ಮನೆ ರಾಜ್ಯ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಆರ್‌ಎಸ್‌ಎಸ್‌ ನಿಂದ ಹಣ ಸಂಗ್ರಹ: ಹೆಚ್.‌ಡಿ.ಕುಮಾರಸ್ವಾಮಿ

ಬಿಜೆಪಿಯನ್ನು ಅಧಿಕಾರಕ್ಕೆ ತರಲು ಆರ್‌ಎಸ್‌ಎಸ್‌ ನಿಂದ ಹಣ ಸಂಗ್ರಹ: ಹೆಚ್.‌ಡಿ.ಕುಮಾರಸ್ವಾಮಿ

0

ಶಿವಮೊಗ್ಗ (Shimoga): ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸ್ವತಃ ಆರ್‌ಎಸ್‌ಎಸ್‌ ಹಣ ಸಂಗ್ರಹ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಚುನಾಯಿತ ಸರ್ಕಾರಗಳ ಅಸ್ಥಿರಗೊಳಿಸಲು, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸ್ವತಃ ಆರ್‌ಎಸ್‌ಎಸ್‌ ಹಣ ಸಂಗ್ರಹ ಮಾಡುತ್ತಿದೆ. ಚುನಾವಣೆಯ ವೇಳೆ ಒಂದೊಂದು ಕ್ಷೇತ್ರಕ್ಕೆ 30 ಕೋಟಿ ರೂ. ತಂದು ಸುರಿದು ಜನರ ಹಣ ಪಡೆಯಬೇಕಲ್ಲ ಅದಕ್ಕೂ ಆರ್‌ಎಸ್‌ಎಸ್‌ನಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಇದರಲ್ಲಿ ಸಂಶಯ ಏನೂ ಇಲ್ಲ ಎಂದರು.

ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಘೋಷಣೆ ಮಾಡುತ್ತಾರೆ. ಅದರಲ್ಲಿ ಒಂದೊಂದು ಕ್ಷೇತ್ರಕ್ಕೆ 130 ರಿಂದ 200 ಕೋಟಿ ರೂ. ಖರ್ಚು ಮಾಡುತ್ತಾರೆ. ಅದರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪಾಲು ಹೋಗುತ್ತಿದೆ ಎಂದು ಸಂಬಂಧಿಸಿದ ಮಂತ್ರಿಗಳು ಧೈರ್ಯವಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.

ಈ ಮೊದಲು ಕಾಂಗ್ರೆಸ್ ಮುಕ್ತ ದೇಶ ಮಾಡಿದವರು ಈಗ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಬಿಜೆಪಿ ಹೊರತಾಗಿ ದೇಶದಲ್ಲಿ ಯಾವುದೇ ಪಕ್ಷ ಇರುವುದು ಬೇಡ ಎಂದು ಕೇಂದ್ರ ಸರ್ಕಾರವೇ ಶಾಸನ ರೂಪಿಸಿಬಿಡಲಿ ಎಂದು ವ್ಯಂಗ್ಯವಾಡಿದರು.

ಬೇರೆ ಪಕ್ಷದ ಚುನಾಯಿತ ಸರ್ಕಾರಗಳಿಗೆ ಸ್ಪಷ್ಟ ಬಹುಮತ ಇದ್ದರೂ ಅವು ಉಳಿಯುವುದು ಅನುಮಾನ ಇದೆ. ವಿರೋಧ ಪಕ್ಷಗಳೇ ಇರಬಾರದು ಎಂಬುದು ಬಿಜೆಪಿಯವರ ಸಿದ್ಧಾಂತ. ದೇಶದ ಜನ ಇದಕ್ಕೆ ಅಂತಿಮವಾಗಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಅವರೇ ಸರ್ಕಾರ ಹಿಡಿಯಬೇಕು ಎಂದು ತೀರ್ಮಾನಿಸಿದಂತಿದೆ. ಮುಂದೆ ರಾಜಸ್ಥಾನ, ಜಾರ್ಖಂಡ್ ನಲ್ಲೂ ಅಲ್ಲಿನ ಸರ್ಕಾರಗಳನ್ನು ಬದಲಾಯಿಸುವ ಕೆಲಸ ನಡೆಯಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.

ಆಗಸ್ಟ್ ತಿಂಗಳಿನಿಂದ ಪ್ರತಿದಿನ ಒಂದೊಂದು ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಬಡವರಿಗೋಸ್ಕರ ನಾನು ಮತ್ತೊಂದು ಬಾರಿ ಅಧಿಕಾರ ಹಿಡಿಯುವ ವಿಶ್ವಾಸ ಇದೆ. ಶಿವಸೇನೆಯಲ್ಲಿ 50 ಜನ ಬಿಟ್ಟು ಹೋಗ್ತಿದ್ದಾರೆ. ಏನು ಆ ಪಕ್ಷ ಮುಳುಗಿ ಹೋಗ್ತಿದೆಯಾ. ವೈಎಸ್‌ವಿ ದತ್ತ ಅವರಿಗೆ ಪಕ್ಷ ಎಲ್ಲಾ ಕೊಟ್ಟಿದೆ. ಎಲ್ಲಾ ಪಡೆದುಕೊಂಡು ಹೋಗ್ತಿನಿ ಅಂದರೆ ಅವರೇ ಯೋಚನೆ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.