ಮನೆ ಆರೋಗ್ಯ ಸದಾಪುಷ್ಪ (ಕಾಶಿ ಕಣಗಿಲೆ )

ಸದಾಪುಷ್ಪ (ಕಾಶಿ ಕಣಗಿಲೆ )

0

       ಸದಾಪುಷ್ಟಿಯ ಮೂಲಸ್ಥಾನ ಮಡಗಾಸ್ಕರ್. ಇದನ್ನು ಸಾಮಾನ್ಯವಾಗಿ ಉದ್ಯಾನವನಗಳಲ್ಲಿ ಬೆಳೆಯಲಾಗುತ್ತದೆ. ಉದ್ಯಾನದ ಅಂಚುಗಳಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ. ಇದನ್ನು ದಕ್ಷಿಣ ಆಫ್ರಿಕಾ, ಭಾರತ, ಶ್ರೀಲಂಕಾಗಳಲ್ಲಿ ಸಿಹಿಮೂತ್ರರೋಗಕ್ಕೆ ಮನೆಯೌಷಧಿಯಾಗಿ ಬಳಸಲಾಗುತ್ತದೆ. ಕರ್ನಾಟಕದ ಕೆಲವೆಡೆ ಇದನ್ನು ‘ಪರಂಗಿ ಮಲ್ಲಿ’ ಎಂದು ಕರೆಯುತ್ತಾರೆ. ಎಲ್ಲ ಕಾಲದಲ್ಲಿಯೂ ಹೂ ಬಿಡುವಂತಹದಾದ್ದರಿಂದ ‘ಸದಾ ಬಹಾರ್’, ‘ಸದಾಪುಷ್ಟಿ’ ಅಂತಲೂ ಕರೆಯಲಾಗುತ್ತದೆ. ಮೈಸೂರು ಪ್ರಾಂತ್ಯದಲ್ಲಿ ‘ಹೇನು ಹೂ’ ಎಂತಲೂ ಕರೆಯುತ್ತಾರೆ.

Join Our Whatsapp Group

       ಕಾಶಿ ಕಣಗಿಲೆ (ಸ್ಮಶಾನ ಕಣಗಿಲೆ) ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ. ಇದು ಬಿಳಿ ಮತ್ತು ಕೆಂಪು ಹೂಗಳು ಬಿಡುವುದರಿಂದ ಬಿಳಿ ಮತ್ತು ಕೆಂಪು ಕಾಶಿ ಕಣಿಗಲು, ಪ್ರಾಣಿಗಳು ಸೇವಿಸದೇ ಇರುವುದರಿಂದ ಮತ್ತು ವಿಷಯುಕ್ತವಾದ್ದರಿಂದ ವಿಷ ಕಣಿಗಲು, ದೇಗುಲಗಳ ಸಮೀಪ ಹಾಗೂ ಸ್ಮಶಾನದ ಸುತ್ತಮುತ್ತ ಬೆಳೆಯುವುದರಿಂದ ಗಣೇಶನ ಹೂ, ಸ್ಮಶಾನ ಮಲ್ಲಿಗೆ ಎಂದು, ವರ್ಷದ ಎಲ್ಲಾ ಋತುಗಳಲ್ಲಿ ಹೂ ಬಿಡುವುದರಿಂದ ಸದಾಪುಷ್ಪ ಎಂದು ಹೆಸರುವಾಸಿಯಾಗಿದೆ.

