ರಾಂಚಿ: ಜಾರ್ಖಂಡ್ ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಟುಕನಾಗಿ ಕೆಲಸ ಮಾಡುವ 25 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಅರಣ್ಯ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಂದು ಆಕೆಯ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ಬುಧವಾರ (ನ.28) ತಿಳಿಸಿದ್ದಾರೆ.
ಆರೋಪಿಯನ್ನು ನರೇಶ್ ಭೇಂಗ್ರಾ ಎಂದು ಗುರುತಿಸಲಾಗಿದೆ.
ನವೆಂಬರ್ 24 ರಂದು ಜರಿಯಾಗಢ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ಬಳಿ ಬೀದಿ ನಾಯಿಯೊಂದು ಮಾನವ ದೇಹದ ಭಾಗಗಳೊಂದಿಗೆ ಪತ್ತೆಯಾದಾಗ ಹತ್ಯೆಯಾದ ಹದಿನೈದು ದಿನಗಳ ನಂತರ ವಿಷಯ ಬೆಳಕಿಗೆ ಬಂದಿದೆ.
ಕಳೆದೆರಡು ವರ್ಷಗಳಿಂದ ತಮಿಳುನಾಡಿನ ಖುಂಟಿ ಜಿಲ್ಲೆಯ 24ರ ಹರೆಯದ ಯುವತಿಯೊಂದಿಗೆ ಭೇಂಗ್ರಾ ಲಿವ್-ಇನ್ ಸಂಬಂಧದಲ್ಲಿದ್ದರು. ಸ್ವಲ್ಪ ಸಮಯದ ಹಿಂದೆ, ಜಾರ್ಖಂಡ್ಗೆ ಮರಳಿದ್ದ ಭೇಂಗ್ರಾ ಪ್ರೇಯಸಿಗೆ ವಿಚಾರ ತಿಳಿಸದೆ, ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಬಳಿಕ ಪತ್ನಿಯನ್ನು ಜಾರ್ಖಂಡ್ ನಲ್ಲಿ ಬಿಟ್ಟು ತಮಿಳುನಾಡಿಗೆ ಮರಳಿದ್ದ.
“ನವೆಂಬರ್ 8 ರಂದು ಖುಂಟಿಯಲ್ಲಿ ಈ ಕ್ರೂರ ಘಟನೆ ಸಂಭವಿಸಿದೆ. ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ ಆರೋಪಿಯು ಪ್ರೇಯಸಿಯನ್ನು ಜರಿಯಾಗಢ್ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ತನ್ನ ಮನೆಯ ಸಮೀಪವಿರುವ ಕಾಡಿಗೆ ಕರೆದೊಯ್ದು ಕೊಲೆ ಮಾಡಿ ಶವವನ್ನು ಕೊಯ್ದಿದ್ದಾನೆ. ವ್ಯಕ್ತಿಯನ್ನು ಬಂಧಿಸಲಾಗಿದೆ” ಎಂದು ಖುಂಟಿ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಭೇಂಗ್ರಾನ ಮದುವೆಯ ಬಗ್ಗೆ ಅರಿಯದ ಮಹಿಳೆ, ಖುಂಟಿಗೆ ಹಿಂತಿರುಗುವಂತೆ ಒತ್ತಡ ಹೇರಿದಳು ಎಂದು ಸಿಂಗ್ ಹೇಳಿದರು. ರಾಂಚಿ ತಲುಪಿದ ನಂತರ, ಅವರು ನವೆಂಬರ್ 24 ರಂದು ರೈಲು ಹತ್ತಿ ಭೇಂಗ್ರಾನ ಹಳ್ಳಿಗೆ ತೆರಳಿದರು.
“ಆರೋಪಿ ಅವಳನ್ನು ತನ್ನ ಮನೆಯ ಸಮೀಪ ಆಟೋರಿಕ್ಷಾದಲ್ಲಿ ಕರೆದೊಯ್ದು ಕಾಯುವಂತೆ ಹೇಳಿ, ಚೂಪಾದ ಆಯುಧಗಳೊಂದಿಗೆ ಹಿಂತಿರುಗಿದನು. ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ನಂತರ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ ಅಲ್ಲಿಂದ ಹೊರಟು ಹೋಗಿದ್ದಾನೆ. ಬಳಿಕ ಊರಿಗೆ ಹೋಗಿಗೆ ತನ್ನ ಪತ್ನಿಯ ಜತೆ ವಾಸವಾಗಿದ್ದ” ಎಂದು ಸಿಂಗ್ ಹೇಳಿದರು.
ಆದರೆ ಯುವತಿಯು ತಾನು ರೈಲನ್ನು ಹತ್ತಿದ್ದು, ತನ್ನ ಸಂಗಾತಿಯೊಂದಿಗೆ ವಾಸಿಸುವುದಾಗಿ ತನ್ನ ತಾಯಿಗೆ ತಿಳಿಸಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೊಲೆಯಾದ ಮಹಿಳೆಯ ಆಧಾರ್ ಕಾರ್ಡ್ ಸೇರಿದಂತೆ ಸಾಮಾನುಗಳಿದ್ದ ಬ್ಯಾಗ್ ಕೂಡ ಕಾಡಿನಲ್ಲಿ ಪತ್ತೆಯಾಗಿದೆ. ಮಹಿಳೆಯ ತಾಯಿಯನ್ನು ಸ್ಥಳಕ್ಕೆ ಕರೆಸಿದಾಗ ಅವರು ತಮ್ಮ ಮಗಳ ವಸ್ತುಗಳನ್ನು ಗುರುತಿಸಿದ್ದಾರೆ.














