ಮನೆ ರಾಜ್ಯ ಬಿಕ್ಲು ಶಿವ ಪ್ರಕರಣದಲ್ಲಿ ಸಿಐಡಿಯಿಂದ ಲುಕ್‌ಔಟ್ ನೋಟಿಸ್ – ಶಾಸಕ ಬೈರತಿ ಬಸವರಾಜ್‌ಗೆ ಬಂಧನ ಭೀತಿ..!

ಬಿಕ್ಲು ಶಿವ ಪ್ರಕರಣದಲ್ಲಿ ಸಿಐಡಿಯಿಂದ ಲುಕ್‌ಔಟ್ ನೋಟಿಸ್ – ಶಾಸಕ ಬೈರತಿ ಬಸವರಾಜ್‌ಗೆ ಬಂಧನ ಭೀತಿ..!

0

ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ, ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಜಾರಿಮಾಡಿದೆ. ಬಂಧನ ಭೀತಿ ಹೆಚ್ಚಾಗಿದ್ದು, ಯಾವುದೇ ಕ್ಷಣದಲ್ಲಿ ಅರೆಸ್ಟ್ ಮಾಡುವ ಸಾಧ್ಯತೆಯಿದೆ. ಕಳೆದ ಐದು ದಿನಗಳಿಂದ ಬೈರತಿ ಬಸವರಾಜ್ ನಾಪತ್ತೆಯಾಗಿದ್ದು, ಮಹಾರಾಷ್ಟ್ರ ತಮಿಳುನಾಡು, ಗೋವಾದಲ್ಲಿ ಮೂರು ವಿಶೇಷ ತಂಡಗಳು ಹುಡುಕಾಟ ನಡೆಸಿವೆ. ನಿರೀಕ್ಷಣಾ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಬೈರತಿ ಬಸವರಾಜ್‌ಗೆ ಕೋರ್ಟ್ ಶಾಕ್ ನೀಡಿದ್ದು, ಬಂಧನದ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಸಿಐಡಿ ಅಧಿಕಾರಿಗಳ ಬಂಧನ ಭಯದ ನಡುವೆಯೇ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸೋದಾ ಅಥವಾ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಸೋದಾ ಅನ್ನೋದರ ಬಗ್ಗೆ ಚರ್ಚೆ ನಡೀತಿದೆ. ಈ ನಡುವೆ ಸಿಐಡಿ ಪೊಲೀಸರು ಬಂಧಿಸಲೇಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಾಚಣೆ ನಡೆಸಿದ್ದಾರೆ. ಮಂಗಳವಾರ (ಡಿ.23) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿತು. ವಾದ-ಪ್ರತಿವಾದಗಳನ್ನು ಆಲಿಸಿ ಅರ್ಜಿಯನ್ನು ವಜಾಗೊಳಿಸಿದೆ. ಇದರ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸಿದ್ದಾರೆ.

ಬೈರತಿ ಪರ ವಕೀಲರ ವಾದವೇನು? – ಈ ಪ್ರಕರಣ ದಾಖಲಾಗಿ ಐದು ತಿಂಗಳು 10 ದಿನ ಆಗಿದೆ. 18 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಏಳರಿಂದ ಎಂಟು ಆರೋಪಿಗಳು ಕೊಲೆ ಸಂದರ್ಭದಲ್ಲಿ ಅಪರಿಚಿತರರು ಇದ್ದಾರೆ. ಆದರೆ, ಬೈರತಿ ಬಸವರಾಜ್‌ರನ್ನ ಎ-5 ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಪೊಲೀಸರು ಅನುಮಾನದ ಮೇರೆಗೆ ಎಫ್‌ಐಆರ್‌ನಲ್ಲಿ ಹೆಸರು ಸೇರಿಸಿದ್ದಾರೆ.