 ಸಸ್ಯವರ್ಣನೆ

ಇದು 2-3 ಅಡಿ ಎತ್ತರ ಬೆಳೆಯುತ್ತದೆ. ಕಾಂಡ ಬಹಳವಾಗಿ ಕವಲೊಡೆದು ಬೆಳೆಯುವುದರಿಂದ ಪೊದೆಯಂತಾಗುತ್ತದೆ. ಕಾಂಡದ ಮೇಲೆ ಸಾಮಾನ್ಯ ರೀತಿಯ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿವೆ. ಹೂಗಳ ಬಣ್ಣ ಗುಲಾಬಿ ಕೆಂಪು ಅಥವಾ ಬಿಳಿ ಎಲೆಗಳ ಮೇಲ್ಬಾಗ ದಟ್ಟ ಹಸಿರಾಗಿದ್ದು ಹೊಳಪಿನಿಂದ ಕೂಡಿದೆ. ಆದರೆ ಎಲೆಯ ಕೆಳಭಾಗ ಹೊಳಪಿಲ್ಲದೆ ತಿಳಿ ಹಸಿರಾಗಿದೆ. ಗುಲಾಬಿಗೆಂಪಿನ ಮತ್ತು ಬಿಳಿ ಹೂ ಬಿಡುವ ಸಸ್ಯಗಳು ಬಾಹ್ಯನೋಟಕ್ಕೆ ಪ್ರತ್ಯೇಕ ತಳಿಗಳೆಂಬಂತೆ ಕಂಡುಬಂದರೂ ವಾಸ್ತವವಾಗಿ ಎರಡು ತಳಿಗಳು ಒಂದೇ ಆಗಿವೆ. ಒಂದೇ ಸಸ್ಯದ ಬೇರೆಬೇರೆ ರೆಂಬೆಗಳಲ್ಲಿ ಎರಡೂ ಬಣ್ಣದ ಹೂಗಳಿರುವುದು ಈ ವಾದಕ್ಕೆ ಪುಷ್ಟಿ ಕೊಡುತ್ತದೆ. ಕ್ಯಾಥರಾಂತಸ್ ರೋಸಿಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ಆಪೊಸೈನೇಸಿ ಕುಟುಂಬಕ್ಕೆ ಸೇರಿದೆ.

 ಮಣ್ಣು

       ಇದನ್ನು ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಆಮ್ಮಿಯ ಕ್ಷಾರವುಳ್ಳ ಅಥವಾ ಜಿಗುಟು ಮಣ್ಣಿನಲ್ಲಿ ಬೆಳೆಯಲಾಗುವುದಿಲ್ಲ, ಫಲವತ್ತಾದ ಮರಳು ಮಿಶ್ರಿತ ಗೋಡುಮಣ್ಣು ಈ ಬೆಳೆಗೆ ಸೂಕ್ತ

 ಹವಾಗುಣ

     ಉಷ್ಣ ಹಾಗೂ ಸಮಶೀತೋಷ್ಣವಲಯಗಳಲ್ಲಿ ಸಮರ್ಪಕವಾಗಿ ಬೆಳೆಯುತ್ತದೆ. ಕೆಲವೊಮ್ಮೆ ಊರ ಹೊರವಲಯದಲ್ಲಿ, ಪಾಳು ದೇಗುಲಗಳ ಸಮೀಪ, ಕೋಟೆ ಕೊತ್ತಲಗಳ ಸಮೀಪ ಮತ್ತು ಸ್ಮಶಾನದ ಬಯಲಿನಲ್ಲಿ ಪ್ರಕೃತಿ ಸಹಜ ಬೆಳೆಯಂತೆ ಕಂಡುಬರುತ್ತದೆ.

 ತಳಿಗಳು

        ಲೋಕಲ್ ಮತ್ತು ನಿರ್ಮಲ್ ಎಂಬ ತಳಿಗಳು ಇವೆ. ಕಾಶಿ ಕಣಗಿಲೆಯಲ್ಲಿ 3 ವಿಧದ ಹೂಗಳನ್ನು ಹೊಂದಿರುವ ಗಿಡಗಳು ಕಂಡುಬರುತ್ತವೆ. ಗುಲಾಬಿ (ನೇರಳೆ) ಬಣ್ಣದ ಹೂಗಳು, ಬಿಳಿ ಹೂಗಳು, ಗುಲಾಬಿ (ನೇರಳೆ) ಬಣ್ಣದ ಮಧ್ಯಭಾಗವನ್ನು ಹೊಂದಿದ ಬಿಳಿ ಹೂಗಳು ಇವೆ.

