ಮನೆ ರಾಜ್ಯ ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್‌

ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್‌

0

ಮೈಸೂರು : ದಸರೆ ಹಬ್ಬ ಮಾತ್ರ ಅಲ್ಲ. ಇದು ನಾಡಿನ ನಾಡಿಮಿಡಿತ, ಸಂಸ್ಕೃತಿಯ ಉತ್ಸವವಾಗಿದ್ದು, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ ಎಂದು ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಬಣ್ಣಿಸಿದ್ದಾರೆ.

ಚಾಮಂಡಿಬೆಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮೈಸೂರು ದಸರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಆಪ್ತ ಗೆಳತಿ ಬೂಕರ್‌ ಪ್ರಶಸ್ತಿ ಸಿಗಲೆಂದು ಚಾಮುಂಡಿ ತಾಯಿಯ ಬಳಿ ಹರಕೆ ಹೊತ್ತಿದ್ದಳು. ಈ ವಿಶಿಷ್ಟ ಸನ್ನಿವೇಶದಲ್ಲಿ ಹರಕೆ ಈಡೇರಿದೆ. ತಾಯಿ ಚಾಮುಂಡಿ ನನ್ನನ್ನು ಈ ವಿಶೇಷ ಸಂದರ್ಭದಲ್ಲಿ ಕರೆಸಿಕೊಂಡಿದ್ದಾಳೆ. ವೇದಿಕೆ ಮೇಲೆ ನಿಮ್ಮೆದುರು ನಿಲ್ಲುತ್ತಿರುವುದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ ಎಂದು ಆರಂಭದಲ್ಲೇ ಹೇಳಿದರು.

ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಈ ನಾಡಿನ ನಾಡಿ ಮಿಡಿತ, ಸ್ಪಂದನೆಯಿದೆ. ವಿಭಿನ್ನತೆಯಲ್ಲಿ ಏಕತೆ ಇರುವ ಹಬ್ಬವಿದು. ಮೈಸೂರಿನ ಉರ್ದು ಭಾಷಿಕರು ನವರಾತ್ರಿ ಪ್ರತಿ ದಿನಕ್ಕೂ ಒಂದೊಂದು ಹೆಸರು ಇಟ್ಟು ಕೊಂಡಿದ್ದಾರೆ. ಸಿಲ್ಹಿಂಗನ್ ಎಂದು ದಸರಾಕ್ಕೆ ಉರ್ದು ವಿನಲ್ಲಿ ಹೆಸರಿಟ್ಟುಕೊಂಡಿದ್ದಾರೆ. ಇದು ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಉತ್ಸವ ಎಂದು ಹೇಳಿದರು.

ನನ್ನ ಮಾವ ಮೈಸೂರು ಮಹಾರಾಜರ ಅಂಗರಕ್ಷಕರಾಗಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ನಂಬಿದ್ದರು. ತಮ್ಮ ರಕ್ಷಕರನ್ನಾಗಿ ಮಾಡಿಕೊಂಡಿದ್ದರು. ಮುಸ್ಲಿಮರನ್ನು ಅನುಮಾನದಿಂದ ನೋಡಿರಲಿಲ್ಲ ಎಂದು ತಿಳಿಸಿದರು.

ಎಲ್ಲರನ್ನೂ ಒಳಗೊಳ್ಳುವ ಮನಸ್ಸು ನನ್ನದು. ಈ ನೆಲದಲ್ಲಿ ಮಾನವೀಯ ತುಡಿತ ಇದೆ. ತಾಯಿ ಚಾಮುಂಡಿ ನಮ್ಮಲ್ಲಿನ ದ್ವೇಷ, ಅಸಹಿಷ್ಣುತೆ ನಿವಾರಣೆ ಮಾಡಲಿ. ನನ್ನ ಧಾರ್ಮಿಕ ನಂಬಿಕೆಗಳ ಜೀವಪರವಾಗಿವೆ. ನಾವು ಅಸ್ತ್ರಗಳಿಂದ, ಹಗೆಗಳಿಂದ ಬದುಕವನ್ನು ಗೆಲ್ಲಲು ಸಾಧ್ಯವಿಲ್ಲ. ಅಕ್ಷರಗಳಿಂದ, ಪ್ರೀತಿಯಿಂದ ಬದುಕನ್ನು ಗೆಲ್ಲಬಹುದು ಎಂದು ಹೇಳುವ ಮೂಲಕ ತನ್ನನ್ನು ವಿರೋಧಿಸಿದವರಿಗೆ ಭಾವನಾತ್ಮಕ ತಿರುಗೇಟು ನೀಡಿದರು.

