ಮನೆ ಅಪರಾಧ ಪ್ರತ್ಯೇಕ ಪ್ರಕರಣ: ದೇಹದ ಅರ್ಧಭಾಗ ಕತ್ತರಿಸಿದಂತೆ ಇಬ್ಬರು ಮಹಿಳೆಯರ ಶವ ಪತ್ತೆ

ಪ್ರತ್ಯೇಕ ಪ್ರಕರಣ: ದೇಹದ ಅರ್ಧಭಾಗ ಕತ್ತರಿಸಿದಂತೆ ಇಬ್ಬರು ಮಹಿಳೆಯರ ಶವ ಪತ್ತೆ

0

ಮಂಡ್ಯ(Mandya): ಎರಡು ಪ್ರತ್ಯೇಕ ಪ್ರಕರಣದಲ್ಲಿ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿರುವುದು ಜನರನ್ನು ಆತಂಕಕ್ಕೆ ದೂಡಿದೆ.

ಪಾಂಡವಪುರ ಟೌನ್ ಪೊಲೀಸ್ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಬೇರೆ ಬೇರೆ ಕಡೆ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಮೃತ ದೇಹ ಪತ್ತೆಯಾಗಿವೆ. ಪಾಂಡವಪುರ ತಾಲೂಕಿನ ಬೇಬಿ ಕೆರೆ- ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆ ಇರುವ ಬೇಬಿ ಕೆರೆಯ ನಾಲೆಯಲ್ಲಿ 30 ರಿಂದ 35 ವರ್ಷ ಪ್ರಾಯದ ಮಹಿಳೆಯ ಶವ ಅರ್ಧ ಕತ್ತರಿಸಿದ ರೂಪದಲ್ಲಿ ಪತ್ತೆಯಾಗಿದೆ.

ಮತ್ತೊಂದು ಮಹಿಳೆಯ ಶವ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಅರೆ ಕೆರೆ ಗ್ರಾಮದ ಬಳಿಯ ಸಿಡಿಎಸ್ ನಾಲೆಯಲ್ಲಿ‌ ತೇಲಿ ಬಂದು ರೈತನ ಜಮೀನಿನಲ್ಲಿ ಸಿಕ್ಕಿದೆ. ಪತ್ತೆಯಾದ ಎರಡೂ ಶವಗಳ ಅರ್ಧಭಾಗವನ್ನು ಕತ್ತರಿಸಿ, ಎರಡು ಕಾಲುಗಳನ್ನು ಕಟ್ಟಿ ಚೀಲದಲ್ಲಿ ಹಾಕಿ ನೀರಿಗೆ ಬಿಸಾಡಿದ್ದಾರೆ.

ಸುದ್ದಿ ತಿಳಿದು ಪಾಂಡವಪುರ ಹಾಗೂ ಅರೆಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ‌ ನಡೆಸಿದ್ದಾರೆ. ಸಿಕ್ಕಿರುವ ಎರಡೂ ಶವಗಳ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದ್ದು,ಬೇರೆಲ್ಲೋ ಕೊಲೆ ಮಾಡಿ ಬಳಿಕ ದೇಹ ಕತ್ತರಿಸಿ ಸಾಕ್ಷ್ಯ‌ ನಾಶಕ್ಕೆ ದುಷ್ಕರ್ಮಿಗಳು ಯತ್ನಿಸಿರಬೇಕು ಎಂದು‌ ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ಈ ಎರಡು ಶವಗಳ ಉಳಿದರ್ಧ ದೇಹದ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತಮ್ಮ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಪತ್ತೆಯಾಗಿರುವ ಈ ಇಬ್ಬರು ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕಿ‌ ಈ ಪ್ರಕರಣ ಭೇಧಿಸಲು ವಿಶೇಷ ಪೊಲೀಸ್ ತಂಡ ರಚಿಸಿದ್ದಾರೆ.