ರಾಯಚೂರು: ದೇಶದ ರಕ್ಷಣಾ ನಿಧಿಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ 25 ಲಕ್ಷ ರೂ. ದೇಣಿಗೆಯನ್ನು ಘೋಷಿಸಲಾಗಿದೆ.
ಮಠದ ಆಡಳಿತ ಮಂಡಳಿಯು ಈ ದೇಣಿಗೆಯನ್ನು ಅಧಿಕೃತವಾಗಿ ಘೋಷಿಸಿದ್ದು, ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗಮಾಡುತ್ತಿರುವ ಯೋಧರ ನೆನಪಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಣಿಗೆ ರಕ್ಷಣೆ ನಿಧಿಗೆ ನೇರವಾಗಿ ವರ್ಗಾವಣೆಗೊಂಡಿದ್ದು, ಸಂಬಂಧಿತ ಅಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಲಾಗಿದೆ. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ತಮ್ಮ 13ನೇ ಪಟ್ಟಾಭಿಷೇಕ ಮಹೋತ್ಸವದ ವೇಳೆ ಶ್ರೀಗಳು ಈ ಘೋಷಣೆ ಮಾಡಿದ್ದಾರೆ.
ಭಕ್ತರಿಂದ ತುಲಾಭಾರ ಕಾರ್ಯಕ್ರಮ ನಡೆದ ಬಳಿಕ ಶ್ರೀಗಳು ಮಾತನಾಡಿದರು. ಈ ವೇಳೆ, ದೇಶದಲ್ಲಿ ಅಶಾಂತಿ ಉಂಟಾಗಿದೆ. ತಾತ್ಕಾಲಿಕವಾಗಿ ಯುದ್ಧ ವಿರಾಮ ದೊರಕಿದೆ. ರಾತ್ರಿ ಹಗಲು, ಮಳೆ, ಬಿಸಿಲು ಎನ್ನದೇ ಪ್ರಾಣವನ್ನೂ ಲೆಕ್ಕಿಸದೇ ದೇಶದ ರಕ್ಷಣೆಗಾಗಿ ನಮ್ಮೆಲ್ಲ ಯೋಧರು ಶ್ರಮಿಸುತ್ತಿದ್ದಾರೆ. ಜಾಗೃತರಾಗಿ, ವಿವೇಚನಾ ಪೂರ್ವಕವಾಗಿ ದೇಶದ ಸಮಗ್ರತೆಗೆ, ರಕ್ಷಣೆ, ಭದ್ರತೆಗೆ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ದೇಶದಲ್ಲಿ ಅಶಾಂತಿ ಪರಸ್ಥಿತಿ ಹಿನ್ನೆಲೆ ಸರಳವಾಗಿ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ದೇಶದ ಸೈನಿಕರ ಹಾಗೂ ನಾಗರಿಕರ ರಕ್ಷಣೆ, ಸುರಕ್ಷತೆಗಾಗಿ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ವಿಶೇಷ ಪೂಜೆ, ಹೋಮ-ಹವನವನ್ನು ಸಹ ಈ ವೇಳೆ ನೆರವೇರಿಸಲಾಯಿತು.