ಸಿಐಡಿಗೆ ಪ್ರಕರಣ ವರ್ಗಾವಣೆ ಆದ ನಂತರ ನಿನ್ನೆಯವರೆಗೂ ಸಿಐಡಿ ನೋಟಿಸ್ ನೀಡಿಲ್ಲ, ಸಮನ್ಸ್ ಕೊಟ್ಟಿಲ್ಲ. ಹೇಗೆ ವಿಚಾರಣೆಗೆ ಹಾಜರಾಗುವುದು? ಎಫ್‌ಐಆರ್‌ನಲ್ಲಿ ಹೆಸರು ಸೇರಿಸುವುದು ಬಿಟ್ಟು ಬೇರೆ ಏನ್ ಮಾಡಿದ್ದಾರೆ? ಐದು ತಿಂಗಳು ಸುಮ್ಮನಿದ್ದು ಈಗ ಕಸ್ಟೋಡಿಯಲ್ ಇಟ್ರಾಗೇಷನ್ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ಎಫ್‌ಐಆರ್ ದಾಖಲು ಮಾಡಿದ ನಂತರ ಕೋಕಾ ಕಾಯ್ದೆ ಜಾರಿ ಮಾಡುತ್ತಾರೆ. ಬೈರತಿ ಬಸವರಾಜ್ ಯಾವುದೇ ತನಿಖೆಗೂ ಸಿದ್ಧ, ಯಾವತ್ತು ಕರೆದರೂ ತನಿಖೆಗೆ ಬರುತ್ತಾರೆ ಎಂದು ವಕೀಲರು ವಾದ ಮಂಡಿಸಿದರು.

ಸಿಐಡಿ ಪರ ವಕೀಲ ಅಶೋಕ್ ನಾಯ್ಕ್ ವಾದವೇನು? – ಹೈಕೋರ್ಟ್ ಆದೇಶದ ಮಾಹಿತಿ ತಿಳಿದು ಕಲಾಪಕ್ಕೆ ಹೋಗಿದ್ದವರು ಡಿ.18 ರಿಂದ ಎಸ್ಕೇಪ್ ಆಗಿದ್ದಾರೆ. ಸದನದಲ್ಲಿ ಇರಬೇಕಾದ ಶಾಸಕರು ಎಲ್ಲಿ ಹೋದ್ರು? ಕೊಲೆ ಕೇಸ್‌ನಲ್ಲಿ ಆರೋಪಿಗೆ ನೋಟಿಸ್ ಕೊಡುವ ಅಗತ್ಯ ಇಲ್ಲ. ಎ1 ರಿಂದ ಎ5 ತನಕ ಇರುವ ಆರೋಪಿಗಳು ಒಳಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ. ಎ1 ಜಗದೀಶ್ ಎ5 ಬೈರತಿ ಬಸವರಾಜ್ ಸಂಪರ್ಕದಲ್ಲಿದ್ದಾರೆ. ಎ1, ಎ5 ಕುಂಭಮೇಳಕ್ಕೆ ಹೋಗಿದ್ದಾರೆ ಎಂದು ದಾಖಲೆ ಸಲ್ಲಿಕೆಯಾಗಿದೆ. ಬೈರತಿಗೂ ಕೊಲೆಯಾದವನಿಗೆ ದೇವಸ್ಥಾನದ ಜಾಗದ ವಿಚಾರವಾಗಿ ಗಲಾಟೆ ಆಗಿದೆ.

ಬೈರತಿ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಆದರೆ, ಕಣ್ಣಿಗೆ ಕಾಣಲ್ಲ. ಅವಲಹಳ್ಳಿ ಜಾಗದ ವಿಚಾರವಾಗಿ ಎ5 ಕೊಲೆಯಾದ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದ. ಎ20, ಎ5 ಆಪ್ತ ಸಹಾಯಕರೇ ಜಾಗದ ಗಲಾಟೆ ವಿಚಾರಕ್ಕೆ ಹೋಗ್ತಾರೆ. ಎ1 ಬೈರತಿಗೆ ವಿಷಯ ತಿಳಿಸಿ ವಿದೇಶಕ್ಕೆ ಹೋಗಿದ್ದಾರೆ. ಇದು ಟವರ್ ಲೊಕೇಷನ್‌ನಲ್ಲಿ ತಿಳಿದಿದೆ. ಎ1 ವಿದೇಶಕ್ಕೆ ಎಸ್ಕೇಪ್ ಆಗಲು ಎ5 ಸಹಾಯ ಮಾಡಿದ್ದಾರೆ. ಎ5, ಇತರೆ ಆರೋಪಿಗಳಿಗೆ ಹೋಗಿ ಸರೆಂಡರ್ ಆಗಿ ಅಂತಾರೆ ಕಾಲ್ ರೆಕಾರ್ಡ್ಸ್ ಇದೆ. ನಾವು ತಾಂತ್ರಿಕ ಸಾಕ್ಷ್ಯಗಳಾದ ಸಿಡಿಆರ್, ಟವರ್ ಲೊಕೇಷನ್ ನೀಡುತ್ತೇವೆ ಎಂದು ವಕೀಲ ಅಶೋಕ್ ನಾಯ್ಕ್ ಟವರ್ ಲೊಕೇಷನ್, ಸಿಡಿಆರ್ ದಾಖಲೆ ಸಲ್ಲಿಕೆ ಮಾಡಿದರು.