ಪಾಟ್ನಾ : ಬಿಹಾರ ವಿಧಾನಸಭೆಯ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಕಾವು ಜೋರಾಗುತ್ತಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸ ಕೂಡ ಹೆಚ್ಚಾಗಿ ನಡೆಯುತ್ತಿದೆ.
ಇಂದು ಪಶ್ಚಿಮ ಬಂಗಾಳ, ಬಿಹಾರಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, 18,000 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬಿಹಾರದ ಚಂಪಾರಣ್ ಬಳಿಕ ಪ್ರಧಾನಿ ಅವರ ಕಣ್ಣು ಈಗ ಮಗಧ ಪ್ರದೇಶದ ಮೇಲಿದೆ. ಹೀಗಾಗಿ ʻಮಿಷನ್ ಮಗಧʼ ಸಾಧಿಸುವ ಪ್ರಯತ್ನದ ಭಾಗವಾಗಿಯೂ ಇಂದು ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ.
ಈ ಪೈಕಿ ಬಿಹಾರದ ಗಯಾದಲ್ಲಿ ಸುಮಾರು 13,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಕೋಲ್ಕತ್ತಾದಲ್ಲಿ 5,200 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಇದರಲ್ಲಿ ವಿದ್ಯುತ್, ಸಂಪರ್ಕ, ಆರೋಗ್ಯ ಮತ್ತು ಸಾರ್ವಜನಿಕರಿಗೆ ಸಂಬಂಧಿಸಿದ ಹಲವು ಯೋಜನೆಗಳು ಸೇರಿವೆ. ಇದರ ಹೊರತಾಗಿ, ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಇದರಲ್ಲಿ ಒಂದು ರೈಲು ದೆಹಲಿ ಮತ್ತು ಗಯಾ ನಡುವೆ ಚಲಿಸಿದ್ರೆ, ಮತ್ತೊಂದು ರೈಲು ಬಿಹಾರ ಮತ್ತು ಜಾರ್ಖಂಡ್ ನಡುವೆ ಚಲಿಸುತ್ತದೆ.
ಬಿಹಾರ ಭೇಟಿ ಸಮಯದಲ್ಲಿ ಮೋದಿ ಅವರು ಗಯಾದ ಜೊತೆಗೆ ಪಾಟ್ನಾ ಮತ್ತು ಬೇಗುಸರಾಯ್ ಜಿಲ್ಲೆಗಳಿಗೂ ಭೇಟಿ ನೀಡಲಿದ್ದು, ಮಗಧ ವಿಶ್ವವಿದ್ಯಾಲಯದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಿಹಾರದ ಮಗಧ ಪ್ರದೇಶವು ಬಿಹಾರದಲ್ಲಿ ಬಿಜೆಪಿಯ ಅತ್ಯಂತ ದುರ್ಬಲ ಕೋಟೆ ಎಂದು ಪರಿಗಣಿಸಲಾಗಿದೆ. ಇದರ ಮೇಲೆ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಲೇ ಇದೆ. ಇದರ ಭಾಗವಾಗಿ ಇಂದು ಮೋದಿ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಅವರ ಭೇಟಿ ಬಿಗ್ ಬೂಸ್ಟ್ ನೀಡಲಿದೆಯೇ ಅನ್ನೋದನ್ನ ಕಾದುನೋಡಬೇಕಿದೆ.















