ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಕಾಳು ಮೆಣಸು ಪುಟ್ಟದಾಗಿದ್ದರೂ ಆರೋಗ್ಯಕ್ಕೆ ಭರಫೂರ ಪ್ರಯೋಜನಗಳನ್ನು ನೀಡುತ್ತದೆ. ಇಲ್ಲಿದೆ ನೋಡಿ ಕಾಳು ಮೆಣಸಿನ ಪ್ರಯೋಜನಗಳ ಬಗ್ಗೆ ಮಾಹಿತಿ.
ಪ್ರತೀ ಮನೆಯಲ್ಲೂ ಆಹಾರ, ಆರೋಗ್ಯ ಎಲ್ಲದಕ್ಕೂ ಬಳಕೆಯಾಗುವ ಸಾಂಬಾರು ಪದಾರ್ಥ ಎಂದರೆ ಅದು ಕರಿ ಮೆಣಸಿನ ಕಾಳು. ಕರಿಮೆಣಸನ್ನು ಸಂಸ್ಕೃತದಲ್ಲಿ ಮಾರಿಚ್ ಎಂದು ಕರೆಯಲಾಗುತ್ತದೆ, ಇದು ಸೂರ್ಯನ ಸಮಾನಾರ್ಥಕವಾಗಿದೆ. ಸೂರ್ಯನಂತೆ ಕಾಳು ಮೆಣಸು ಕೂಡ ದೇಹಕ್ಕೆ ಬಿಸಿ ಅನುಭವವನ್ನು ನೀಡುತ್ತದೆ. ಹೀಗಾಗಿ ಕಾಳುಮೆಣಸನ್ನು ಮಸಾಲೆಗಳ ರಾಜ ಎಂದೇ ಕರೆಯುತ್ತಾರೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಅತ್ಯುತ್ತಮ ದೈಹಿಕ ಆರೋಗ್ಯಕ್ಕಾರಿ ಹಿಮಾಲಯನ್ ಶಿಲಾಜಿತ್!
ಆಯುರ್ವೇದದಲ್ಲಿ ಕಾಳು ಮೆಣಸನ್ನು ಅನೇಕ ರೀತಿಯಲ್ಲಿ ಔಷಧವಾಗಿ ಬಳಸಲಾಗುತ್ತದೆ. ಶೀತ, ಕೆಮ್ಮು, ಗಂಟಲಿನ ಕಿರಿಕಿರಿಗೆ ಫಟಾಫಟ್ ಎಂದು ಪರಿಹಾರ ನೀಡುವ ಈ ಒಣ ಕಾಳು ಮೆಣಸು ಮತ್ತೇನೆಲ್ಲಾ ಉಪಯೋಗಗಳನ್ನು ಅಡಗಿಸಿಕೊಂಡಿದೆ ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ಕರಿ ಮೆಣಸಿನ ಕಾಳು
ಈ ಕಾಳು ಮೆಣಸು ಅಥವಾ ಕರಿ ಮೆಣಸಿನ ಕಾಳು ಕಟು (ಖಾರ) ರಸವನ್ನು ಹೊಂದಿದ್ದು, ತೀಕ್ಷಣವಾಗಿರುತ್ತದೆ. ಜೀರ್ಣಕ್ರಿಯೆಗೆ ಸುಲಭವಾಗುವ ಈ ಮಸಾಲೆ ದೇಹಕ್ಕೆ ಉಷ್ಣವಾಗಿದೆ. ಹೀಗಾಗಿ ಮಿತವಾಗಿ ತಿಂದಷ್ಟೂ ಒಳ್ಳೆಯದು. ಕಫ, ವಾತದಿಂದಾಗುವ ಅನಾರೋಗ್ಯಕ್ಕೆ ಬಹಳ ಒಳ್ಳೆಯದು.
ಕಾಳು ಮೆಣಸಿನ್ನು ಹೆಚ್ಚು ಸೇವನೆ ಮಾಡಿದರೆ ದೇಹದಲ್ಲಿ ಪಿತ್ತದ ಅಂಶ ಜಾಸ್ತಿಯಾಗಿ ಇನ್ನೊಂದು ಅನಾರೋಗ್ಯ ಕಾಡಬಹುದು. ಆದ್ದರಿಂದ ಕಡಿಮೆ ಸೇವನೆ ಮಾಡುವುದು ಉತ್ತಮ.
ವಾಂತಿ ಮತ್ತು ಅಜೀರ್ಣಕ್ಕೆ ಉತ್ತಮ
ಕಾಳು ಮೆಣಸು ಹೊಟ್ಟೆಯ ಸಮಸ್ಯೆಗೆ ಪರಿಣಾಮಕಾರಿಯಾಗಿದೆ. ಕರಿ ಮೆಣಸಿನ ಕಾಳಿನ ಪುಡಿಯನ್ನು ಬಿಸಿ ನೀರಿಗೆ ಹಾಕಿ ಅದಕ್ಕೆ ಒಂದು ಸಣ್ಣ ಚೂರು ಶುಂಠಿಯನ್ನು ಹಾಕಿ ಸೇವನೆ ಮಾಡಿದರೆ ವಾಂತಿಯ ಸಮಸ್ಯೆ ಇದ್ದರೆ ಅಥವಾ ಅಜೀರ್ಣವಾಗಿದ್ದರೆ ಸರಿಯಾಗುತ್ತದೆ.
