ಮನೆ ರಾಜಕೀಯ ಕುತೂಹಲಕ್ಕೆ ಕಾರಣವಾದ ಎಸ್ಟಿಎಸ್‌-ಜಿಟಿಡಿ ಭೇಟಿ

ಕುತೂಹಲಕ್ಕೆ ಕಾರಣವಾದ ಎಸ್ಟಿಎಸ್‌-ಜಿಟಿಡಿ ಭೇಟಿ

0

ಮೈಸೂರು (Mysuru)- ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇಲ್ಲಿನ ಸದರ್ನ್‌ ಸ್ಟಾರ್‌ ಹೋಟೆಲ್‌ನಲ್ಲಿ ಶನಿವಾರ ಭೇಟಿಯಾಗಿ ಚರ್ಚಿಸಿದ್ದಾರೆ. ಜೆಡಿಎಸ್‌ ಚಟುವಟಿಕೆಗಳಿಂದ ದೂರ ಸರಿದಿರುವ ಹಾಗೂ ಜಿಲ್ಲೆಯಲ್ಲಿ ತಮ್ಮದೇ ಪ್ರಭಾವವುಳ್ಳ ದೇವೇಗೌಡರನ್ನು ಸೆಳೆಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ಭಾರಿ ಪ್ರಯತ್ನವನ್ನೇ ನಡೆಸಿವೆ.

ಬಿಜೆಪಿಗೆ ಬರುವುದಾದರೆ ಕ್ಷೇತ್ರವನ್ನೇ ಬಿಟ್ಟುಕೊಡಲು ಸಿದ್ಧ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್‌.ನಾಗೇಂದ್ರ ಶನಿವಾರ ತಿಳಿಸಿದರೆ, ‘ಮೈಸೂರು ಭಾಗದ ಪ್ರಮುಖ ನಾಯಕರು ಬಿಜೆಪಿ ಸೇರಲಿದ್ದಾರೆ’ ಎಂದು ಸಚಿವ ಸೋಮಶೇಖರ್‌ ಹೇಳಿರುವುದು ಈ ಭಾಗದ ರಾಜಕೀಯದಲ್ಲಿ ಭಾರಿ ಗುಸುಗುಸು ಎಬ್ಬಿಸಿದೆ.

‌ನನ್ನ ಹಾಗೂ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ದಿಟ್ಟ ತೀರ್ಮಾನ ಕೈಗೊಳ್ಳುವುದು ನಿಶ್ಚಿತ ಎಂದಿರುವ ಜಿ.ಟಿ.ದೇವೇಗೌಡರು, ಈಗ ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿ ಉಪಚುನಾವಣೆ ಎದುರಿಸಿ ಹಣ ವೆಚ್ಚ ಮಾಡಲು ಸಿದ್ಧನಿಲ್ಲ. ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಮತದಾರರ ಮಾತು ಕೇಳಿ ನಿರ್ಧಾರ ಪ‍್ರಕಟಿಸುವೆ. ಜೆಡಿಎಸ್‌ ಮುಖಂಡರು ನನ್ನನ್ನು ಕೈಬಿಟ್ಟಿರಬಹುದು ನಾನಿನ್ನೂ ಪಕ್ಷ ತೊರೆದಿಲ್ಲ ಎಂದರು.‌

ರಾಜ್ಯ ಸಹಕಾರ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎನ್‌.ಅರುಣ್‌ ಕುಮಾರ್ ಅವರನ್ನು ವರ್ಗಾಯಿಸಿದ್ದು, ಅದಕ್ಕೆ ತಡೆ ನೀಡಿ ಒಂದು ವರ್ಷದ ಮಟ್ಟಿಗೆ ಮುಂದುವರಿಸಬೇಕೆಂದು ಕೋರಲು ಸಹಕಾರ ಸಚಿವ ಸೋಮಶೇಖರ್‌ ಅವರನ್ನು ಭೇಟಿಯಾಗಿದ್ದೆ ಎಂದು ತಿಳಿಸಿದರು.

ಬಿಜೆಪಿಯಿಂದ ಆಹ್ವಾನವಿರುವುದು ನಿಜ. ಕ್ಷೇತ್ರವನ್ನೇ ಬಿಡುಕೊಡುವುದಾಗಿ ಹೇಳಿರುವ ನಾಗೇಂದ್ರ ಅವರಿಗೆ ಧನ್ಯವಾದ. ಶಾಸಕರು, ಸಚಿವರು ಪ್ರೀತಿಯಿಂದ ಪಕ್ಷಕ್ಕೆ ಕರೆಯುತ್ತಿದ್ದಾರೆ. ಆದರೆ, ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿ ನಿಮಿತ್ತ ಮುಖ್ಯಮಂತ್ರಿ, ಸಚಿವರನ್ನು ಭೇಟಿಯಾಗುತ್ತಿರುತ್ತೇನೆ ಎಂದರು.

ಕಾಂಗ್ರೆಸ್‌ನವರೂ ಚರ್ಚಿಸಿದ್ದು, ಹೈಕಮಾಂಡ್‌ ತೀರ್ಮಾನದ ಬಳಿಕ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಸದ್ಯ ಯಾವುದೇ ಪಕ್ಷ ಸೇರುವುದಿಲ್ಲ ಎಂದರು.

ಹಿಂದಿನ ಲೇಖನಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದ ನಂಬರ್‌ ಪ್ಲೇಟ್‌ ನಿಯಮ ವಿಚಾರಕ್ಕೆ ಸಾರಿಗೆ ಇಲಾಖೆ ಸ್ಪಷ್ಟನೆ
ಮುಂದಿನ ಲೇಖನಲಾಂಗ್‌ ತೋರಿಸಿ ಚಿನ್ನದಂಡಿಯಲ್ಲಿ ದರೋಡೆ: ಆರೋಪಿ ಬಂಧನ