ಬೆಂಗಳೂರು : ನಿರ್ದೇಶಕ ನಂದಕಿಶೋರ್ಗೆ ಸಾಲ ನೀಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಉದ್ಯಮಿ ಮನೋಜ್ ಕಿಡ್ನ್ಯಾಪ್ ಹಿಂದೆ ಬೇಕರಿ ರಘು ಕೈವಾಡವಿರುವುದು ಸಾಬೀತಾಗಿದೆ.
ಸಿನಿಮಾ ನಿರ್ದೇಶಕ ನಂದಕಿಶೋರ್ಗೆ ರೌಡಿಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ ಮೂಲಕ ಸಾಲ ಕೊಟ್ಟಿದ್ದ ಉದ್ಯಮಿ ಮನೋಜ್ನ ಅಪಹರಣವಾಗಿತ್ತು. ಇದರ ಹಿಂದೆ ಬೇಕರಿ ರಘು ಪಾತ್ರವಿರುವ ಬಗ್ಗೆ ಕೇಳಿಬಂದಿತ್ತು.
ಹೀಗಾಗಿ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಅಂದಿನಿಂದ ಹುಡುಕಾಟ ನಡೆಸಿದ್ದರು. ಬಳಿಕ ಮಂಡ್ಯ ಬಳಿ ಬೇಕರಿ ರಘುನನ್ನ ಬಂಧಿಸಿ, ವಿಚಾರಣೆ ನಡೆಸಿದ್ದರು.
ಕಿಡ್ನ್ಯಾಪ್ ಹಿಂದೆ ಬೇಕರಿ ರಘು ಪಾತ್ರವಿರುವುದು ಸಿಸಿಬಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆ ಕಳೆದ 10 ದಿನಗಳಿಂದ ಸಾಕ್ಷಿ ಸಮೇತ ಬೇಕರಿ ರಘುಗೆ ಸಿಸಿಬಿ ಡ್ರಿಲ್ ನಡೆಸಿದ್ದು, ಕಿಡ್ನ್ಯಾಪ್ ಮಾಡಿದ್ದು ಯಾಕೆ? ಹಲ್ಲೆ ಮಾಡಿದ್ದು ಯಾಕೆ? ಇದರ ಹಿಂದೆ ಯಾರಿದ್ದಾರೆ, ಎನ್ನುವುದು ತನಿಖೆ ಮೂಲಕ ತಿಳಿದುಬರಬೇಕಿದೆ.
ಬೇಕರಿ ರಘುವಿನ ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸಿಸಿಬಿ ತಯಾರಿ ನಡೆಸಿದೆ.
ಏನಿದು ಪ್ರಕರಣ? – ರೌಡಿಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ, ಮನೋಜ್ನಿಂದ ನಂದ ಕಿಶೋರ್ಗೆ 1.2 ಲಕ್ಷ ಹಣವನ್ನ ಸಾಲವಾಗಿ ಕೊಡಿಸಿದ್ದ. ಹಣ ಹಿಂದಿರುಗಿಸೋದು ತಡವಾದಾಗ ಕೊಟ್ಟ ಹಣ ವಾಪಸ್ ಕೊಡಿಸುವಂತೆ ಕೇಳ್ತಿದ್ದ. ನೀನೇ ಹಣ ಕೊಡಿಸಿದ್ದು ವಾಪಸ್ ಕೊಡಿಸು ಅಂತಾ ರಾಜೇಶನಿಗೆ ಮನೋಜ್ ದುಂಬಾಲು ಬಿದ್ದಿದ್ದ.
ಇದೇ ಸಂದರ್ಭದಲ್ಲಿ ಬೇಕರಿ ರಘು ಅಣ್ಣ ರೌಡಿ ಶ್ರೀನಿವಾಸ್, ಲೋಕಿ, ಸೋಮ ಅವರ ಗ್ಯಾಂಗ್ ಉದ್ಯಮಿ ಮನೋಜ್ನ ಅಪಹರಣ ಮಾಡಿತ್ತು. ನೆಲಮಂಗಲದ ಬಳಿ ಕರೆದೊಯ್ದು ಹಲ್ಲೆ ಮಾಡಿ ಹಣ ಕಿತ್ತ್ಕೊಂಡು ಬಿಟ್ಟು ಕಳಿಸಿದ್ರು.














