ಮನೆ ಶಿಕ್ಷಣ ಇಂದಿನಿಂದ ಎಸ್’ಎಸ್’ಎಲ್’​ಸಿ ಪರೀಕ್ಷೆ ಆರಂಭ: ಸಿಎಂ, ಶಿಕ್ಷಣ ಸಚಿವರಿಂದ ಶುಭ ಹಾರೈಕೆ

ಇಂದಿನಿಂದ ಎಸ್’ಎಸ್’ಎಲ್’​ಸಿ ಪರೀಕ್ಷೆ ಆರಂಭ: ಸಿಎಂ, ಶಿಕ್ಷಣ ಸಚಿವರಿಂದ ಶುಭ ಹಾರೈಕೆ

0

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಎಸ್’ಎಸ್’ಎಲ್’​ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಇಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, (ಎನ್‌’ಸಿಇಆರ್‌’ಟಿ), ಮತ್ತು ಸಂಸ್ಕೃತ ಪರೀಕ್ಷೆಗಳು ನಡೆಯಲಿದೆ.

ಪರೀಕ್ಷೆಗಳು ಒಂದೇ ಅವಧಿಯಲ್ಲಿ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ ಇರಲಿವೆ.

ಈ ಸಲ 7,94,611 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ಬರೆಯಲಿದ್ದಾರೆ. ಜೊತೆಗೆ 20,750 ಪುನರಾವರ್ತಿತ ವಿದ್ಯಾರ್ಥಿಗಳು, 18,272 ಖಾಸಗಿ ಅಭ್ಯರ್ಥಿಗಳು ಮತ್ತು 8,859 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ.

2010ಕ್ಕಿಂತ ಹಿಂದಿನ ಸಾಲಿನಿಂದ 301 ಪುನರಾವರ್ತಿತ ಅಭ್ಯರ್ಥಿಗಳು ಕೂಡ ಈ ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ ಪಡೆದಿದ್ದಾರೆ. 15 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 2010ರ ಮೊದಲು ಪರೀಕ್ಷೆಗೆ ನೋಂದಾಯಿಸಿಕೊಂಡವರಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಇಯರ್ ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಸಾಧನ ತರುವುದನ್ನು ನಿಷೇಧಿಸಲಾಗಿದೆ.

ಏಪ್ರಿಲ್ 4ರಂದು ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 6ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ, ಏಪ್ರಿಲ್ 8ರಂದು ಅರ್ಥಶಾಸ್ತ್ರ, ಏಪ್ರಿಲ್ 10ರಂದು ವಿಜ್ಞಾನ, ರಾಜ್ಯಶಾಸ್ತ್ರ, ಏಪ್ರಿಲ್ 12ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಏಪ್ರಿಲ್ 15ರಂದು ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.

ಸಿಎಂ, ಶಿಕ್ಷಣ ಸಚಿವರಿಂದ ಶುಭ ಹಾರೈಕೆ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಂಬಂಧ ಟ್ವೀಟ್ ಮಾಡಿದ್ದು, ‘ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ನನ್ನೆಲ್ಲ ಪ್ರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಯಾವುದೇ ರೀತಿಯ ಆತಂಕ ಹಾಗೂ ಗೊಂದಲಕ್ಕೆ ಒಳಗಾಗದೇ, ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ, ಸಮಾಧಾನ ಚಿತ್ತದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ’ ಎಂದು ಶುಭ ಕೋರಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಟ್ವೀಟ್ ಮಾಡಿ, ಎಸ್‌’ಎಸ್‌’ಎಲ್‌’ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು, ಆತ್ಮವಿಶ್ವಾಸ, ಧೈರ್ಯದಿಂದ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಉಚಿತ ಬಸ್​​ ಪ್ರಯಾಣ : ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್​ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗಿದೆ. 31-03-2023 ರಿಂದ 15-04-2023 ರವರೆಗೆ ನಡೆಯಲಿರುವ ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ, ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ತೆರಳಬಹುದು. ಹಾಗೆಯೇ ವಾಪಸ್ ಮರಳಬಹುದಾಗಿದೆ.

ಹಿಂದಿನ ಲೇಖನಮೈಸೂರಿನ ಜೆಎಸ್’ಎಸ್ ಮಹಾವಿದ್ಯಾಪೀಠದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಮೈಸೂರಿನ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