ಮನೆ ರಾಷ್ಟ್ರೀಯ ಹಮಾಸ್‌ ಸೆರೆಯಲ್ಲಿದ್ದ ನೇಪಾಳ ವಿದ್ಯಾರ್ಥಿ ಸಾವು – ಇಸ್ರೇಲ್‌ಗೆ ಮೃತದೇಹ ಹಸ್ತಾಂತರ

ಹಮಾಸ್‌ ಸೆರೆಯಲ್ಲಿದ್ದ ನೇಪಾಳ ವಿದ್ಯಾರ್ಥಿ ಸಾವು – ಇಸ್ರೇಲ್‌ಗೆ ಮೃತದೇಹ ಹಸ್ತಾಂತರ

0

ಜೆರುಸಲೇಮ್‌/ಟೆಲ್‌ ಅವಿವ್ : 2023ರ ಅಕ್ಟೋಬರ್‌ 7ರಂದು ಹಮಾಸ್‌ ದಾಳಿ ನಡೆಸುವ 3 ವಾರಗಳಿಗೆ ಮೊದಲೇ ಇಸ್ರೇಲ್‌ಗೆ ತೆರಳಿದ್ದ ನೇಪಾಳದ ಕೃಷಿ ವಿದ್ಯಾರ್ಥಿ ಬಿಪಿನ್‌ ಜೋಶಿ ಮೃತಪಟ್ಟಿದ್ದಾರೆ ಎಂದು ಹಮಾಸ್‌ ದೃಢಪಡಿಸಿದೆ. ಬದುಕುಳಿದ ಎಲ್ಲರನ್ನ ಇಸ್ರೇಲ್‌ಗೆ ಹಸ್ತಾಂತರಿಸಿದೆ. ಇದರೊಂದಿಗೆ ಬಿಪಿನ್‌ ಜೋಶಿ ಮೃತಪಟ್ಟ ವಿಷಯ ಖಚಿತಪಡಿಸಿದ್ದು, ಮೃತದೇಹವನ್ನ ಇಸ್ರೇಲ್‌ಗೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಅಮೆರಿಕದ ಮಧ್ಯಸ್ಥಿಕೆಯಲ್ಲಿ ಈಜಿಪ್ಟ್‌ನಲ್ಲಿ ನಡೆದ ಶಾಂತಿ ಒಪ್ಪಂದದ ನಂತರ ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಎರಡು ವರ್ಷಗಳ ಸುದೀರ್ಘ ಯುದ್ಧ ಅಧಿಕೃತವಾಗಿ ಅಂತ್ಯಗೊಂಡಿದೆ. ಹೀಗಾಗಿ ಎಲ್ಲ 20 ಒತ್ತೆಯಾಳುಗಳನ್ನ ಹಮಾಸ್‌ ಬಿಡುಗಡೆ ಮಾಡಿದೆ.

ಇದೇ ವೇಳೆ 2 ವರ್ಷಗಳ ಹಿಂದೆ ಹಮಾಸ್ ಅಪಹರಿಸಿದ್ದ ನೇಪಾಳದ ಹಿಂದೂ ವಿದ್ಯಾರ್ಥಿ ಬಿಪಿನ್ ಜೋಶಿ ಅವರ ದೇಹವನ್ನ ಇಸ್ರೇಲ್‌ಗೆ ಹಿಂತಿರುಗಿಸಲಾಗಿದೆ. ಈ ಕುರಿತು ಇಸ್ರೇಲ್‌ನಲ್ಲಿರುವ ನೇಪಾಳದ ರಾಯಭಾರಿ ಧನ ಪ್ರಸಾದ್ ಪಂಡಿತ್ ಮಾಹಿತಿ ನೀಡಿದ್ದಾರೆ. ಬಿಪಿನ್ ಜೋಶಿಯವರ ಮೃತದೇಹವನ್ನ ಹಮಾಸ್ ಇಸ್ರೇಲಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅದನ್ನು ಟೆಲ್ ಅವೀವ್‌ಗೆ ಕೊಂಡೊಯ್ಯಲಾಗುತ್ತಿದೆ ಎಂದಿದ್ದಾರೆ.

