ಮೈಸೂರು : ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತೆ ವರ್ಗಾವಣೆ ದಂಧೆ ಬಾಂಬ್ ಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಯತೀಂದ್ರ ಅನಧಿಕೃತವಾಗಿ ವರ್ಗಾವಣೆ ಸಚಿವರಾಗಿದ್ದಾರೆ. ಅಪ್ಪನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯ ತಲೆ ತಗ್ಗಿಸುವ ಕೆಲಸವನ್ನು ಯತೀಂದ್ರ ಮಾಡುತ್ತಿದ್ದಾರೆ. ಮೈಸೂರು ಉಸ್ತುವಾರಿ ಸಚಿವರು ವರ್ಷದಲ್ಲಿ ಮೂರು ದಿನ ಮಾತ್ರ ಕಾಣುತ್ತಾರೆ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಹಾಗೂ ದಸರಾದಲ್ಲಿ ಅಷ್ಟೇ. ಇಡೀ ಮೈಸೂರು ಅಭಿವೃದ್ಧಿ ಸತ್ತು ಹೋಗಿದೆ. ವರ್ಗಾವಣೆ ದಂಧೆ ಮೈಸೂರಲ್ಲಿ ದೊಡ್ಡ ಮಟ್ಟದಲ್ಲಿ ಸಾಗಿದೆ. ಯತೀಂದ್ರ ಬಾಯಲ್ಲಿ ಒಂದು ದಿನವಾದರೂ ಮೈಸೂರು ಅಭಿವೃದ್ಧಿ ಮಾತು ಬಂದಿದ್ಯಾ? ಅಂತ ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ.
ಸಿಎಂ ಮೊದಲ ಪುತ್ರ ರಾಕೇಶ್ರಿಂದ ಸಿದ್ದರಾಮಯ್ಯಗೆ ಯಾವತ್ತೂ ಮುಜುಗರ ಆಗಿರಲಿಲ್ಲ. ರಾಕೇಶ್ ಬದುಕಿದ್ದರೆ ಸಿದ್ದರಾಮಯ್ಯ ತಲೆ ತಗ್ಗಿಸುವ ಸ್ಥಿತಿ ತರುತ್ತಿರಲಿಲ್ಲ. ಅಪ್ಪನ ಅಧಿಕಾರವನ್ನು ಅತಿ ಹೆಚ್ಚು ಯತೀಂದ್ರ ದುರುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಹೆಜ್ಜೆ ಹೆಜ್ಜೆಗೆ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಯತೀಂದ್ರ ಸೆಲ್ಸ್ ಟ್ಯಾಕ್ಸ್ ಕಡ್ಡಾಯವಾಗಿದೆ.
ಯತೀಂದ್ರ ಅವರೇ ಯಾರಿಗಾಗಿ ಇಷ್ಟು ಆಸ್ತಿ ಮಾಡುತ್ತಿದ್ದೀರಿ? ಮನೆ, ತೋಟ, ಆಸ್ತಿ, ಎಲ್ಲಾ ಇದೆ. ನಿಮ್ಮ ಅಣ್ಣನ ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಎಲ್ಲರಿಗೂ ಗದರಿಸುವ ಸಿದ್ದರಾಮಯ್ಯ ತಮ್ಮ ಮಗನಿಗೆ ಈ ವಿಚಾರದಲ್ಲಿ ಗದರಿಸಲು ಆಗುತ್ತಿಲ್ಲ ಎಂದಿದ್ದಾರೆ. ನಾಳೆ ಬೆಳಗ್ಗೆ ಬಿಬಿಎಂಪಿ, ಮೈಸೂರು ಪಾಲಿಕೆ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳೀಪಟ ಆಗುತ್ತದೆ ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ಕಾಂಗ್ರೆಸ್ಗೆ ಧೈರ್ಯ ಇಲ್ಲ. ಅಧಿಕಾರ ಹಸ್ತಾಂತರ ಇಲ್ಲ ಎಂಬ ಯತೀಂದ್ರ ಹೇಳಿಕೆ ಅವರ ತಂದೆಯ ಮನದ ಮಾತು. ಸಿದ್ದರಾಮಯ್ಯ ಹೇಳಲು ಆಗದ್ದನ್ನು ಮಗನ ಮೂಲಕ ಹೇಳಿಸುತ್ತಿದ್ದಾರೆ. ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್ಗೆ ರಾಜ್ಯದಲ್ಲಿ ಯಾವ ಸ್ಥಿತಿ ಬಂತೋ ಅದೇ ಸ್ಥಿತಿ ಈಗಲು ಕಾಂಗ್ರೆಸ್ಗೆ ಬರುತ್ತದೆ ಎಂದು ತಿಳಿಸಿದ್ದಾರೆ.














