ಮನೆ ರಾಜ್ಯ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ: ಸಚಿವ ಎನ್‌ ಎಸ್‌ ಭೋಸರಾಜು

ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ: ಸಚಿವ ಎನ್‌ ಎಸ್‌ ಭೋಸರಾಜು

0

ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರ 155 ನೇ ಜನ್ಮ ದಿನೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಡಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ “ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ಪ್ರಪಂಚದಲ್ಲಿ ಗಾಂಧಿಜಿ ಚಿಂತನೆಗಳ ಪ್ರಸ್ತುತತೆ” ಕುರಿತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಹೇಳಿದ್ದಾರೆ.

Join Our Whatsapp Group

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ರಾಜ್ಯದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುವದರ ಜೊತೆಯಲ್ಲೇ, ಗಾಂಧೀಜಿಯವರ ಜೀವನ, ಅವರ ಆದರ್ಶಗಳು ಹಾಗೂ ಚಿಂತನೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಜೊತೆಯಲ್ಲೇ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದಲೂ ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. “ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ಪ್ರಪಂಚದಲ್ಲಿ ಗಾಂಧಿಜಿ ಚಿಂತನೆಗಳ ಪ್ರಸ್ತುತತೆ” – “Relevance of Gandhian Thoughts in the science and Technology Driven World” ವಿಷಯದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಅಕ್ಟೋಬರ್ 22 ರಂದು ನಡೆಸುತ್ತಿದ್ದು, ರಾಜ್ಯ ಮಟ್ಟದ ಸ್ಪರ್ಧೆ ನವೆಂಬರ್ 06 ರಂದು ಏರ್ಪಡಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ ಆಕ್ಟೊಬರ್ 30 ರಂದು ಬಹುಮಾನ ವಿತರಿಸುತ್ತಿದ್ದು, ಈ ವಿಭಾಗದಲ್ಲಿ 3 ಸಾವಿರ ರೂ, 2 ಸಾವಿರ ರೂ ಮತ್ತು 1 ಸಾವಿರ ರೂ ನಗದು ಬಹುಮಾನ ವಿತರಿಸಲಾಗುವುದು.

ರಾಜ್ಯಮಟ್ಟದ ಪ್ರಶಸ್ತಿಯನ್ನು ನವೆಂಬರ್ 14 ರ ಮಕ್ಕಳ ದಿನಾಚರಣೆಯಂದು  ಪ್ರದಾನ ಮಾಡುತ್ತಿದ್ದು, ಮೊದಲ ಬಹುಮಾನವಾಗಿ 25 ಸಾವಿವ ರೂಪಾಯಿ, ದ್ವಿತೀಯ 15 ಸಾವಿರ ರೂ ಮತ್ತು ತೃತೀಯ ಬಹುಮಾನ 10 ಸಾವಿರ ರೂಪಾಯಿ ವಿತರಣೆ ಮಾಡಲಾಗುವುದು. ತಾಲ್ಲೂಕು ಮಟ್ಟದಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಪುಸ್ತಕಗಳನ್ನು ಬಹುಮಾನ ರೂಪವಾಗಿ ನೀಡಲಾಗುವುದು ಎಂದು ಸಚಿವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.