ಮನೆ ಸುದ್ದಿ ಜಾಲ ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ – ಸಚಿವ ವಿ.ಸೋಮಣ್ಣ

ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ – ಸಚಿವ ವಿ.ಸೋಮಣ್ಣ

0

ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದರ್ಶನಕ್ಕೆ ಹಾಗೂ ಪ್ರಸಿದ್ಧ ಪಂಚ ಮಹಾರಥೋತ್ಸವದಲ್ಲಿ (ದೊಡ್ಡ ಜಾತ್ರೆ) ಭಾಗಿಯಾಗಲು ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸಿದೆ. ಜಾತ್ರೆಯ ಸಮಯದಲ್ಲಿ ಭಕ್ತರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುಗಮ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಮಾರ್ಚ್‌ 30ರಿಂದ ಏಪ್ರಿಲ್‌ 3ರವರೆಗೆ ಕಾಯ್ದಿರಿಸದ ವಿಶೇಷ ರೈಲುಗಳು ಮೈಸೂರು-ನಂಜನಗೂಡು ನಡುವೆ ಸಂಚರಿಸಲಿವೆ.

ಮೈಸೂರು-ನಂಜನಗೂಡು (ರೈಲು ಸಂಖ್ಯೆ: 06225) ಹಾಗೂ ನಂಜನಗೂಡು-ಮೈಸೂರು (ರೈಲು ಸಂಖ್ಯೆ: 06226) ಈ ಎರಡೂ ರೈಲುಗಳು ಒಟ್ಟು 5 ಟ್ರಿಪ್‌ ಸಂಚಾರ ನಡೆಸಲಿವೆ. ಇದರಿಂದಾಗಿ ಮೈಸೂರು ಭಾಗದ ಸಾವಿರಾರು ಭಕ್ತರಿಗೆ ಶ್ರೀಕಂಠೇಶ್ವರನ ದರ್ಶನ ಪಡೆಯಲು ಸುಲಭವಾಗಲಿದೆ ಎಂದು ಈ ಮಹತ್ವದ ನಿರ್ಧಾರದ ಕುರಿತು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ನಂಜನಗೂಡಿನ ದೊಡ್ಡ ಜಾತ್ರೆಯ ನಿಮಿತ್ತ ಭಕ್ತರ ಪ್ರಯಾಣದ ಹಿತದೃಷ್ಟಿಯಿಂದ ಈ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಭಕ್ತಾಧಿಗಳು ರೈಲ್ವೆ ಇಲಾಖೆಯ ಈ ಸೇವೆಯನ್ನು ಸದುಪಯೋಗ ಪಡಿಸಿಕೊಂಡು, ಶ್ರೀಕಂಠೇಶ್ವರನ ಕೃಪೆಗೆ ಪಾತ್ರರಾಗಬೇಕು” ಎಂದು ಅವರು ಆಶಿಸಿದ್ದಾರೆ. ನಂಜನಗೂಡಿನ ಪಂಚ ಮಹಾರಥೋತ್ಸವವು ರಾಜ್ಯದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಈ ವೇಳೆ ಬಸ್ಸುಗಳ ಮೇಲೆ ಬೀಳುವ ಒತ್ತಡವನ್ನು ತಗ್ಗಿಸಲು ಈ ರೈಲು ಸೇವೆ ಸಹಕಾರಿಯಾಗಲಿದೆ. ಕಾಯ್ದಿರಿಸದ ರೈಲು ಆಗಿರುವುದರಿಂದ ಭಕ್ತರು ತಕ್ಷಣವೇ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ. ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ‘ಪಂಚ ಮಹಾರಥೋತ್ಸವ’ (ದೊಡ್ಡ ಜಾತ್ರೆ) ಸನ್ನಿಹಿತವಾಗುತ್ತಿದೆ. ಈ ಸಂಭ್ರಮದ ಸುಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹರಿದುಬರುವ ಭಕ್ತಾದಿಗಳ ಸುಗಮ ಪ್ರಯಾಣಕ್ಕಾಗಿ ಕೇಂದ್ರ ರೈಲ್ವೆ ಇಲಾಖೆಯು ಮೈಸೂರು ಮತ್ತು ನಂಜನಗೂಡು ನಡುವೆ ಈ ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದೆ.

ಜಾತ್ರೆಯ ಸಮಯದಲ್ಲಿ ರಸ್ತೆ ಮಾರ್ಗಗಳಲ್ಲಿ ಉಂಟಾಗುವ ವಿಪರೀತ ಸಂಚಾರ ದಟ್ಟಣೆಯನ್ನು ತಪ್ಪಿಸಲು ಮತ್ತು ಭಕ್ತರಿಗೆ ಕೈಗೆಟುಕುವ ದರದಲ್ಲಿ ವೇಗವಾದ ಪ್ರಯಾಣ ಕಲ್ಪಿಸಲು ಈ ವಿಶೇಷ ರೈಲುಗಳು ಸಂಚರಿಸಲಿವೆ. ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಿನಲ್ಲಿ ಪ್ರತಿ ವರ್ಷ ಜರುಗುವ ಪಂಚ ಮಹಾರಥೋತ್ಸವವು ಅತ್ಯಂತ ವೈಭವದ ಧಾರ್ಮಿಕ ಕಾರ್ಯಕ್ರಮವಾಗಿದೆ. ಇಲ್ಲಿ ಐದು ರಥಗಳ ಎಳೆಯುವಿಕೆ (ಗೌತಮ ರಥ, ಚಂದ್ರಕೇಶ್ವರ ರಥ, ಪಾರ್ವತಿ ರಥ, ಸುಬ್ರಹ್ಮಣ್ಯ ರಥ ಮತ್ತು ಗಣಪತಿ ರಥ) ವಿಶೇಷ ಆಕರ್ಷಣೆಯಾಗಿರುತ್ತದೆ. ಈ ಬಾರಿ ರೈಲ್ವೆ ಇಲಾಖೆಯ ಈ ಕ್ರಮದಿಂದಾಗಿ ಮೈಸೂರು, ಚಾಮರಾಜನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ನಂಜನಗೂಡಿನ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯವು ದ್ರಾವಿಡ ಶೈಲಿಯ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಭವ್ಯವಾದ ರಾಜಗೋಪುರವನ್ನು ಹೊಂದಿರುವ ಈ ಕ್ಷೇತ್ರವನ್ನು “ದಕ್ಷಿಣ ಕಾಶಿ” ಎಂದೇ ಕರೆಯಲಾಗುತ್ತದೆ. ಲೋಕಕಲ್ಯಾಣಕ್ಕಾಗಿ ಹಾಲಾಹಲವನ್ನು ಕುಡಿದು ‘ನಂಜುಂಡ’ನಾದ ಶಿವನು ಇಲ್ಲಿ ನೆಲೆಸಿದ್ದಾನೆ ಎಂಬುದು ಭಕ್ತರ ಗಾಢ ನಂಬಿಕೆ. ಪ್ರತಿ ವರ್ಷ ನಡೆಯುವ ಪಂಚ ಮಹಾರಥೋತ್ಸವವು ರಾಜ್ಯದ ಅತಿ ದೊಡ್ಡ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದ್ದು, ಈ ಬಾರಿ ಭಕ್ತರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ.