ಮನೆ ಸ್ಥಳೀಯ ಯಾವುದೇ ಆರೋಗ್ಯ ಸಮಸ್ಯೆಗೆ ಸಕಾಲದಲ್ಲಿ ಚಿಕಿತ್ಸೆ ಅತ್ಯಗತ್ಯ: ಬಿ ರಮೇಶ್

ಯಾವುದೇ ಆರೋಗ್ಯ ಸಮಸ್ಯೆಗೆ ಸಕಾಲದಲ್ಲಿ ಚಿಕಿತ್ಸೆ ಅತ್ಯಗತ್ಯ: ಬಿ ರಮೇಶ್

0

ಮೈಸೂರು : ಮಹಿಳೆಯರು ಮಕ್ಕಳಿಗೆ ವೃದ್ಧರಿಗೆ ಯಾರಿಗೇ ಆಗಲಿ ಯಾವುದೇ ಆರೋಗ್ಯ ಕಂಡುಬದರು ಅದಕ್ಕೆ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ನಗರ ಪೊಲೀಸ್ ಆಯುಕ್ತರಾದ ಬಿ ರಮೇಶ್ ಅವರು ಸಲಹೆ ನೀಡಿದರು.

ಇಂದು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯತ್ ನ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆರೋಗ್ಯ ತಪಾಸಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

 ಮಹಿಳೆಯರಿಗೆ ತಾಯ್ತನದ ನಂತರ 35 ವರ್ಷ ದಾಟಿದ ಮೇಲೆ ದೇಹದಲ್ಲಾಗುವ ಬದಲಾವಣೆಯಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯಲ್ಲಿರುವ ಆರೋಗ್ಯದ ಮೇಲಿನ ತಾತ್ಸಾರ. ಒಂದು ಮನೆಯಲ್ಲಿ ಮಹಿಳೆಯೊಬ್ಬಳು ಆರೋಗ್ಯವಾಗಿದ್ದರೆ ಸಂಪೂರ್ಣ ಕುಟುಂಬವೇ ಆರೋಗ್ಯವಾಗಿರುತ್ತದೆ. ಹಾಗಾಗಿ ಮಹಿಳೆಯರು ಎಷ್ಟೇ ಕೆಲಸದ ಒತ್ತಡಗಳಿದ್ದರೂ ಮೊದಲು ತಮ್ಮ ಆರೋಗ್ಯದ ಕಡೆ ಗಮನಕೊಡಬೇಕು ಎಂದರು.

ಆರೋಗ್ಯ ಸಮಸ್ಯೆ ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಮನುಷ್ಯನಿಗೆ ಸಹಜವಾಗಿ ಆರೋಗ್ಯದಲ್ಲಿ ಏರು-ಪೇರುಗಳು ಉಂಟಾಗುತ್ತವೆ. ಅವುಗಳನ್ನು ಎಚ್ಚರಿಕೆಯಿಂದ ಭಯ ಪಡದಂತೆ ಎದುರಿಸಬೇಕು. ದೇಹದಲ್ಲಿ ಸಣ್ಣ ವ್ಯತ್ಯಾಸ ಕಂಡು ಬಂದರು ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಕಿವಿ ಮಾತು ಹೇಳಿದರು.