ಜೋಶಿಯವರ ಮೃತದೇಹವನ್ನ ನೇಪಾಳಕ್ಕೆ ವಾಪಸ್ ಕಳುಹಿಸುವ ಮೊದಲು ಡಿಎನ್‌ಎ ಪರೀಕ್ಷೆ ನಡೆಸಿ, ನೇಪಾಳಿ ರಾಯಭಾರ ಕಚೇರಿಯ ಸಮನ್ವಯದೊಂದಿಗೆ ಇಸ್ರೇಲ್‌ನಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುವುದು ಎಂದು ಇಸ್ರೇಲ್‌ ಮಿಲಿಟರಿ ಹೇಳಿದೆ.

ಅಕ್ಟೋಬರ್‌ನಲ್ಲಿ ಯುದ್ಧ ಶುರುವಾಗ 3 ವಾರಗಳಿಗೂ ಮೊದಲೇ ಬಿಪಿನ್‌ ಜೋಶಿ ಇಸ್ರೇಲ್‌ಗೆ ತೆರಳಿದ್ದರು. ಗಾಜಾ ಗಡಿಯ ಬಳಿಯ ಕಿಬ್ಬುಟ್ಜ್ ಅಲುಮಿಮ್‌ನಲ್ಲಿ ಸುಧಾರಿತ ಕೃಷಿ ತಂತ್ರಗಳ ಅಧ್ಯಯನಕ್ಕೆ ತೆರಳಿದ್ದ 16 ವಿದ್ಯಾರ್ಥಿಗಳಲ್ಲಿ ಜೋಶಿ ಒಬ್ಬರಾಗಿದ್ದರು. ಆದರೆ ಅಕ್ಟೋಬರ್ 7, 2023 ರಂದು ಹಮಾಸ್ ದಕ್ಷಿಣ ಇಸ್ರೇಲ್ ನಡೆಸಿದ ಅನಿರೀಕ್ಷಿತ ದಾಳಿಯಿಂದಾಗಿ ವಿದ್ಯಾರ್ಥಿಗಳು ಬಾಂಬ್ ಶೆಲ್ಟರ್‌ನಲ್ಲಿ ಆಶ್ರಯ ಪಡೆದಿದ್ದರು.

ಆ ವೇಳೆ ಹಮಾಸ್‌ ಉಗ್ರರು ಇಸ್ರೇಲ್‌ನ ಕಿಬ್ಬುಟ್ಜ್‌ ಶೆಲ್ಟರ್‌ಗೆ ಗ್ರೆನೇಡ್‌ಗಳನ್ನು ಎಸೆದು ನುಗ್ಗಿದರು. ಅದರಲ್ಲಿ ಒಂದು ಗ್ರೆನೇಡ್ ಸ್ಫೋಟಿಸಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡರು, ಆದರೆ ಜೋಶಿ ತಕ್ಷಣವೇ ಕಾರ್ಯ ನಿರ್ವಹಿಸಿ, 2ನೇ ಗ್ರೆನೇಡ್ ಅನ್ನು ಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಹೊರಗೆ ಎಸೆದು ಜೀವಗಳನ್ನು ಉಳಿಸಿದರು ಎಂದು ಬದುಕುಳಿದ ನೇಪಾಳದ ಏಕೈಕ ವಿದ್ಯಾರ್ಥಿ ಹಿಮಾಂಚಲ್ ಕಟ್ಟೆಲ್ ಹೇಳಿದ್ದಾರೆ.

ನಂತರ ಅವರನ್ನು ಹಮಾಸ್‌ ಬಂದೂಕುಧಾರಿಗಳು ಸೆರೆ ಹಿಡಿದು ಗಾಜಾಗೆ ಕರೆದೊಯ್ದರು. ನಂತರದ ದಿನಗಳಲ್ಲಿ, ಇಸ್ರೇಲಿ ಮಿಲಿಟರಿ ಬಿಡುಗಡೆ ಮಾಡಿದ ವೀಡಿಯೊ ದೃಶ್ಯಗಳಲ್ಲಿ ಜೋಶಿಯನ್ನು ಗಾಜಾದ ಶಿಫಾ ಆಸ್ಪತ್ರೆಗೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿತ್ತು. ಥಾಯ್ ಕಾರ್ಮಿಕರೊಂದಿಗೆ ಕೂಡಿಹಾಕಿದ್ದು, ಅವರ ಕೊನೆಯ ಜೀವಂತ ದೃಶ್ಯವಾಗಿತ್ತು.