ಚಾಮರಾಜನಗರ : ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಹಸುವಿನ ಮಾಲೀಕ ಚಂದು, ಸಿದ್ದರಾಜು, ಸಂಪು ಹಾಗೂ ಗಣೇಶ ಎಂಬವರು ಹುಲಿ ಕೊಂದ ಆರೋಪ ಹೊತ್ತಿದ್ದರು. ಕೊಳ್ಳೇಗಾಲ ಜೆಎಂಎಫ್ಸಿ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.
ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಅ.2 ರಂದು ಹುಲಿಯೊಂದನ್ನು ಮೂರು ಭಾಗಗಳಾಗಿ ತುಂಡರಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ತಲೆಯಿಂದ ಭುಜದವರೆಗೆ ಒಂದು ಭಾಗ, ಭುಜದಿಂದ ಹೊಟ್ಟೆವರೆಗೆ ಮತ್ತೊಂದು ಭಾಗ ಹಾಗೂ ಅದರಿಂದ ಕೆಳಕ್ಕೆ ಇನ್ನೊಂದು ಭಾಗವಾಗಿ ಹುಲಿಯನ್ನು ತುಂಡರಿಸಲಾಗಿತ್ತು.
ವನ್ಯಜೀವಿ ಸಪ್ತಾಹದ ವೇಳೆಯೇ ಇಂತಹ ಕೃತ್ಯ ನಡೆದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮೂರು ತಿಂಗಳ ಅಂತರದಲ್ಲಿ ಇದೇ ವನ್ಯಧಾಮದಲ್ಲಿ ಸ್ಥಳೀಯರ ಸೇಡಿಗೆ 6 ಹುಲಿಗಳು ಬಲಿಯಾಗಿದ್ದವು ಎಂದು ವರದಿಯಾಗಿದೆ.














