ಮುಂಬೈ: ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಏಕಾಏಕಿ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ, ಪ್ರಯಾಣಿಕರು ವಿಮಾನದೊಳಗೆ ಸುಮಾರು ಅರ್ಧ ಗಂಟೆಯ ಕಾಲ ತೀವ್ರ ಸೆಕೆ ಹಾಗೂ ಕತ್ತಲಲ್ಲಿ ಪರದಾಡಿದ ಘಟನೆ ನಡೆದಿದೆ. ಇಂಡಿಗೋ ಸಂಸ್ಥೆಯ 6E657 ವಿಮಾನದಲ್ಲಿ ಈ ಆತಂಕಕಾರಿ ವಿದ್ಯುತ್ ವ್ಯತ್ಯಯ ಸಂಭವಿಸಿದ್ದು, ಸೀಲ್ ಮಾಡಲಾದ ಕ್ಯಾಬಿನ್ ಒಳಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಇದು ಪ್ರಯಾಣಿಕರಲ್ಲಿ ಭೀತಿ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ವಿಮಾನ ನಿಲ್ದಾಣದ ಅಧಿಕೃತ ಮೂಲಗಳ ಪ್ರಕಾರ, ವಿಮಾನವು ಟರ್ಮಿನಲ್ನಲ್ಲಿ ನಿಂತಿದ್ದಾಗ ಅದರ ಮುಖ್ಯ ಇಂಜಿನ್ಗಳನ್ನು ಆಫ್ ಮಾಡಲಾಗಿತ್ತು ಎನ್ನಲಾಗಿದೆ.
ಈ ಸಮಯದಲ್ಲಿ ವಿಮಾನದ ಒಳಾಂಗಣ ದೀಪಗಳು, ಹವಾನಿಯಂತ್ರಣ ಮತ್ತು ಕಾಕ್ಪಿಟ್ ಉಪಕರಣಗಳಿಗೆ ವಿದ್ಯುತ್ ಪೂರೈಸುವ ಪ್ರಮುಖ ಮೂಲವಾದ ಗ್ರೌಂಡ್ ಪವರ್ ಯೂನಿಟ್ ತಾಂತ್ರಿಕ ದೋಷದಿಂದಾಗಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಪರಿಣಾಮವಾಗಿ, ಇಡೀ ವಿಮಾನವು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿತು ಮತ್ತು ಎಸಿ ವ್ಯವಸ್ಥೆಯು ಸಂಪೂರ್ಣವಾಗಿ ಬಂದ್ ಆಯಿತು. ರಾತ್ರಿ 8:50 ರಿಂದ 9:15 ರವರೆಗೆ ಅಂದರೆ ಸುಮಾರು 25 ನಿಮಿಷಗಳ ಕಾಲ ಈ ಬಿಕ್ಕಟ್ಟು ಮುಂದುವರಿದಿತ್ತು. ಬೇಸಿಗೆಯ ಬಿಸಿಲಿನ ಝಳದ ನಡುವೆ, ಎಸಿ ಕೂಡ ಇಲ್ಲದೆ ಸೀಲ್ ಮಾಡಿದ ಕ್ಯಾಬಿನ್ ಒಳಗೆ ಸಿಲುಕಿಕೊಂಡ ಪ್ರಯಾಣಿಕರು ಬೆವತು ಹೋದರು. ಗಾಳಿಯಿಲ್ಲದೆ ಹತಾಶರಾದ ಪ್ರಯಾಣಿಕರು ತಮಗೆ ಸಿಕ್ಕ ಫೈಲ್ಗಳು, ಪತ್ರಿಕೆಗಳು ಮತ್ತು ಕೈಯಲ್ಲಿದ್ದ ವಸ್ತುಗಳನ್ನೇ ಬೀಸಣಿಗೆಯನ್ನಾಗಿ ಮಾಡಿಕೊಂಡು ಬೀಸಿಕೊಳ್ಳಲು ಮುಂದಾದರು. ವಿಮಾನದೊಳಗಿನ ಈ ಭೀಕರ ದೃಶ್ಯವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ ಹಾಗೂ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು ಇದರಿಂದ ವಿದ್ಯುತ್ ಕೈಕೊಟ್ಟ ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನಯಾನ ಸಂಸ್ಥೆಯ ತಂತ್ರಜ್ಞರ ತಂಡವು ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯವನ್ನು ಕೈಗೊಂಡಿತು. ಜಿಪಿಯು ದೋಷವನ್ನು ಯಶಸ್ವಿಯಾಗಿ ಪರಿಹರಿಸಿ, ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಲಾಯಿತು.
ವಿಮಾನದಲ್ಲಿ ದೀಪಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ ಮತ್ತೆ ಆನ್ ಆಗುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಈ ತಾಂತ್ರಿಕ ದೋಷದಿಂದಾಗಿ ವಿಮಾನದ ನಿರ್ಗಮನದ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಯ ಉಂಟಾಯಿತು. ನಿಗದಿತ ವೇಳಾಪಟ್ಟಿಯ ಪ್ರಕಾರ ಈ ವಿಮಾನವು ರಾತ್ರಿ 8:40 ಕ್ಕೆ ವಡೋದರಾದಿಂದ ಹೊರಡಬೇಕಿತ್ತು. ಆದರೆ ಈ ಹಠಾತ್ ಜಿಪಿಯು ವೈಫಲ್ಯ ಮತ್ತು ದುರಸ್ತಿ ಕಾರ್ಯದಿಂದಾಗಿ, ವಿಮಾನವು ಸುಮಾರು 1 ಗಂಟೆ 20 ನಿಮಿಷ ತಡವಾಗಿ, ಅಂದರೆ ರಾತ್ರಿ 10:00 ಗಂಟೆಗೆ ದೆಹಲಿಯತ್ತ ಪ್ರಯಾಣ ಬೆಳೆಸಿತು. ಘಟನೆಯ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಇಂಡಿಗೋ ಏರ್ಲೈನ್ಸ್, “ತಾಂತ್ರಿಕ ದೋಷದ ಕಾರಣದಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ. ತೊಂದರೆ ಕಂಡುಬಂದ ತಕ್ಷಣವೇ ನಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ” ಎಂದು ತಿಳಿಸುವ ಮೂಲಕ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
















