ಬೆಂಗಳೂರು : ಜಿಬಿಎ ವಿರುದ್ಧ ನಟಿ ಐಂದ್ರಿತಾ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಲಿ ಜಾಗದಲ್ಲಿ ಕಸಕ್ಕೆ ಬೆಂಕಿ ಹಾಕಿದ್ದ ಪರಿಣಾಮ ಉಸಿರಾಟಕ್ಕೆ ಸಮಸ್ಯೆಯಾಗಿ ಮೂರು ದಿನಗಳಿಂದ ಪರದಾಡಿದ್ದಾರೆ. ಜಿಬಿಎಗೆ ಕರೆ ಮಾಡಿದ್ರೂ ರೆಸ್ಪಾನ್ಸ್ ಸಿಕ್ಕಿಲ್ಲ. ಕಸಕ್ಕೆ ಬೆಂಕಿ ಹಾಕಿದ ವೀಡಿಯೋವನ್ನ ಹಂಚಿಕೊಂಡು ನಟಿ ಆಕ್ರೋಶ ಹೊರಹಾಕಿದ್ದಾರೆ.
ಆರ್ಆರ್ ನಗರದ ಜವರೇನಗೌಡನದೊಡ್ಡಿ ರಸ್ತೆಯ ಖಾಲಿ ಜಾಗದಲ್ಲಿ ಕಸಕ್ಕೆ ಬೆಂಕಿ ಹಾಕಲಾಗಿದೆ. ಇದರಿಂದ ದಟ್ಟ ಹೊಗೆ ಆವರಿಸಿಕೊಂಡು, ಅಕ್ಕಪಕ್ಕದ ಮನೆಯವರಿಗೆ ಸಮಸ್ಯೆಯಾಗಿದೆ. ತನಗೂ ದಟ್ಟ ಹೊಗೆಯಿಂದ ಉಸಿರಾಟದ ಸಮಸ್ಯೆಯಾಗಿದೆ ಎಂದು ವೀಡಿಯೋ ಮಾಡಿ ಇನ್ಸ್ಟಾ ಗ್ರಾಂ ಖಾತೆಯಲ್ಲಿ ನಟಿ ಹಂಚಿಕೊಂಡಿದ್ದಾರೆ.
ಊರಿಗೆಲ್ಲ ಬುದ್ಧಿ ಹೇಳುವ ಜಿಬಿಎ ಅಧಿಕಾರಿಗಳೇ ಕಸಕ್ಕೆ ಬೆಂಕಿ ಹಾಕಿದ್ದಾರೆ. ಇನ್ನೂ ಈ ಬಗ್ಗೆ ಆರ್ಆರ್ ನಗರ ಜಿಜಿಎ ಅಧಿಕಾರಿಗಳಿಗೆ ಕರೆ ಮಾಡಿದ್ರೆ, ಫೋನ್ ಕೂಡ ಕನೆಕ್ಟ್ ಆಗಿಲ್ಲ. ಖಾಲಿ ಜಾಗ ಜಿಬಿಎಗೆ ಸಂಬಂಧಿಸಿದ್ದು ಅನ್ನೋದು ಗೊತ್ತಾಗಿದೆ. ಈ ಜಾಗವನ್ನ ಕ್ಲೀನ್ ಮಾಡುವಾಗ ಗಿಡಗಂಟಿ, ಕಸವನ್ನ ಗುಡ್ಡೆಹಾಕಿ ಕಸಕ್ಕೆ ಬೆಂಕಿ ಹಾಕಲಾಗಿದೆ. ಈ ಬೆಂಕಿಯ ದಟ್ಟ ಹೊಗೆಯಿಂದ ವಾಹನ ಸವಾರರಿಗೂ ಸಮಸ್ಯೆಯಾಗಿದೆ.
ನಟಿ ಐಂದ್ರಿತಾ ರೈ ಮನೆಗೆ ಈ ಜಾಗ ಒಂದು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಯವರೆಗೂ ದಟ್ಟ ಹೊಗೆ, ಕೆಟ್ಟ ವಾಸನೆ ಆವರಿಸಿಕೊಂಡಿದೆ. ಈ ಹೊಗೆಯಿಂದ ಉಸಿರಾಟಕ್ಕೆ ಸಮಸ್ಯೆಯಾಗಿದ್ದು, ಜಿಬಿಎಗೆ ಹಲವು ಸಲ ಕರೆ ಮಾಡಿದ್ರೂ ಸ್ಪಂದಿಸಿಲ್ಲ. ನಟಿ ಐಂದ್ರಿತಾ ರೈ ತಾಯಿ ಮನೆಗೆ ಹೋಗಿದ್ದು, ಆರೋಗ್ಯವನ್ನು ಕಾಪಾಡಿಕೊಳ್ತಿದ್ದಾರೆ. ಅದೇನೆ ಇರಲಿ ಊರವರಿಗೆಲ್ಲ ಬುದ್ಧಿ ಹೇಳುವ ಜಿಬಿಎನೇ, ಕಸಕ್ಕೆ ಬೆಂಕಿ ಹಾಕಿ, ಸಾರ್ವಜನಿಕರಿಗೆ ಸಮಸ್ಯೆ ಮಾಡಿದ್ದರ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.