 ಬೇಸಾಯ ಕ್ರಮಗಳು

        ಕಾಶಿ ಕಣಗಿಲೆಯನ್ನು ಬೀಜಗಳಿಂದ ವೃದ್ಧಿ ಮಾಡಬಹುದು. ಬೀಜಗಳು ಬಹಳ ಬೇಗ ಮೊಳಕೆಯೊಡೆಯುವ ಸಾಮರ್ಥ್ಯ ಕಳೆದುಕೊಳ್ಳುವುದರಿಂದ ಕೊಯ್ದಾದ ಕೂಡಲೇ ನೇರ ಬಿತ್ತನೆಯಾಗಲಿ ಅಥವಾ ಸಸಿ ಮಡಿಗಳಲ್ಲಾಗಲಿ ಬೀಜಗಳನ್ನು ಬಿತ್ತಬೇಕು.

      ಒಂದು ಚ. ಮೀಟರ್ ಜಾಗಕ್ಕೆ 2.5 ಗ್ರಾಂನಷ್ಟು ಬೀಜಗಳು ಬೇಕಾಗುತ್ತವೆ. ಬೀಜಗಳನ್ನು ಸಣ್ಣ ಮರಳಿನೊಂದಿಗೆ ಬೆರೆಸಿ ಬಿತ್ತಬೇಕಾಗುತ್ತದೆ. ಬೀಜ ಮೊಳೆತು ಸಸಿ ಬೆಳೆದ ಮೇಲೆ 45 ಸೆಂ.ಮೀ. ಅಂತರವಿಟ್ಟು ಮಿಕ್ಕ ಸಸಿಗಳನ್ನು ಕೀಳಬೇಕು.

 ಕಳೆ ಹತೋಟಿ

ನಾಟಿ ಮಾಡಿದ ನಂತರ ಕಳೆ ಕಂಡ ತಕ್ಷಣ ತೆಗೆಯಬೇಕು.

 ನೀರಾವರಿ

       ಮೊದಲಲ್ಲಿ ಆಗಾಗ್ಗೆ ನೀರು ಹಾಯಿಸಬೇಕು. ನಂತರ ಒಂದು ವಾರಕ್ಕೊಮ್ಮೆ ನೀರು ಕೊಡಬಹುದು.

 ಸಸ್ಯ ಸಂರಕ್ಷಣೆ

        ಇದು ಗಡುತರ ಸಸ್ಯವಾಗಿದ್ದರಿಂದ ಕೀಟ ಹಾಗೂ ರೋಗ ಬಾಧೆಗೆ ಗುರಿಯಾಗುವುದಿಲ್ಲ. ಆದರೂ ಕೆಲವೊಮ್ಮೆ ವೈರಸ್ ಬಾಧೆಯಿಂದ ಸಣ್ಣೆಲೆ ಮತ್ತು ತುದಿಯಿಂದ ಒಣಗುವಿಕೆ ಕಂಡುಬರುತ್ತದೆ. ಈ ರೀತಿಯ ಗಿಡಗಳನ್ನು ಕಿತ್ತು ಸುಡಬೇಕು.