ಆದರೆ ಜಾಸ್ತಿ ಸೇವನೆ ಬೇಡ ದಿನಕ್ಕೆ ಒಂದು ಬಾರಿ ಸೇವನೆ ಮಾಡಿದರೆ ಸಾಕಾಗುತ್ತದೆ. ನೀವು ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ತುಪ್ಪದೊಂದಿಗೆ ಸೇವನೆ ಮಾಡಿದರೆ ಜೀರ್ಣ ಶಕ್ತಿ ಉತ್ತಮವಾಗುತ್ತದೆ.
ತ್ರಿಕಟು ಪೌಡರ್
ಆಯುರ್ವೇದದಲ್ಲಿ ಅಜೀರ್ಣ ಸಮಸ್ಯೆಗೆ, ಶೀತ, ಜ್ವರ ಕೆಮ್ಮಿಗೆ ಈ ತ್ರಿಕಟು ಪೌಡರ್ ಬಹಳ ಒಳ್ಳೆಯದು. ಇದನ್ನು ಹಿಪ್ಪಲಿ, ಶುಂಠಿ ಮತ್ತು ಕಾಳು ಮೆಣಸನ್ನು ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ಒಂದು ಚಿಟಿಕೆಯಷ್ಟು ಸೇವನೆ ಮಾಡುವುದು ಒಳ್ಳೆಯದು.
ಕಾಳು ಮೆಣಸಿನ ಪೌಡರ್ ತಯಾರಿಸಿ ಜೇನುತುಪ್ಪದೊಂದಿಗೆ ಸೇವನೆ ಮಾಡಿದರೆ ಅಲರ್ಜಿ ಶೀತ, ಮೂಗಿನ ಸೋರುವಿಕೆ, ಕೆಮ್ಮು ನಿವಾರಣೆಯಾಗುತ್ತದೆ.
ಮೊಡವೆ ನಿವಾರಣೆಗೆ ಒಳ್ಳೆಯದು
ಅರೇ ಇದೇನಿದು ಕಾಳು ಮೆಣಸು ಖಾರ ಮತ್ತು ಉರಿಯ ಗುಣವನ್ನು ಹೊಂದಿರುತ್ತದೆ. ಇದನ್ನು ಮೊಡವೆಗೆ ಹಚ್ಚಬಹುದಾ, ಎಂದರೆ ಹೌದು. ಕಾಳು ಮೆಣಸಿನಲ್ಲಿರುವ ಆಂಟಿ ಮೈಕ್ರೋವೆಲ್ ಗುಣದಿಂದ ಮೊಡವೆಗಳನ್ನು ನಿವಾರಿಸುತ್ತದೆ. ಕಾಳು ಮೆಣಸಿನ ಪುಡಿಯನ್ನು ರೋಸ್ ವಾಟರ್ ಅಥವಾ ನೀರಿನೊಂದಿಗೆ ಬೆರೆಸಿ ಮೊಡವೆ ಮೇಲೆ ಹಚ್ಚಿದರೆ ಮುಖದ ಮೇಲಿನ ಮೊಡವೆ ನಿವಾರಣೆಯಾಗುತ್ತದೆ.
ಕೂದಲು ಉದುರುವಿಕೆ
ಕೆಲವರಿಗೆ ತಲೆಯ ಮೇಲೆ ಅಲ್ಲಲ್ಲಿ ಕೂದಲು ಉದುರಿ ಪ್ಯಾಚಸ್ಗಳು ಕಂಡುಬರುತ್ತವೆ. ಅದನ್ನು ನಿವಾರಿಸಲು ಕಾಳು ಮೆಣಸು ಸಹಕಾರಿಯಾಗಿದೆ. ಕಾಳು ಮೆಣಸನ್ನು ಎಳ್ಳೆಣ್ಣೆ ಮತ್ತು ತ್ರಿಫಲಾ ಪೌಡರ್ನ್ನು ಜೊತೆ ಸೇರಿಸಿ ಕೂದಲು ಉದುರಿದ ಜಾಗದಲ್ಲಿ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಹೊಟ್ಟೆಯ ಸೆಳೆತವಿದ್ದರೆ
ಕೆಲವೊಮ್ಮೆ ಅಜೀರ್ಣದಿಂದ ಅಥವಾ ಏನಾದರೂ ಸೋಂಕು ತಗುಲಿದ್ದರೆ ಹೊಟ್ಟೆಯಲ್ಲಿ ಸೆಳೆಯುವ ಅನುಭವವಾಗುತ್ತದೆ ಇದರ ನಿವಾರಣೆಗೆ ಕಾಳು ಮೆಣಸು ಸಹಕಾರಿಯಾಗಿದೆ.
ಕಾಳು ಮೆಣಸಿನ ಪುಡಿಯನ್ನು ಮಜ್ಜಿಗೆಯೊಂದಿಗೆ ಬೆರೆಸಿ ಸೇವನೆ ಮಾಡಿದರೆ ಹೊಟ್ಟೆ ನೋವು, ಹೊಟ್ಟೆಯ ಸೆಳೆತ ನಿವಾರಣೆಯಾಗುತ್ತದೆ. ಜೊತೆಗೆ ಹೊಟ್ಟೆಯ ಹುಳದ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ.