ನವದೆಹಲಿ: ಭಾರತದ ವಿರುದ್ಧ ಪಾಕಿಸ್ತಾನ ಬರೋಬ್ಬರಿ 600 ಡ್ರೋನ್ಗಳಿಂದ ದಾಳಿ ನಡೆಸಿತ್ತು. ಸುಧಾರಿತ ರಕ್ಷಣಾ ವ್ಯವಸ್ಥೆಗಳನ್ನು ಬಳಸಿಕೊಂಡು ಭಾರತ ಎಲ್ಲಾ ಡ್ರೋನ್ಗಳನ್ನು ಹೊಡೆದುರುಳಿಸಿತು.
ಪಹಲ್ಗಾಮ್ನ ಬೈಸರನ್ನಲ್ಲಿ ಭಯೋತ್ಪಾದಕ ದಾಳಿ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 9 ಉಗ್ರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತು. ಪರಿಣಾಮವಾಗಿ 100 ಕ್ಕೂ ಹೆಚ್ಚು ಉಗ್ರರು ಹತರಾದರು. ಇದು ಭಾರತ ಮತ್ತು ಪಾಕ್ ನಡುವಿನ ಸಂಘರ್ಷಕ್ಕೆ ಕಾರಣವಾಯಿತು.
ಭಾರತದ ವಿರುದ್ಧ ಬರೋಬ್ಬರಿ 600 ಡ್ರೋನ್ಗಳಿಂದ ಪಾಕ್ ದಾಳಿ ಮಾಡಿತು. ಟರ್ಕಿ ನಿರ್ಮಿತ ಡ್ರೋನ್ಗಳಿಂದ ದಾಳಿಯಾಗಿತ್ತು. ಲೇಹ್ನಿಂದ ಸರ್ ಕ್ರೀಕ್ವರೆಗೆ 36 ಸ್ಥಳಗಳಲ್ಲಿ ಒಳನುಗ್ಗಲು ಯತ್ನಿಸಿತು. ಜಮ್ಮು, ಪಠಾಣ್ಕೋಟ್, ಉಧಮ್ಪುರ, ಶ್ರೀನಗರ, ಅವಂತಿಪುರ, ಅಮೃತಸರ, ಲುಧಿಯಾನ, ಚಂಡೀಗಢ, ಭಟಿಂಡಾ, ಭುಜ್, ಜೈಸಲ್ಮೇರ್ ಸೇನಾ ನೆಲೆಗಳ ಮೇಲೆ ದಾಳಿಗೆ ಪ್ರಯತ್ನ ಮಾಡಿತ್ತು. ಪಾಕ್ನ ಎಲ್ಲ ಡ್ರೋನ್ಗಳನ್ನು ಭಾರತ ಹೊಡೆದುರುಳಿಸಿತು. 1,000 ಗನ್ ಸಿಸ್ಟಮ್ ಮತ್ತು 750 ಕ್ಷಿಪಣಿಗಳನ್ನು ಬಳಸಿಕೊಂಡು ಭಾರತ ದಾಳಿಯನ್ನು ಹಿಮ್ಮೆಟ್ಟಿಸಿತು. ಎಸ್-400 ಸುದರ್ಶನ ಚಕ್ರ ಮತ್ತು ಡಿ4 ಆಂಟಿ-ಡ್ರೋನ್ ವ್ಯವಸ್ಥೆಯ ಬಳಕೆಯನ್ನೂ ಮಾಡಿದೆ.
ಗಡಿಯಾಚೆಯಿಂದ ಸಂಭಾವ್ಯ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ನಿರೀಕ್ಷಿಸಿತ್ತು. ಪೂರ್ವಸಿದ್ಧತಾ ಕಾರ್ಯವಾಗಿ, ಜಂಟಿ ವಾಯು ರಕ್ಷಣಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಡ್ರೋನ್ ದಾಳಿಯನ್ನು ಹಿಮ್ಮೆಟ್ಟಿಸಲು ಮತ್ತು ಪ್ರಮುಖ ಕಾರ್ಯತಂತ್ರದ ಸ್ವತ್ತುಗಳನ್ನು ರಕ್ಷಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿದವು.
ಭುಜ್ ವಾಯುನೆಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. “ನೀವು ನೋಡಿದ್ದು ಕೇವಲ ಟ್ರೇಲರ್ ಆಗಿತ್ತು. ಸಮಯ ಬಂದಾಗ ನಾವು ಪೂರ್ಣ ಸಿನಿಮಾವನ್ನು ತೋರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.