 ಕೊಯ್ದು ಮತ್ತು ಇಳುವರಿ

       ಬೀಜಬಿತ್ತಿದ ಒಂದು ವರ್ಷದ ನಂತರ ಕೊಯ್ದು ಮಾಡಿ, ಎಲೆ, ಕಾಂಡ ಮತ್ತು ಬೀಜಗಳನ್ನು ಒಣಗಿಸಬೇಕು. ನಂತರ ಬೇರುಗಳನ್ನು ಸಹ ಪಡೆಯಬಹುದು. ಪೂರ್ತಿ ಗಿಡವನ್ನು ಕಿತ್ತ ನಂತರ ನೆರಳಿನಲ್ಲಿ ಒಣಗಿಸಿ ಹಗುರವಾಗಿ ಗಿಡವನ್ನು ನೆಲಕ್ಕೆ ಬಡಿದರೆ ಬೀಜಗಳುದೇರ್ವಡುತ್ತವೆ. ಬಲಿತ ಕಾಯಿಗಳನ್ನು ಗಿಡ ಕೀಳುವುದಕ್ಕೆ ಮೊದಲೇ ಕೊಯ್ದು ಮಾಡುವುದರಿಂದ ಬೀಜಗಳನ್ನು ಮುಂದೆ ಉಪಯೋಗಿಸಿಕೊಳ್ಳಬಹುದು. ಇದರಿಂದ 1.5 ಕೆ.ಜಿ.ಯಷ್ಟು ಕಾಂಡಭಾಗವನ್ನು 3 ಕೆ.ಜಿ.ಯಷ್ಟು ಎಲೆಯ ಇಳುವರಿಯನ್ನು ಪಡೆಯಬಹುದು

 ಉಪಯುಕ್ತ ಭಾಗಗಳು

ಬೇರು, ಎಲೆ ಮತ್ತು ಕಾಂಡ.

 ರಾಸಾಯನಿಕ ಘಟಕಗಳು

ವಿನ್ ಕ್ರಿಸ್ಟಿನ್, ವಿನ್ ಬ್ಲಾಸ್ಟಿನ್.

 ಔಷಧೀಯ ಗುಣಗಳು

★ ಕ್ರಿಮಿಕೀಟಗಳು ಕಚ್ಚಿದಾಗ ಸದಾಪುಷ್ಟಿಯ ಎಲೆಯನ್ನು ಅರೆದು ಲೇಪಿಸಿದಲ್ಲಿ ಊತ, ನೋವು ಕಡಿಮೆಯಾಗುತ್ತದೆ.

★* ಅಧಿಕ ರಕ್ತಸ್ರಾವದಿಂದ ಬಳಲುವ ಸ್ತ್ರೀಯರಿಗೆ ಸದಾಪುಷ್ಪಿಯ ಎಲೆಗಳ ಕಷಾಯ ಉತ್ತಮ ಪರಿಣಾಮ ಬೀರುತ್ತದೆ.

★ ಸದಾಪುಷ್ಟಿಯ ಬೇರು ವಿಷವುಳ್ಳದ್ದಾಗಿದ್ದು ಈ ಗಿಡದ ಎಲ್ಲ ಭಾಗಗಳೂ ಆದರಲ್ಲಿಯೂ ಬೇರಿನ ತೊಗಟೆಯಲ್ಲಿ ಅಲ್ಕಲಾಯ್ಡ್ಗಳಿವೆ. ಈ ಅಲ್ಕಲಾಯ್‌ಗಳು ರಕ್ತದೊತ್ತಡ ತಗ್ಗಿಸುತ್ತವೆ. ನಿದ್ರಾಜನಕವಾಗಿರುವುದಲ್ಲದೇ ಆತಂಕವನ್ನು ಕಡಿಮೆಮಾಡುತ್ತವೆ. ದೇಹದ ಮಾಂಸಖಂಡಗಳಲ್ಲಿ ಬಿಗಿತವನ್ನು ಸಡಿಲಗೊಳಿಸುವುದಲ್ಲದೇ ಭಿನ್ನತೆಯನ್ನು ತಗ್ಗಿಸುತ್ತದೆ. ಈ ಆಲ್ಕಲಾಯ್ಡ್ಗಳು ಕಾಲರಾ ಉತ್ಪತ್ತಿ ಮಾಡುವ Vibno Cholerae ವ್ಯಾಕ್ಟಿರಿಯಾದ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ.