ಒಬ್ಬ ಮಹಿಳೆ  ತಾಯಿ, ಮಡದಿ, ಅಕ್ಕ, ತಂಗಿ ಹೀಗೆ ನಮ್ಮ ಜೀವನದ ಭಾಗವಾಗಿರುತ್ತಾರೆ. ಅಂತಹ ಮಹಿಳೆಯ ಆರೋಗ್ಯ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸರುವುದು ಖುಷಿಯ ವಿಚಾರ. ಎಲ್ಲರೂ ವೈದ್ಯರ ಬಳಿ ಯಾವುದೇ ಮುಜುಗರ ಪಡದೆ ತಮ್ಮ ತೊಂದರೆಗಳನ್ನು ಹೇಳಿಕೊಂಡು ಅದಕ್ಕೆ ವೈದ್ಯರಿಂದ ಸಲಹೆ ಪಡೆದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಾದ ಕೆ. ಎಂ ಗಾಯತ್ರಿ ಅವರು ಮಾತನಾಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯ ಮಹಿಳಾ ಅಧಿಕಾರಿಗಳು ಸದುಪಯೋಗ ಪಡೆದುಕೊಳ್ಳಬೇಕು. 40 ವರ್ಷದ ನಂತರ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ವಯಸ್ಸಿನ ಮಿತಿಯಿಲ್ಲದೆ ಕಂಡುಬರುತ್ತಿದೆ. ಆದ್ದರಿಂದ ಎಲ್ಲರೂ ಬಹಳ ಜಾಗೃತರಾಗಿ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ವಯಸ್ಸಿಗೆ ತಕ್ಕಂತೆ  ದೇಹದಲ್ಲಿನ ಏರು ಪೇರನ್ನು ಗಮನಿಸಿ ಆರೋಗ್ಯ ಕಾಳಜಿ ಮಾಡಿಕೊಳ್ಳಬೇಕು. ಎಲ್ಲರೂ ಹೊರಗಿಂದ ಆರೋಗ್ಯವಂತರಾಗಿಯೇ ಕಂಡರೂ ದೇಹದ ಒಳಗಡೆ ಇರುವ ಸಣ್ಣ ಸಮಸ್ಯೆ ಕಂಡುಕೊಂಡು ಚಿಕಿತ್ಸೆ ಪಡೆಯುವಲ್ಲಿ ಎಡವುತ್ತಿದ್ದೇವೆ. ಇದೇ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಾಮಿಸುತ್ತದೆ. ಹಾಗಾಗಿ ಎಲ್ಲರೂ ಯಾವುದೇ ಸಣ್ಣ ಸಮಸ್ಯೆ ಕಂಡು ಬಂದರು ತಕ್ಷಣದ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಸೀಮಾ ಲಾಟ್ಕರ್ ಅವರು ಮಾತನಾಡಿ,  ಮಹಿಳೆಯರು ಕೆಲಸಗಳಲ್ಲಿ ಮಗ್ನರಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಡವುತ್ತಿದ್ದಾರೆ. ನಮ್ಮ ಆರೋಗ್ಯ ಉತ್ತಮವಾಗಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯ. ಹಾಗಾಗಿ ಮೊದಲ ಆದ್ಯತೆ ಆರೋಗ್ಯಕ್ಕೆ ನೀಡಬೇಕು. ಹಬ್ಬದ ಹರಿದಿನಗಳಲ್ಲಿ ಅನವಶ್ಯಕ ದುಂದು ವೆಚ್ಚ ಮಾಡುವ ಬದಲು ಆ ಹಣದಲ್ಲಿ ಪೋಷಕರಿಗೆ ಹೆಲ್ತ್ ಕಾರ್ಡ್ ಮಾಡಿಸಿಕೊಡುವುದು ಸೂಕ್ತ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ಮಹಿಳೆಯೂ ತಮ್ಮ ಕಂಫರ್ಟ್ ವಲಯದಿಂದ ಹೊರಬಂದು ಮಹಿಳೆ ಎಂಬುದನ್ನು ತಲೆಯಿಂದ ತೆಗೆದುಹಾಕಿ ಯಾವುದೇ ಕೆಲಸವನ್ನು ಮಾಡಬಲ್ಲೆ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ (ಅಭಿವೃದ್ಧಿ) ಉಪ ಕಾರ್ಯದರ್ಶಿಗಳಾದ ಡಾ. ಎಂ. ಕೃಷ್ಣ ರಾಜು, ಜಿಲ್ಲಾ ಪಂಚಾಯತ್ ನ (ಆಡಳಿತ) ಉಪ ಕಾರ್ಯದರ್ಶಿಗಳಾದ ಸವಿತಾ ಬಿ. ಎಂ. ಜಿಲ್ಲಾ ಆರ್. ಸಿ.ಎಚ್ ಅಧಿಕಾರಿಗಳಾದ ಡಾ. ಜಯಂತ್ ಎಂ. ಎಸ್., ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಮಹಾದೇವ ಪ್ರಸಾದ್, ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ನ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ವಿಧಿವಶ
ಮುಂದಿನ ಲೇಖನಬಿಜೆಪಿ ನಾಯಕರಿಗೆ ಮೋದಿ ಮುಂದೆ ರಾಜ್ಯದ ಪರವಾಗಿ ಮಾತನಾಡುವ ತಾಕತ್ತಿಲ್ಲ:ಸಿಎಂ ಸಿದ್ದರಾಮಯ್ಯ