ಬೆಂಗಳೂರು : ಕೇಂದ್ರ ಸರ್ಕಾರದ ಮಾತು ಕೇಳದ ಉದ್ಯಮಿಗಳಿಗೆ ಇಡಿ, ಐಟಿ ಬಳಸಿಕೊಂಡು ಕಿರುಕುಳ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉದ್ಯಮಿಗಳ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡೋದು, ಇಡೀ ರಾಷ್ಟ್ರದಲ್ಲಿ ಈ ಪ್ರವೃತ್ತಿ ಆಗುತ್ತಿದೆ.
ಕಳೆದ 10 ವರ್ಷಗಳಿಂದ ಇಡಿ, ಐಟಿ, ಜಿಎಸ್ಟಿಯಿಂದ ಉದ್ಯಮಿಗಳಿಗೆ ಕಿರುಕುಳ ಆಗುತ್ತಿದೆ. ಕೇಂದ್ರಕ್ಕೆ ತಲೆ ಭಾಗದ ಉದ್ಯಮಿಗಳಿಗೆ ಈ ಕಿರುಕುಳ ಆಗುತ್ತಿದೆ. ಸಾಕಷ್ಟು ಉದಾಹರಣೆ ಇದೆ. ಅಂಬಾನಿ, ಅದಾನಿಗೆ ಇಡಿ, ಐಟಿ ಕಿರುಕುಳ ಏನು ಇಲ್ಲ. ಸರ್ಕಾರ ಅವರಿಗಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು. ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದರೆ ಕಿರುಕುಳ ಎಷ್ಟು ಆಗಿರಬಾರದು ನೋಡಿ. ಸಾಮಾನ್ಯ ಜನರಿಗೂ ಇಂತಹ ಕಿರುಕುಳ ಆಗುತ್ತಿದೆ. ಬೇಕಾದ್ರೆ ಸರ್ವೆ ಮಾಡಿ ಗೊತ್ತಾಗುತ್ತದೆ. ಜನರಿಗೆ ತೊಂದರಿಗೆ ಕೊಡಲು ಕೇಂದ್ರದ ಬಳಿ ಹೊಸ ಆಯುಧವೇ ಇದೆ. ಕಿರುಕುಳದ ಬಗ್ಗೆ ನಾನು ಹೇಳುತ್ತಿಲ್ಲ, ಅವರ ಕುಟುಂಬ ಹೇಳುತ್ತಿದೆ. ಇದರ ಬಗ್ಗೆ ತನಿಖೆ ಆಗಲಿ ಎಂದರು.

ರಾಯ್ ಅವರು ಕೆಳ ಮಟ್ಟದಿಂದ ಬೆಳೆದ ವ್ಯಕ್ತಿ. ಅವರು ಯಾಕೆ ಹತಾಶೆ ಆಗಿದ್ದರು. ಯಾಕೆ ಅವರು ಇಂತಹ ನಿರ್ಧಾರ ಮಾಡಿದ್ರು ಎಂಬ ಬಗ್ಗೆ ತನಿಖೆ ಮಾಡಲಿ ಸತ್ಯ ಹೊರಗೆ ಬರಲಿ. ಐಟಿ ಅಧಿಕಾರಿಗಳ ವಿರುದ್ಧವೂ ತನಿಖೆ ಆಗಬೇಕು. ಅವರು ಕ್ರೈಂ ಸೀನ್ನಲ್ಲಿ ಇದ್ದರು, ತನಿಖೆ ಆಗಲಿ. ಅಲ್ಲಿ ಇದ್ದವರ ಎಲ್ಲರ ತನಿಖೆ ಆಗಲಿ ಎಂದು ಒತ್ತಾಯಿಸಿದರು. ನಾಳೆ ಕೇಂದ್ರ ಬಜೆಟ್ನಲ್ಲಿ ರಾಜ್ಯದ ನಿರೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರದಿಂದ ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಶೂನ್ಯ ನಿರೀಕ್ಷೆ. ಮೋದಿ ಸರ್ಕಾರ 12 ವರ್ಷಗಳಿಂದ ರಾಜ್ಯಕ್ಕೆ ಏನು ಮಾಡಿಲ್ಲ. ನಿರ್ಮಲಾ ಸೀತಾರಾಮನ್ ಎರಡು ಬಾರಿ ರಾಜ್ಯದಿಂದ ಆಯ್ಕೆ ಆಗಿದ್ದರು.
ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಕನ್ನಡಿಗರ ಋಣ ತೀರಿಸಿಲ್ಲ. ಕೇಂದ್ರ ನಮಗೆ ಕೊಡಬೇಕಾದ ನಮ್ಮ ಪಾಲು ಕೊಟ್ಟರೆ ಸಾಕಾಗಿದೆ. ಜಿಎಸ್ಟಿ ಪಾಲು, ಜೆಜೆಎಂ ಪಾಲು, ಬಂದರೆ ಸಾಕಾಗಿದೆ. ಮೋದಿ ಸರ್ಕಾರದಿಂದ ರಾಜ್ಯಕ್ಕೆ ಬಜೆಟ್ ಕೊಡುಗೆ ನಮ್ಮದು ಶೂನ್ಯ ನಿರೀಕ್ಷೆ. ನಮ್ಮ ಪಾಲು ನಮಗೆ ಕೊಡಿ. ನಾವು ದೇಶ ಕಟ್ಟುತ್ತೇವೆ ಎಂದು ಕೇಂದ್ರಕ್ಕೆ ತಿರುಗೇಟು ಕೊಟ್ಟರು.















