ಚಿತ್ರದುರ್ಗ : ಜಿಲ್ಲಾಧಿಕಾರಿ ಹಾಗೂ ಎಡಿಸಿಯವರ ಡಿಜಿಟಲ್ ಸಹಿ ದುರುಪಯೋಗಪಡಿಸಿಕೊಂಡು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ್ದ ಐವರು ನೌಕರರನ್ನು ಬಂಧಿಸಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ವಿಭಾಗದಲ್ಲಿ ಹೊರಗುತ್ತಿಗೆ ನೌಕರ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮಹೆಬೂಬ್ ಭಾಷಾ ಹಾಗೂ ವೆಂಕಟೇಶ್ ಎಂಬ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಎ1 ಆರೋಪಿ ಸೈಯದ್ ಪರಾರಿಯಾಗಿದ್ದು, ಇನ್ನುಳಿದ ಐವರನ್ನು ಬಂಧಿಸಿದ್ದಾರೆ.
ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಐವರು ಸಿಎಲ್ಟಿಸಿ ಸಿಬ್ಬಂದಿ 15 ಲಕ್ಷ ರೂ. ವೇತನದ ನಕಲಿ ಬಿಲ್ ಸೃಷ್ಟಿಸಿ, ಜಿಲ್ಲಾ ಖಜಾನೆಗೆ ಕಡತವನ್ನು ಕಳಿಸಿದ್ದರು. ಈ ವೇಳೆ ಸಹಿ ಬಗ್ಗೆ ಅನುಮಾನಗೊಂಡು ಖಜಾನೆ ಇಲಾಖೆಯಿಂದ ಆಕ್ಷೇಪಣೆ ಬಂದಿತ್ತು. ಈ ಹಿನ್ನಲೆಯಲ್ಲಿ ವಂಚನೆ ಬಯಲಾಗಿದ್ದು, ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಡಿಸಿ ಕಚೇರಿಯಲ್ಲಿ ಡಿಸಿ ಹಾಗೂ ಎಡಿಸಿ ಅವರಿಗೆ ಸಂಬಂಧಿತ ಡಿಎಸ್ಸಿ ಕೀ ಕಳ್ಳತನ ಮಾಡಿದ್ದಾರೆ ಎಂದು ನೌಕರ ಸೈಯದ್ ಸಾದಿಕ್ ವಿರುದ್ಧ ಕಳ್ಳತನ ಆರೋಪ ಕೇಳಿಬಂದಿದೆ. ಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದು, ಓರ್ವ ಸರ್ಕಾರಿ ನೌಕರನನ್ನು ಅಮಾನತುಗೊಳಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.















