ಮನೆ ರಾಜ್ಯ 18 ಬಿಜೆಪಿ ಶಾಸಕರ ಅಮಾನತು ವಾಪಸ್: ಸ್ಪೀಕರ್ ನೇತೃತ್ವದ ಸಭೆಯಲ್ಲಿ, ಸದನ ಪ್ರವೇಶಕ್ಕೆ ಹಸಿರು ನಿಶಾನೆ!

18 ಬಿಜೆಪಿ ಶಾಸಕರ ಅಮಾನತು ವಾಪಸ್: ಸ್ಪೀಕರ್ ನೇತೃತ್ವದ ಸಭೆಯಲ್ಲಿ, ಸದನ ಪ್ರವೇಶಕ್ಕೆ ಹಸಿರು ನಿಶಾನೆ!

0

ಬೆಂಗಳೂರು, ಮೇ 26: ಕಳೆದ ಅಧಿವೇಶನದಲ್ಲಿ ಅಮಾನತ್ತಾದ 18 ಬಿಜೆಪಿ ಶಾಸಕರಿಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದೆ. ಸ್ಪೀಕರ್ ಯು.ಟಿ ಖಾದರ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ. ವಿಧಾನಸೌಧದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್.ಕೆ ಪಾಟೀಲ್ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಉಪಸ್ಥಿತರಿದ್ದರು.

2024ರ ಮಾರ್ಚ್ 21 ರಂದು ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಮಾಡಿದ ಪ್ರತಿಭಟನೆ ವೇಳೆ ಸ್ಪೀಕರ್ ಪೀಠದ ಕಡೆಗೆ ಅಗೌರವ ತೋರಿದ ಆರೋಪದ ಮೇಲೆ, ಅವರಿಗೆ 6 ತಿಂಗಳ ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಈ ನಿರ್ಧಾರವನ್ನು ಖಂಡಿಸಿದ ಬಿಜೆಪಿ ಶಾಸಕರು ಸ್ಪೀಕರ್‌ಗೆ ಪತ್ರ ಬರೆದು, ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು ಮತ್ತು ನ್ಯಾಯಾಲಯದ ಮೆಟ್ಟಿಲು ಏರುವ ತಯಾರಿ ಕೂಡ ಮಾಡಿಕೊಂಡಿದ್ದರು.

ಬೃಹತ್ ಒತ್ತಡದ ನಡುವೆ, ಕಳೆದ ಕೆಲ ಸಚಿವ ಸಂಪುಟ ಸಭೆಗಳಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು, ಬಹುಮತದ ಆಧಾರದ ಮೇಲೆ ಅಮಾನತು ರದ್ದತಿ ಬಗ್ಗೆ ಒಲವು ವ್ಯಕ್ತವಾಯಿತು. ಇದೀಗ ಸ್ಪೀಕರ್ ಯು.ಟಿ. ಖಾದರ್ ತಮ್ಮ ವಿವೇಚನಾಧಿಕಾರ ಬಳಸಿ ಅಮಾನತು ಆದೇಶವನ್ನು ವಾಪಸ್ ಪಡೆದಿದ್ದಾರೆ. ಇಂದು ಅವರು ಹಜ್ ಯಾತ್ರೆಗೆ ತೆರಳುತ್ತಿರುವುದರಿಂದ, ಅದಕ್ಕೂ ಮುನ್ನ ಈ ನಿರ್ಧಾರ ಹೊರಬೀಳುವುದು ಮಹತ್ವದ್ದಾಗಿದೆ.

ಅಮಾನತ್ತಾದ ಶಾಸಕರ ಪಟ್ಟಿ:

  1. ಅಶ್ವಥ್ ನಾರಾಯಣ
  2. ಎಸ್.ಆರ್ ವಿಶ್ವನಾಥ್
  3. ಮುನಿರತ್ನ
  4. ಬೈರತಿ ಬಸವರಾಜು
  5. ಸುರೇಶ್ ಗೌಡ
  6. ಚನ್ನಬಸಪ್ಪ
  7. ಸಿ.ಕೆ. ರಾಮಮೂರ್ತಿ
  8. ಧೀರಜ್ ಮುನಿರಾಜು
  9. ಬಿ.ಪಿ. ಹರೀಶ್
  10. ಯಶ್ಪಾಲ್ ಸುವರ್ಣ
  11. ಭರತ್ ಶೆಟ್ಟಿ
  12. ಉಮಾನಾಥ್ ಕೋಟ್ಯಾನ್
  13. ಎಂ.ಆರ್ ಪಾಟೀಲ್
  14. ಶೈಲೇಂದ್ರ ಬೆಲ್ದಾಳೆ
  15. ಶರಣು ಸಲಗಾರ್
  16. ಬಸವರಾಜ ಮತ್ತಿಮೂಡ್
  17. ಚಂದ್ರು ಲಮಾಣಿ
  18. ದೊಡ್ಡನಗೌಡ ಪಾಟೀಲ್

ಅಮಾನತು ಅವಧಿಯಲ್ಲಿದ್ದ ನಿಷೇಧಗಳು:

  • ವಿಧಾನಸಭೆ ಸಭಾಂಗಣ, ಲಾಬಿ, ಗ್ಯಾಲರಿಗೆ ಪ್ರವೇಶ ನಿರ್ಬಂಧ
  • ಸಮಿತಿಗಳ ಸಭೆಗಳಲ್ಲಿ ಭಾಗವಹಿಸುವಂತಿರಲಿಲ್ಲ
  • ತಮ್ಮ ಹೆಸರಿನಲ್ಲಿ ಯಾವುದೇ ವಿಷಯ ಮಂಡನೆಗೆ ಅವಕಾಶವಿಲ್ಲ
  • ಸೂಚನೆಗಳ ಸ್ವೀಕಾರ ಇಲ್ಲ
  • ಸಮಿತಿಗಳ ಚುನಾವಣೆಯಲ್ಲಿ ಮತದಾನಕ್ಕೆ ತಡೆ
  • ದಿನ ಭತ್ಯೆ ಪಡೆಯಲು ಅರ್ಹತೆ ಇಲ್ಲ

ವಿಪಕ್ಷ ನಾಯಕ ಅಶೋಕ್ ಈ ನಿರ್ಣಯವನ್ನು ಸ್ವಾಗತಿಸುತ್ತಾ, “ನ್ಯಾಯಮಯವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಸದನದಲ್ಲಿ ನಮ್ಮ ಕರ್ತವ್ಯ ನಿರ್ವಹಿಸಲು ಇಂದಿನಿಂದಲೇ ತಯಾರಾಗಿದ್ದೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.