ಭಾರತ ಮತ್ತು ಪಾಕಿಸ್ತಾನದ ನಡುವೆ ದಾಳಿ, ಪ್ರತಿದಾಳಿಗಳು ನಡೆಯುತ್ತಿದೆ. ಪಾಕಿಸ್ತಾನ ಉಗ್ರರು ಪಹಲ್ಗಾಮ್ ಮೇಲೆ ದಾಳಿ ನಡೆಸಿ ಭಾರತೀಯ ನಾಗರಿಕರನ್ನು ಹತ್ಯೆ ಮಾಡಿದ ನಂತರ ಪಾಕ್ ಹಾಗೂ ಭಾರತದ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿದೆ. ಭಾರತ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಅಹಂಕಾರ ಪಡುತ್ತಿದ್ದ ಪಾಕ್ಗೆ ಭಾರತದ ಸೇನೆ ತಕ್ಕ ಪಾಠ ಕಲಿಸಿದೆ. ಆಪರೇಷನ್ ಸಿಂಧೂರ್ ಮೂಲಕ ಉಗ್ರರನ್ನು ಗುರಿಯಾಗಿಸಿ ಪಾಕ್ ಮೇಲೆ ಭಾರತ ಕಳೆದ ಎರಡು – ಮೂರು ದಿನಗಳಿಂದ ದಾಳಿ ನಡೆಸಿದೆ. ಪಾಕ್ ಕೂಡ ಭಾರತದ ಅನೇಕ ಕಡೆ ದಾಳಿ ನಡೆಸಿದೆ.ಆದರೆ ಅದನ್ನು ಭಾರತದ ಸೈನ್ಯ ಹಿಮ್ಮೆಟ್ಟಿಸಿದೆ. ಇದೀಗ ಭಾರತ ಪಾಕ್ನ ನಾಲ್ಕು ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿದೆ.
ಶನಿವಾರ ಅಂದರೆ ಇಂದು ಮುಂಜಾನೆ, ಭಾರತ ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದೆ. ಪಾಕಿಸ್ತಾನದ ಹಲವು ಕಡೆ ಸ್ಫೋಟಗಳ ಶಬ್ದಗಳು ಕೇಳಿಬಂದಿದೆ. ಪಾಕಿಸ್ತಾನವು ತನ್ನ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ರಾಜಧಾನಿ ಇಸ್ಲಾಮಾಬಾದ್ ಬಳಿಯ ರಾವಲ್ಪಿಂಡಿಯ ಗ್ಯಾರಿಸನ್ ನಗರದಲ್ಲಿರುವ ನೂರ್ ಖಾನ್ ವಾಯುನೆಲೆ, ಚಕ್ವಾಲ್ ನಗರದ ಮುರಿಯ್ ವಾಯುನೆಲೆ ಮತ್ತು ಪೂರ್ವ ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆಗಳ ಮೇಲೆ ಭಾರತ ದಾಳಿಯನ್ನು ನಡೆಸಿದೆ ಎಂದು ಹೇಳಲಾಗಿದೆ.
ರಕ್ಷಣಾ ಮೂಲಗಳ ಪ್ರಕಾರ, ಸೇನೆಯು ಪಾಕಿಸ್ತಾನದ ಪೋಸ್ಟ್ಗಳು ಮತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್ಗಳನ್ನು ನಾಶಪಡಿಸಿದೆ. ಈಗಾಗಲೇ ಭಾರತ ಶ್ರೀನಗರದಲ್ಲಿ ಆಕಾಶದೆತ್ತರಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಸೇನೆ ಹೇಳಿದೆ. ಎಲ್ಒಸಿಯಲ್ಲಿ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ. ಪಾಕಿಸ್ತಾನವು ಭಾರತೀಯ ನಗರಗಳು ಮತ್ತು ಭದ್ರತಾ ತಾಣಗಳ ಮೇಲೆ ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ ಪ್ರತಿದಾಳಿಯನ್ನು ನಡೆಸಿದೆ. ಶುಕ್ರವಾರ, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್ವರೆಗಿನ ಗಡಿಯುದ್ದಕ್ಕೂ 26 ಸ್ಥಳಗಳನ್ನು ಗುರಿಯಾಗಿಸಲು ಸಶಸ್ತ್ರ ಡ್ರೋನ್ಗಳನ್ನು ಕಳಿಸಿದೆ. ಇನ್ನು ವಿಮಾನ ನಿಲ್ದಾಣಗಳು ಮತ್ತು ವಾಯುನೆಲೆಗಳು ಸೇರಿದಂತೆ ಪ್ರಮುಖ ನೆಲೆಗಳ ಮೇಲೆ ಎರಡನೇ ದಿನದ ರಾತ್ರಿಯೂ ದಾಳಿಯನ್ನು ನಡೆಸಿದೆ, ಆದರೆ ಭಾರತೀಯ ಪಡೆ ಅದನ್ನು ವಿಫಲಗೊಳಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿದೆ.
ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳ 15 ನಗರಗಳಲ್ಲಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ಪಾಕಿಸ್ತಾನ ದಾಳಿಯನ್ನು ನಡೆಸಿತ್ತು. ಆದರೆ ಭಾರತದ ಸೇನೆ ಅದನ್ನು ವಿಫಲಗೊಳಿಸಿದೆ. ನಂತರ ಭಾರತ ಪಾಕ್ ಮೇಲೆ ಡ್ರೋನ್ಗಳು ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದೆ.














