ಮನೆ ಸುದ್ದಿ ಜಾಲ ಖರ್ಗೆ Vs ಆರ್‌ಎಸ್‌ಎಸ್‌ ಫೈಟ್‌ – ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ ಸಚಿವ ಪ್ರಿಯಾಂಕ್‌

ಖರ್ಗೆ Vs ಆರ್‌ಎಸ್‌ಎಸ್‌ ಫೈಟ್‌ – ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ ಸಚಿವ ಪ್ರಿಯಾಂಕ್‌

0

ಕಲಬುರಗಿ : ಕೈಗಾರಿಕಾ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಆರ್‌ಎಸ್‌ಎಸ್ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಬಾರಿ ಆರ್‌ಎಸ್‌ಎಸ್ ವಿರುದ್ಧ ನೇರವಾಗಿ ಬೃಹತ್ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಎಕ್ಸ್ ಮೂಲಕ ಗಂಭೀರ ಆರೋಪ ಮಾಡಿರುವ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಎಂಬ ಸಾಂವಿಧಾನಿಕ ಸಂಸ್ಥೆಯನ್ನು ರಚಿಸಲಾಗಿತ್ತು ಎಂದು ತಿಳಿಸಿದ್ದಾರೆ.

500 ಕೋಟಿ ರೂ. ಬಜೆಟ್‌ನೊಂದಿಗೆ `ಮಾನವ ಸಂಪನ್ಮೂಲ’ ಅಭಿವೃದ್ಧಿಪಡಿಸುವ ಉದ್ದೇಶ ಈ ಸಂಸ್ಥೆಯದ್ದಾಗಿತ್ತು. ಆದರೆ, ವಾಸ್ತವದಲ್ಲಿ, ಈ ಪ್ರದೇಶದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳ ಉಪಯೋಗಕ್ಕಾಗಿ ಬಳಸಲಾಗಿತ್ತು.

ಈ ಮೂಲಕ 322 ಕೋಟಿ ರೂ.ಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇದು ಆ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಅತಿದೊಡ್ಡ ಹಗರಣ ಎಂದು ಟೀಕಿಸಿದ್ದಾರೆ. ಬಿಜೆಪಿ ನಾಯಕರು 5 ತಾಲೂಕುಗಳನ್ನು ಅನಧಿಕೃತವಾಗಿ 8ನೇ ಜಿಲ್ಲೆಯಂತೆ ಪರಿಗಣಿಸಿ ಮನಬಂದಂತೆ ಹಣವನ್ನು ಹಂಚಿಕೆ ಮಾಡಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂದು, ಅದೇ ಬಿಜೆಪಿ ನಾಯಕರು ಬೆಳಗಾವಿ ವಿಧಾನಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ನಮಗೆ ಸುದೀರ್ಘ ಉಪದೇಶಗಳನ್ನು ನೀಡುತ್ತಿದ್ದಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ, ಜನರ ಹಣವನ್ನು ತಮ್ಮ ಸ್ವಂತ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದರು ಎಂದು ಹರಿಹಾಯ್ದಿದ್ದಾರೆ.