ಮೈಸೂರು: ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಅಡ್ಡಂಡ ಕಾರ್ಯಪ್ಪ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಮತ್ತು ಮೈಸೂರು ಜಿಲ್ಲಾ ಹಲವು ಸಂಘ ಸಂಸ್ಥೆಗಳ ಒಕ್ಕೂಟ ಪಾಲ್ಗೊಂಡಿದ್ದವು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಶ್ರೀ ನಿರ್ಮಲಾನಂದ ಮಹಾ ಸ್ವಾಮೀಜಿಯವರಿಗೆ ಇಡೀ ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಅಪಾರ ಭಕ್ತ ವೃಂದ ಸಮೂಹವೇ ಇದೆ. ಅವರು ಬರೀ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆದಿಚುಂಚನಗಿರಿ ಸಂಸ್ಥಾನ ಮಠ ಅನಾದಿಕಾಲದಿಂದಲೂ ಎಲ್ಲಾ ವರ್ಗದ ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ, ವಸತಿ ಆರೋಗ್ಯವನ್ನು ನೀಡುತ್ತಾ ಬಂದಿದೆ ಎಂದರು.
ಈ ಅಡ್ಡಂಡ ಕಾರ್ಯಪ್ಪ ರಂಗಾಯಣದ ನಿರ್ದೇಶಕನಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ, ಎಲ್ಲಾ ವರ್ಗದ, ಸಮುದಾಯದ ಧರ್ಮಗಳ ನಡುವೆ ವಿಷಬೀಜವನ್ನು ಬಿತ್ತಿ, ಧರ್ಮ ಧರ್ಮಗಳ ನಡುವೆ ಜಾತಿ ಮತಗಳ ನಡುವೆ ಸಮಾಜದಲ್ಲಿ ಸಂಘರ್ಷ ಉಂಟಾಗುವಂತೆ ಮಾಡುತ್ತಿದ್ದಾರೆ. ಹಾಗೂ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಈಗ ರಾಜ್ಯದಲ್ಲಿ ಒಂದು ಪ್ರಬಲ ಸಮುದಾಯವಾದಕ್ಕೆ ಸೇರಿದ ಜಗದ್ಗುರು ಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯ. ಇವರ ಈ ರೀತಿಯ ಹೇಳಿಕೆಗಳ ಮೇಲೆ ಸರ್ಕಾರ ಕಡಿವಾಣ ಹಾಕಬೇಕು ಇದನ್ನು ಸಮಾಜದ ಎಲ್ಲಾ ವರ್ಗದ ಜನರು ಖಂಡಿಸುತ್ತಿದ್ದೇವೆ ಎಂದರು.
ಸರ್ಕಾರ ಈ ಕೂಡಲೇ ಹಗುರವಾಗಿ ಜಗದ್ಗುರುಗಳ ಮೇಲೆ ಹೇಳಿಕೆಯನ್ನು ನೀಡಿರುವ ಗುರು ದ್ರೋಹಿ ಅಡ್ಡಂಡ ಕಾರ್ಯಪ್ಪ ರನ್ನು ಈ ಕೂಡಲೇ ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾ ಗೊಳಿಸಬೇಕು ಎಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ಈ ಪ್ರತಿಭಟನೆ ನೇತೃತ್ವವನ್ನು ರಾಜ್ಯ ಗೌರವಾಧ್ಯಕ್ಷರಾದ ಸಿ ಜಿ ಗಂಗಾಧರ್ ಹಾಗೂ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ, ಡಾ. ಮಂಜೇಗೌಡ, ಅನಿಲ್, ಗಿರೀಶ್ ಗೌಡ, ವಿಜಯನಗರ ಮಂಜು, ಹೇಮಾವತಿ, ನರಸಿಂಹೇಗೌಡ, ಸತೀಶ್ ಗೌಡ, ಕುಮಾರ್ ಗೌಡ, ರಾಜಕೀಯ ರವಿ, ದರ್ಶನ್ ಗೌಡ, ಆನಂದ್, ಶಿವಲಿಂಗಯ್ಯ, ಕೃಷ್ಣಯ್ಯ ಸಿ ಎಚ್, ಪ್ರಭಾಕರ ಉಪಸ್ಥಿತರಿದ್ದರು.














