ಮನೆ ಅಪರಾಧ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ: ಒಡಿಶಾದ ಯುವಕನ ಮೃತದೇಹ ಪತ್ತೆ

ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ: ಒಡಿಶಾದ ಯುವಕನ ಮೃತದೇಹ ಪತ್ತೆ

0

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ಗುರುವಾರ ರಾತ್ರಿ ನಡೆದಿದ್ದ ಗಲಾಟೆ ವೇಳೆ ನಾಪತ್ತೆಯಾಗಿದ್ದ ಒಡಿಶಾದ ಬಿಬಾಶ್‌ (26) ಎಂಬ ಪ್ರವಾಸಿಗನ ಮೃತದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.

Join Our Whatsapp Group

ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಇಸ್ರೇಲ್‌, ಅಮೆರಿಕ, ಒಡಿಶಾ, ಮಹಾರಾಷ್ಟ್ರ ಮತ್ತು ಸ್ಥಳೀಯ ಹೋಂ ಸ್ಟೇನ ಒಡತಿಯೊಬ್ಬರು ಗಿಟಾರ್‌ ಬಾರಿಸುತ್ತ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಇವರ ಮೇಲೆ ಹಲ್ಲೆ ಮಾಡಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ ದುಷ್ಕರ್ಮಿಗಳು ಒಡಿಶಾದ ಬಿಬಾಶ್‌ನನ್ನು ಕಾಲುವೆಯಲ್ಲಿ ಬೀಸಾಡಿ ನಾಪತ್ತೆಯಾಗಿದ್ದರು. ಶುಕ್ರವಾರ ಬೆಳಿಗ್ಗೆಯಿಂದಲೇ ಆತನ ಪತ್ತೆಗೆ ಶೋಧ ಕಾರ್ಯ ನಡೆದಿತ್ತು. ಮಲ್ಲಾಪುರ ಗ್ರಾಮದ ಪವರ್‌ ಹೌಸ್‌ ಗೇಟ್‌ ಬಳಿ ಮೃತದೇಹ ಲಭಿಸಿದೆ.

ಆರೋಪಿಗಳ ಪತ್ತೆಗೆ ಆರು ತಂಡಗಳನ್ನು ರಚಿಸಲಾಗಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗಲಾಟೆಯಲ್ಲಿ ಗಾಯಗೊಂಡಿರುವ ಮಹಾರಾಷ್ಟ್ರದ ನಾಸಿಕ್‌ನ ಪಂಕಜ್‌ ಅವರ ಸಹೋದರ ಇಲ್ಲಿಗೆ ಬಂದಿದ್ದಾರೆ. ಮೃತಪಟ್ಟ ಬಿಬಾಶ್‌ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಇಸ್ರೇಲ್‌ ಮತ್ತು ಸ್ಥಳೀಯ ಮಹಿಳೆಯರ ವೈದ್ಯಕೀಯ ಪರೀಕ್ಷೆ ಮಾಡಿದ್ದು ವರದಿ ಬರಬೇಕಾಗಿದೆ ಎಂದು  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ತಿಳಿಸಿದ್ದಾರೆ.