ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿ ನಿರ್ಣಾಯಕ ಘಟ್ಟಕ್ಕೆ ಹತ್ತಿರವಾಗುತ್ತಿರುವಂತೆಯೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ನಾಯಕ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.
ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಫೀಲ್ಡಿಂಗ್ ವೇಳೆ ಕೆ.ಎಲ್ ರಾಹುಲ್ ಗಾಯಕ್ಕೆ ತುತ್ತಾಗಿದ್ದರು. ಆ ಪಂದ್ಯದಲ್ಲಿ ಫೀಲ್ಡಿಂಗ್ ಮಾಡದೆ ಹೊರಗುಳಿದ ಕೆ.ಎಲ್ ರಾಹುಲ್ ಕೊನೆಯ ಕ್ಷಣದಲ್ಲಿ ಬ್ಯಾಟಿಂಗ್’ಗೆ ಇಳಿದಿದ್ದರು.ಇದೀಗ ಕೆಎಲ್ ರಾಹುಲ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ.
ರಾಹುಲ್ ಅವರು ಲಕ್ನೋ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ವೀಕ್ಷಿಸಲಿದ್ದಾರೆ ಆದರೆ ಗುರುವಾರ ಮುಂಬೈಗೆ ತೆರಳಲಿದ್ದು, ಅಲ್ಲಿ ಅವರು ತಮ್ಮ ತೊಡೆಯ ಸ್ಕ್ಯಾನ್’ಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿ(ಎನ್’ಸಿಎ)ಯ ವೈದ್ಯಕೀಯ ತಂಡ ಕೆಎಲ್ ರಾಹುಲ್ ಅವರ ಫಿಟ್ನೆಸ್ ಪರೀಕ್ಷಿಸಲಿದ್ದು ಟೂರ್ನಿಯ ಉಳಿದ ಪಂದ್ಯಗಳಿಗೆ ರಾಹುಲ್ ಲಭ್ಯತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿ ಮಾಡಿದೆ. ಹೀಗಾಗಿ ಕೆ.ಎಲ್ ರಾಹುಲ್ ಟೂರ್ನಿಯ ಉಳಿದ ಪಂದ್ಯಗಳಿಗೆ ಲಭ್ಯವಾಗುವ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿಗಳು ಲಭ್ಯವಾಗಲಿದೆ.
ಕೃಣಾಲ್ ಪಾಂಡ್ಯಾಗೆ ಸಾರಥ್ಯ
ಇನ್ನು ರಾಹುಲ್ ಅನುಪಸ್ಥಿತಿಯಲ್ಲಿ ತಂಡದ ಮತ್ತೋರ್ವ ಹಿರಿಯ ಆಟಗಾರ ಕೃಣಾಲ್ ಪಾಂಡ್ಯಾಗೆ ತಂಡದ ಸಾರಥ್ಯ ನೀಡುವ ಸಾಧ್ಯತೆ ಇದೆ. ಅನುಭವಿ ಆಟಗಾರ ಕೆಎಲ್ ರಾಹುಲ್ ಅವರ ಅಲಭ್ಯತೆಯಲ್ಲಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಮುನ್ನಡೆಸಲಿದ್ದಾರೆ. ಕಳೆದ ಆರ್’ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಕೃನಾಲ್ ಮುನ್ನಡೆಸುವ ಜವಾಬ್ಧಾರಿ ವಹಿಸಿಕೊಂಡಿದ್ದರು.