ಮೈಸೂರು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ನಾವು ಪರಸ್ಪರ ನಮ್ಮನ್ನು ನಾವು ಗೌರವಿಸಿಕೊಳ್ಳೋಣ. ಪ್ರತಿ ಹೂ ತನ್ನ ಬಣ್ಣದಲ್ಲಿ ಹಾಡಲಿ, ತನ್ನ ರಾಗದಲ್ಲೇ ಹಕ್ಕಿ ಕೂಗಲಿ. ಎಲ್ಲರೂ ಒಟ್ಟಾಗಿ ಸೇರಿ ಸೌಹಾರ್ದಯುತವಾಗಿ ನಡೆದುಕೊಳ್ಳೋಣ. ನಾವು ಎಲ್ಲರೂ ಒಂದೇ ಗಗನದ ಪಯಣಿಗರು.ಆಕಾಶ, ಭೂಮಿ ಯಾವತ್ತೂ ಯಾರನ್ನು ಬೇರೆ ಮಾಡುವುದಿಲ್ಲ. ನಾವು ಮನುಷ್ಯರು ಮಾತ್ರ ಗಡಿಗಳನ್ನು ಕಟ್ಟಿ ಕೊಂಡಿದ್ದೇವೆ. ನಾವು ಈ ಗಡಿಗಳನ್ನು ತೊಡೆದು ಹಾಕೋಣ ಎಂದು ಕರೆ ನೀಡಿದರು.

ತಾಯಿ ಚಾಮುಂಡಿ ರಕ್ಷಕತ್ವದ ಸಂಕೇತ.ನಮ್ಮಲ್ಲರ ಒಳಗಿನ ದ್ವೇಷ, ಹಗೆಯನ್ನು ಚಾಮುಂಡಿ ನಾಶಮಾಡಲಿ. ಜಗತ್ತಿನಾದ್ಯಂತ ಶಾಂತಿ, ಸಹನುಭೂತಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸಿದರು. ಸಹಸ್ರ ಆರೋಪಗಳ‌ ನಡುವೆ ನಾನು ಒಂಟಿಯಾಗಿ ಧೈರ್ಯವಾಗಿ ನಿಂತಿದ್ದೇನೆ ಎಂದು ಕವನ ಓದುತ್ತಲೇ ವಿವರಣೆ ನೀಡಿದ ಅವರು ಪ್ರೀತಿಯ ಹೊಸ ಸಮಾಜ ಕಟ್ಟೋಣ ಎಂದು ಹೇಳಿದರು.

ಭಾಷಣದ ಕೊನೆಯಲ್ಲಿ, ನಾನು ನೂರಾರು ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿದ್ದೇನೆ. ಮಂಗಳಾರತಿಯನ್ನೂ ನೂರಾರು ಬಾರಿ ಸ್ವೀಕರಿಸಿದ್ದೇನೆ. ನನ್ನ ಮತ್ತು ಹಿಂದೂ ಧರ್ಮದ ಬಾಂಧವ್ಯ ಹೇಗಿದೆ ಎಂದು ನನ್ನ ಆತ್ಮಕಥೆ ಯಲ್ಲಿ ಬರೆದಿದ್ದೇನೆ‌. ಈ ಪುಸ್ತಕ ನಾಳೆ ಬಿಡುಗಡೆಯಾಗಲಿದೆ. ಎಷ್ಟೇ ಸವಾಲು ಬಂದರೂ ದಿಟ್ಟವಾಗಿ ನಿಂತು ನನಗೆ ನೈತಿಕ ಬೆಂಬಲ ನೀಡಿದ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದಗಳು ಎಂದು ಹೇಳಿ ತಮ್ಮ ಮಾತಿಗೆ ಪೂರ್ಣ ವಿರಾಮ ಹಾಕಿದರು.