★ ಸಿಹಿಮೂತ್ರರೋಗವುಳ್ಳವರು ಸದಾಪುಷ್ಟಿಯ ಎಲೆಗಳನ್ನು ಪ್ರತಿದಿನ ಬೆಳಗ್ಗೆ (4-6) ಆಗಿದು ತಿನ್ನುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

★ ಚೇಳು ಕಡಿತ : ಸದಾಪುಷ್ಟಿಯ ಬೇರನ್ನು ಅರೆದು ಚೇಳು ಕಡಿದಾಗ ಲೇಪ ಹಾಕುವುದರಿಂದ ಉರಿ, ನೋವು ಕಡಿಮೆಯಾಗುತ್ತದೆ.

★ ಅಧಿಕ ರಕ್ತದೊತ್ತಡ : ಸದಾಪುಷ್ಟಿಯ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ

ಮಾಡಿಟ್ಟುಕೊಳ್ಳಬೇಕು. ಒಂದು ಚಮಚೆ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಕಾಯಿಸಿ ಕಷಾಯ ತಯಾರಿಸಬೇಕು. ಈ ಕಷಾಯವನ್ನು ಬೆಳಗ್ಗೆ ಹಾಗೂ ರಾತ್ರಿ ಕುಡಿಯಬೇಕು.

★ ಸುಟ್ಟಗಾಯ : ಸುಟ್ಟಗಾಯಗಳಾಗಿ ಬೊಬ್ಬೆಯುಂಟಾದಾಗ ಸದಾಪುಷ್ಪಿಯ ತಾಜಾ ಎಲೆ ಗಳನ್ನು ಜಜ್ಜಿ ರಸ ತೆಗೆದು ಅದರಲ್ಲಿ ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ಗಾಯದ ಮೇಲೆ ಲೇಪ ಹಾಕಬೇಕು. ಉರಿ ಕಡಿಮೆಯಾಗುವುದಲ್ಲದೇ ಗಾಯವೂ ಬೇಗ ವಾಸಿಯಾಗುವುದು.

★ ಭೇದಿಯುಂಟಾದಾಗ : ಹತ್ತು ಗ್ರಾಂ ಸದಾಪುಷ್ಪಿಯ ತಾಜಾ ಎಲೆಗಳನ್ನು ನೀರಿನಲ್ಲಿ ಕುಡಿಸಿ ಕಷಾಯ ತಯಾರಿಸಬೇಕು. ತಣ್ಣಗಾದ ನಂತರ ಎರಡು ಭಾಗ ಮಾಡಿ ಬೆಳಗ್ಗೆ ಹಾಗೂ ರಾತ್ರಿ ಕುಡಿಯಬೇಕು

★ ಗಾಯಗಳಾದಾಗ : ಮಕ್ಕಳು ಆಟವಾಡುವಾಗ ಗಾಯಗಳಾಗುವುದು ಸಾಮಾನ್ಯ. ಅಂತಹ ಸಮಯದಲ್ಲಿ ಸದಾಪುಷ್ಪಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡಿದ್ದು ಆ ಪುಡಿಯನ್ನು ಗಾಯಗಳ ಮೇಲೆ ಲೇಪಿಸಿದಲ್ಲಿ ಗಾಯ ವಾಸಿಯಾಗುತ್ತದೆ.

★ ಮಲಬದ್ಧತೆ : ಮಲಬದ್ಧತೆಯ ತೊಂದರೆಯಿಂದ ಬಳಲುವವರು ಸದಾಪುಷಿಯ ತಾಜಾ ಎಲೆಗಳ ಕಷಾಯ ತಯಾರಿಸಿ ರಾತ್ರಿ ಮಲಗುವ ಮುಂಚೆ ಕುಡಿಯಬೇಕು.

