ಮನೆ ರಾಜ್ಯ ಹಾಸನ: ಮಾಲೆಕಲ್ಲು ತಿರುಪತಿ ದೇವಾಲಯದ ವಸ್ತು ಸಂಗ್ರಹಾಲಯದಲ್ಲಿನ ಹಿಂದೂ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳು

ಹಾಸನ: ಮಾಲೆಕಲ್ಲು ತಿರುಪತಿ ದೇವಾಲಯದ ವಸ್ತು ಸಂಗ್ರಹಾಲಯದಲ್ಲಿನ ಹಿಂದೂ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳು

0

ಹಾಸನ (Hassan)-ಹಾಸನದಲ್ಲಿ ದೇವಾಲಯದ ವಸ್ತು ಸಂಗ್ರಹಾಲಯದಲ್ಲಿ ಇದ್ದ ದೇವರ ವಿಗ್ರಹಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ಲು ತಿರುಪತಿ ಬೆಟ್ಟದ ಮೇಲಿನ ದೇವಾಲಯದ ವಸ್ತು ಸಂಗ್ರಹಾಲಯದಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು 4 ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಇದರಿಂದ ಈಗ ಮತ್ತೆ ಧರ್ಮ ದಂಗಲ್ ಯುದ್ಧ ತಾರಕಕ್ಕೆ ಏರುತ್ತಿದೆ.

ಮಾಲೀಕರ ತಿರುಪತಿ ದೇವಾಲಯಕ್ಕೆ ಆಗಮಿಸಿದ 4 ದುಷ್ಕರ್ಮಿಗಳು ಕಲ್ಯಾಣಿಯಲ್ಲಿ ಈಜಿ ಬಿಸಿಲಿನ ತಾಪವನ್ನು ತಣಿಸಿಕೊಂಡಿದ್ದಾರೆ. ಅದಲ್ಲದೆ ದೇವಾಲಯದ ಆವರಣದಲ್ಲಿಯೇ ಧೂಮಪಾನ ಮಾಡಿ ಅಪವಿತ್ರ ಮಾಡಿದ್ದಲ್ಲದೆ, ಇದನ್ನ ಪ್ರಶ್ನೆ ಮಾಡಿದ ದೇವಾಲಯದ ಅವರಣದಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಕೂಲಿ ಕಾರ್ಮಿಕರನ್ನು ಹೆದರಿಸಿ ಅಲ್ಲಿಂದ ಓಡಿಸಿದ್ದಾರೆ. ಬಳಿಕ ದೇವಾಲಯದ ವಸ್ತುಸಂಗ್ರಹಾಲಯಕ್ಕೆ ಹೋದ ಈ ನಾಲ್ಕು ದುಷ್ಕರ್ಮಿಗಳು, ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣವಾಗುತ್ತಿದ್ದ ಹಾಗೂ ನಿರ್ಮಾಣವಾಗಿದ್ದ ಕೆಲವು ಹಿಂದೂ ದೇವಾನುದೇವತೆಗಳ ಮೂರ್ತಿಗಳನ್ನು ಮನಸೋಇಚ್ಛೆ ಧ್ವಂಸಗೊಳಿಸಿದ್ದಾರೆ.

ಮೂರ್ತಿಗಳನ್ನ ಧ್ವಂಸ ಮಾಡುವ ವೇಳೆ ಅಲ್ಲಿಯೇ ಇದ್ದ ಕೆಲವರು ಇದನ್ನು ನೋಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಪ್ರಕರಣದ ಬೆನ್ನಲ್ಲಿಯೇ ಸ್ಥಳಕ್ಕೆ ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ, ಡಿವೈಎಸ್ಪಿ ಅಶೋಕ್, ವೃತ್ತ ನಿರೀಕ್ಷಕ ವಸಂತ್ ಕುಮಾರ್, ಸೇರಿದಂತೆ ಪೊಲೀಸ್ ಇಲಾಖೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ಮಾಡಿದ್ದು, ದುಷ್ಕರ್ಮಿಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಕೆಲವು ಕುರುಹುಗಳನ್ನು ಕಲೆಹಾಕಿದ್ದಾರೆ.

