ಮನೆ ಸ್ಥಳೀಯ ಚಾಮುಂಡಿಗೆ ಉಡುಗೊರೆಯಾಗಿ ಬಂದ ಸೀರೆ ಕಾಳಸಂತೆಯಲ್ಲಿ ಮಾರಾಟ: ಸ್ನೇಹಮಯಿ ಕೃಷ್ಣ ದೂರು

ಚಾಮುಂಡಿಗೆ ಉಡುಗೊರೆಯಾಗಿ ಬಂದ ಸೀರೆ ಕಾಳಸಂತೆಯಲ್ಲಿ ಮಾರಾಟ: ಸ್ನೇಹಮಯಿ ಕೃಷ್ಣ ದೂರು

0

ಮೈಸೂರು: ದೇವಸ್ಥಾನಕ್ಕೆ ಭಕ್ತಿ, ಶ್ರದ್ಧೆಯಿಂದ ಆಗಮಿಸುವ ಭಕ್ತರು ಹಾಗೂ ಹರಕೆ ಹೊತ್ತ ಭಕ್ತರು ಚಾಮುಂಡೇಶ್ವರಿ ತಾಯಿಗೆ ಸೀರೆಯನ್ನು ನೀಡುತ್ತಾರೆ. ಆದರೆ ಅಧಿಕಾರಿಗಳ ಭ್ರಷ್ಟತನ ಎಷ್ಟರಮಟ್ಟಿಗೆ ಇದೆ ಎಂದರೆ ಆ ಸೀರೆಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಚಾಮುಂಡಿಗೆ ಉಡುಗೊರೆಯಾಗಿ ಬಂದ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಚಾಮುಂಡಿಬೆಟ್ಟದ ಕಾರ್ಯದರ್ಶಿ ರೂಪಾ ವಿರುದ್ಧ ಗಂಭೀರ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ವಿಡಿಯೋ ಸಮೇತ ಕೃಷ್ಣರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Join Our Whatsapp Group

ದೇವಿಗೆ ಉಡುಗೊರೆಯಾಗಿ ಬಂದ ಸೀರೆಗಳನ್ನು ಕಾರ್ಯದರ್ಶಿ ರೂಪಾ ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಯುವಕನೊಬ್ಬ ಕಾರಿಗೆ ಸೀರೆ ತುಂಬಿಸಿಕೊಂಡು ಹೋಗುವ ವಿಡಿಯೋ ಸಮೇತ ಕೆಆರ್ ಪೊಲೀಸ್ ಠಾಣೆಗೆ ಸ್ನೇಹಮಯಿ ಕೃಷ್ಣ ಇದೀಗ ದೂರು ನೀಡಿದ್ದಾರೆ.

ಸ್ನೇಹಮಯಿ ಕೃಷ್ಣ ದೂರಿನಲ್ಲೇನಿದೆ?

ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ನೀಡುವ ಲಕ್ಷಾಂತರ ಮತ್ತು ಸಾವಿರಾರು ರೂಪಾಯಿ ಮೌಲ್ಯದ ಸೀರೆಗಳನ್ನು ನೌಕರರ ಮೂಲಕ ಕಳ್ಳತನ ಮಾಡುತ್ತಿರುವ ದೇವಸ್ಥಾನದ ಕಾರ್ಯದರ್ಶಿ ರೂಪ ರವರು ಸದರಿ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಮಾರಾಟ ಮಾಡಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು, ಸರ್ಕಾರಕ್ಕೆ ವಂಚಿಸುವ ಮೂಲಕ ಅಪರಾಧಿಕ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ಇವರಿಗೆ ದೇವಸ್ಥಾನದ ಕೆಲವು ಅಧಿಕಾರಿ ಮತ್ತು ನೌಕರರು ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನನಗೆ ಇತ್ತೀಚೆಗೆ ದೊರೆತಿರುವ ಎರಡು ವಿಡಿಯೋಗಳನ್ನು “ಚಾಮುಂಡಿ ಬೆಟ್ಟ” ಎಂದು ಬರೆದಿರುವ ಸಿ.ಡಿ.ಯಲ್ಲಿ ಹಾಕಿ ಈ ದೂರರ್ಜಿಯೊಂದಿಗೆ ಲಗತ್ತಿಸಿರುತ್ತೇನೆ. ಆ ಎರಡು ವೀಡಿಯೋಗಳನ್ನು ವೀಕ್ಷಿಸಿದಾಗ, ಒಂದು ವಿಡಿಯೋದಲ್ಲಿ, ಹಸಿರು ಬಣ್ಣದ ಬಟ್ಟೆಯೊಂದರಲ್ಲಿ ಸೀರೆಗಳನ್ನು ತೆಗೆದುಕೊಂಡು ಬರುವ ಯುವಕನೋರ್ವ, ದೇವಸ್ಥಾನದ ಕಚೇರಿಗೆ ತೆಗೆದುಕೊಂಡು ಹೋಗುವುದು ಕಂಡು ಬರುತ್ತದೆ.

ಮತ್ತೊಂದು ವಿಡಿಯೋದಲ್ಲಿ ಸದರಿ ಹಸಿರು ಬಣ್ಣದ ಬಟ್ಟೆಯೊಂದರಲ್ಲಿರುವ ಸೀರೆಗಳನ್ನು ಕಚೇರಿಯಿಂದ ತೆಗೆದುಕೊಂಡು ಬರುವ ಯುವಕ ಅದನ್ನು ಕಾರ್ಯದರ್ಶಿಗಳ ಕಾರಿನ ಡಿಕ್ಕಿಯಲ್ಲಿ ಹಾಕುವುದು ಕಂಡು ಬರುತ್ತದೆ.

ಭಕ್ತರು ದೇವಸ್ಥಾನಕ್ಕೆ (ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ) ನೀಡಿದ ಸೀರೆಗಳು ಎಷ್ಟು? ಅವುಗಳ ಸಂಪೂರ್ಣ ಲೆಕ್ಕವನ್ನು ಸರ್ಕಾರಕ್ಕೆ ನೀಡಿರುತ್ತಾರೆಯೆ? ಎಂಬ ಅಂಶಗಳ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಭ್ರಷ್ಟ ಅಧಿಕಾರಿಗಳು ದೇವರ  ಸೀರೆಯನ್ನು ಬಿಡುವುದಿಲ್ಲ ಎಂದಾದರೆ, ದೇವಸ್ಥಾನದ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿಬರುತ್ತಿವೆ. ದೇವಸ್ಥಾನದ ಆಡಳಿತ ಮಂಡಳಿಯ  ಭ್ರಷ್ಟಾಚಾರದ ಇನಷ್ಟು ಹಗರಣಗಳನ್ನು ಸವಾಲ್ ಮಾಧ್ಯಮ ಸದ್ಯದಲ್ಲೇ ಬಯಲಾಗಿಸಲಿದೆ.