 ಸಂಶೋಧನೆ

       ಸದಾಪುಷ್ಪಿಯಲ್ಲಿರುವ ಕೆಲವು ರಾಸಾಯನಿಕ ಸತ್ವಗಳು ಹೃದಯ ಸಂಬಂಧವಾದ ರೋಗಗಳನ್ನು ವಾಸಿ ಮಾಡುತ್ತವೆಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಕ್ಯಾನ್ಸರ್ ರೋಗಕ್ಕೂ ಇದರಲ್ಲಿನ ಕೆಲವು ಅಲ್ಕಲಾಯ್ಡ್ಗಳಿಂದ ಔಷಧಿ ತಯಾರಿಸುವುದರ ಕುರಿತು ಸಂಶೋಧನೆ ನಡೆಯುತ್ತಿದೆ. ಕೆಲವು ಪ್ರಾಣಿಗಳಿಗೆ (ಇಲಿ, ಮೊಲ, ಗಿನಿಪಿಗ್) ಕ್ಯಾನ್ಸರ್ ರೋಗವನ್ನು ಕೃತಕವಾಗಿ ಉಂಟುಮಾಡಿ ಸದಾಪುಷಿಯಿಂದ ತಯಾರಿಸಿದ ಔಷಧಿಯನ್ನು ಚುಚ್ಚುಮದ್ದಿನ ಮೂಲಕ ಆ ಪ್ರಾಣಿಗಳಿಗೆ ನೀಡಲಾಯಿತು. ಇದರಿಂದ ಕೆಲವು ಬಗೆಯ ಕ್ಯಾನ್ಸ‌ರ್ ರೋಗಗಳು ಗುಣವಾದವು. ಸದಾಪುಷ್ಪಿಯ ಎಲೆಯಿಂದ ಹೊರತೆಗೆದ ಆಲ್ಕಲಾಯ್ಡ್ ನಿಂದ ಗುಣ ಕಂಡುಬಂದಿತು. ಇದೇ ನಿಟ್ಟಿನಲ್ಲಿ ಸಂಶೋಧನೆಗಳು ಮುಂದುವರೆದವು. ಮನುಷ್ಯ ಶರೀರದ ಮೇಲೂ ಇದೇ ಔಷಧಿಯನ್ನು ಪ್ರಯೋಗಿಸಲಾಯ್ತು. ಯಾವ ಔಷಧಿಗಳಿಂದಲೂ ನಿಯಂತ್ರಣಕ್ಕೆ ಬರದ ಕ್ಯಾನ್ಸರ್, ಸದಾಪುಷ್ಪಿಯ ಅಲ್ಕಲಾಯ್ಡ್ ಗಳಿಂದ ಹಿಡಿತಕ್ಕೆ ಬಂದುದು ಕಂಡುಬಂದಿದೆ. ಮುಖ್ಯವಾಗಿ ‘ಹಾಡ್ಜ್ ಕಿನ್ ಡಿಸೀಸ್’ಗೆ ಇದು ಅತ್ಯುತ್ತಮ ಔಷಧಿಯಾಗಿದೆ.

 ಇತರ ಭಾಷೆಗಳಲ್ಲಿ

ಸಂಸ್ಕೃತ     — ಸದಾವುಷ್ಟಿ

 ಹಿಂದಿ    — ಸದಾ ಬಹಾರ್

ತೆಲುಗು    — ತೆಲ್ಲನಿ ಗನ್ನೇರು, ಬಿಲ್ಲಗನ್ನೇರು

ಮರಾಠಿ     — ಸದಾಫೂಲ್

ಮಲಯಾಳಂ   — ಉಷಾಮಲಾರೈ

ತಮಿಳು   — ಸುದುಕಡು ಮಲ್ಲಿಕೈ, ನಿತ್ಯ ಕಲ್ಯಾಣಿ

 ಇಂಗ್ಲಿಷ್  — Periwinkle

ವೈಜ್ಞಾನಿಕ ಹೆಸರು  — Catharanthus rosens