ಇನ್ನು ವಿಚಾರ ತಿಳಿಯುತ್ತಿದ್ದಂತೆ ಅರಸೀಕೆರೆ ನಗರದ ಹಿಂದೂ ಸಂಘಟನೆಗಳು, ಸ್ಥಳೀಯರು ಸೇರಿದಂತೆ ದೇವಸ್ಥಾನದ ಆವರಣದಲ್ಲಿ ನಡೆದಿದ್ದ ಕೃತ್ಯ ನೋಡಲು ಜನಜಂಗುಳಿಯೇ ನೆರೆದಿತ್ತು. ಅದನ್ನು ನಿಯಂತ್ರಿಸಲು ಪೊಲೀಸರು ಸಾಕಷ್ಟು ಹರಸಾಹಸಪಟ್ಟಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.

ಅರಸೀಕೆರೆಯಿಂದ ಎರಡು ಕಿಲೋಮೀಟರ್ ದೂರದಲ್ಲಿದೆ ಮಾಲೆಕಲ್ಲು ತಿರುಪತಿ ಬೆಟ್ಟ. ಇದನ್ನ ಚಿಕ್ಕತಿರುಪತಿ ಎಂದೇ ಕರೆಯಲಾಗುತ್ತದೆ. ಸಾವಿರಾರು ಮೆಟ್ಟಿಲುಗಳಿರುವ ದೊಡ್ಡ ಬೆಟ್ಟದ ಮೇಲೆ ವೆಂಕಟೇಶ್ವರ ಸ್ವಾಮಿ ಮತ್ತು ಲಕ್ಷ್ಮೀದೇವಿ ನೆಲೆಸಿದ್ದಾರೆ. ಸುಮಾರು 300 ವರ್ಷಗಳ ಇತಿಹಾಸ ಇರುವ ಈ ದೇವಾಲಯದಲ್ಲಿ ಬೆಟ್ಟದ ಕೆಳಗಡೆಯೂ ಸವಿಸ್ತಾರವಾದ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಇದೆ. ಪ್ರತಿವರ್ಷ ಇಲ್ಲಿ ಜಾತ್ರಾ ಮಹೋತ್ಸವ ಜರುಗುವ ಮೂಲಕ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಪುರಾತನ ಕಾಲದ ಸಾಕಷ್ಟು ದೇವಸ್ಥಾನಗಳಿವೆ. ಹೊಯ್ಸಳ ಕಾಲದ ಶಿವಾಲಯ, ಯಾದಾಪುರ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಬೆಟ್ಟ, ಮಲ್ಲೇಶ್ವರ ಬೆಟ್ಟ, ಗರುಡನಗಿರಿ ಹಾರನಹಳ್ಳಿಯ ಕೋಡಿಮಠ, ಅರಕೆರೆಯ ಚನ್ನಕೇಶವ ಮತ್ತು ರಾಮೇಶ್ವರ ದೇವಾಲಯ, ಲಕ್ಷ್ಮಿಪುರದ ಮಹಾಗಣಪತಿ ದೇವಾಲಯ, ಮಾಡಾಳು ಗೌರಮ್ಮ ಸೇರಿದಂತೆ ಮಾಲೆಕಲ್ಲು ತಿರುಪತಿ ದೇವಾಲಯ ಕೂಡ ಒಂದು.

ಇದರ ಜೊತೆಗೆ ಅರಸೀಕೆರೆ ಪಟ್ಟಣದಿಂದ 11 ಕಿಲೋಮೀಟರ್ ದೂರದಲ್ಲಿರುವ ನಾಗಪುರಿ ಕೋಟೆಯಲ್ಲಿನ ಹೈದರಾಲಿ ಕಟ್ಟಿದ ಕೋಟೆಯ ಅವಶೇಷವಿದೆ. ಹೀಗಾಗಿ ಅರಸೀಕೆರೆ ರಾಜ್ಯದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಹೊಂದಿದೆ.


ಹಿಂದಿನ ಲೇಖನಅವಂತಿಪೋರಾದಲ್ಲಿ ಎನ್‌ ಕೌಂಟರ್‌ ಇಬ್ಬರು ಉಗ್ರರ ಹತ್ಯೆ
ಮುಂದಿನ ಲೇಖನಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಶೀಘ್ರವೇ ಜಾರಿಗೆ: ಸಿಎಂ ಬೊಮ್ಮಾಯಿ