಾಹನಗಳು ಚಾರ್ಮಾಡಿಗೆ ಬಂದರೆ ಮತ್ತೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಘನ ವಾಹನಗಳ ಸಂಚಾರ ಹಾಗೂ ಮಳೆಗಾಲದಲ್ಲಿ ಅತಿವೃಷ್ಟಿ ಉಂಟಾದರೆ ಪುನಃ ಗುಡ್ಡ, ರಸ್ತೆ ಕುಸಿತಗೊಂಡು ಚಾರ್ಮಾಡಿ ಪ್ರದೇಶ ನಾಶವಾಗುವುದಲ್ಲದೇ ಕರಾವಳಿಯ ಸಂಪರ್ಕವೇ ಕಡಿತಗೊಳ್ಳಲಿದೆ.
ಹಿಂದೆ ಶಿರಾಡಿ ಘಾಟ್ ರಸ್ತೆ ಕಾಮಗಾರಿಗೆ 6 ತಿಂಗಳು ಬಂದ್ ಮಾಡುವುದಾಗಿ ಹೇಳಿ ಸುಮಾರು ಒಂದೂವರೆ ವರ್ಷ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಇರುವೆಗಳ ರೀತಿಯಲ್ಲಿ ವಾಹನ ಸಂಚಾರವಾಗುತ್ತಿದ್ದ ದೃಶ್ಯಗಳು ಈಗಲೂ ಜನರ ಕಣ್ಣ ಮುಂದಿದೆ. ಅನೇಕ ಬಾರಿ ಸುಮಾರು 25 ಕಿ.ಮೀ. ಟ್ರಾಫಿಕ್ ಜಾಮ್ ಅಗಿ ವಾಹನ ಸವಾರರು ಊಟವಿಲ್ಲದೆ ರಾತ್ರಿಯೆಲ್ಲಾ ರಸ್ತೆಯಲ್ಲಿ ಕಾಲ ಕಳೆದಿದ್ದಿದೆ. ಎಷ್ಟೋ ಬಾರಿ ಆಂಬ್ಯುಲೆನ್ಸ್ಗಳು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಮದ್ಯದಲ್ಲೇ ಸಿಕ್ಕಿ ಹಾಕಿಕೊಂಡ ಘಟನೆಗಳು ನಡೆದಿವೆ.