ಬೆಂಗಳೂರು: ಸ್ಯಾಂಟ್ರೊ ರವಿಯನ್ನು ಗುಜರಾತ್ ನಲ್ಲಿ ಬಂಧಿಸುವ ಮೊದಲು ಗೃಹ ಸಚಿವರು ಅಲ್ಲಿಗೆ ಏಕೆ ಹೋಗಿದ್ದರು? ಅವರ ಭೇಟಿಯ ಬಗ್ಗೆ ನನಗೆ ಅನುಮಾನಗಳಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪುಣೆಯಲ್ಲಿದ್ದ ಸ್ಯಾಂಟ್ರೊ ರವಿಯನ್ನು ಗುಜರಾತ್ ಗೆ ಕರೆಸಿದವರು ಯಾರು? ಅಲ್ಲಿ ಬಂಧನಕ್ಕೂ ಮೊದಲು ಆತನಿಗೆ ಏನು ಆಶ್ವಾಸನೆ ನೀಡಲಾಗಿದೆ ಎಂದು ಪ್ರಶ್ನಿಸಿದರು.
ರಾಜ್ಯದಿಂದ ಪರಾರಿಯಾಗಿದ್ದ ರವಿಯನ್ನು ಗುಜರಾತ್ ಗೆ ಕರೆಸಿಕೊಳ್ಳಲಾಗಿದೆ. ಅಲ್ಲಿ ಆತನನ್ನು ಬಂಧಿಸುವ ಪ್ರಕ್ರಿಯೆ ನಡೆದಿದೆ. ಅಲ್ಲಿಗೆ ಆತನನ್ನು ಕರೆದುಕೊಂಡು ಬಂದವರು ಯಾರು ಎಂಬುದು ಬಹಿರಂಗವಾಗಬೇಕು ಎಂದರು.
ನಮ್ಮ ಅವಧಿಯಲ್ಲಿ ಈ ರೀತಿ ದಂಧೆಕೋರರು, ದಲ್ಲಾಳಿಗಳ ಕೈಗೆ ಅಧಿಕಾರಿಗಳ ವರ್ಗಾವಣೆ ಅಧಿಕಾರ ನೀಡಿರಲಿಲ್ಲ. ಬೆಟ್ಟಿಂಗ್ ದಂಧೆಕೋರರು ಸರ್ಕಾರದ ಮೇಲೆ ಹಿಡಿತ ಸಾಧಿಸಿರಲಿಲ್ಲ. ಅಂತಹವರನ್ನು ಮುಖ್ಯಮಂತ್ರಿ ಕಚೇರಿಯೊಳಕ್ಕೆ ಬಿಟ್ಟುಕೊಂಡಿರಲಿಲ್ಲ ಎಂದರು.
ಬಿಜೆಪಿ ಸರ್ಕಾರದ ಸಚಿವರು, ಶಾಸಕರ ವೈಯಕ್ತಿಕ ನಡವಳಿಕೆ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.














