ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿಕೆಟ್ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ. ಒಂದು ವೇಳೆ ಎಲ್ಲಾ ಅಡೆ ತಡೆಗಳು ನಿವಾರಣೆಯಾಗಿ ಸರ್ಕಾರ ಅನುಮತಿ ನೀಡಿದರೆ ಹೊಸದಾಗಿ 20 ಸಾವಿರ ಸೀಟುಗಳು ಬುಕ್ಕಿಂಗ್ಗೆ ಸಿಗಲಿದೆ. ಐಪಿಎಲ್ ಟಿಕೆಟ್ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಇಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಆರ್ಸಿಬಿ, ಡಿಎನ್ಎ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಶಾಸಕರಿಗೆ 3 ಟಿಕೆಟ್ ಕೊಡಲು ಅಂತಿಮವಾಗಿ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಸ್ಟೇಡಿಯಂನಲ್ಲಿ ಸೀಟು ಹೆಚ್ಚಳ ಮಾಡುವ ಸಂಬಂಧ ಗಂಭೀರ ಚರ್ಚೆ ನಡೆದಿದೆ.
ಸಭೆ ಬಳಿಕ ಮಾತನಾಡಿದ ಡಿಕೆಶಿವಕುಮಾರ್, ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ 3 ಟಿಕೆಟ್ ಸಿಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್ ಉಚಿತ ಮತ್ತು 2 ಟಿಕೆಟ್ ಹಣ ಕೊಟ್ಟು ಪಡೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು. ಶಾಸಕರಿಗೆ ಪಂದ್ಯ ವೀಕ್ಷಣೆಗೆ ಪ್ರತ್ಯೇಕ ಗ್ಯಾಲರಿ ಇಲ್ಲದ್ದಕ್ಕೆ ನಾನು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೀಟು ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. 20 ಸಾವಿರ ಸೀಟು ಹೆಚ್ಚಳ ಮಾಡಿದರೆ ಅನುಕೂಲವಾಗಲಿದೆ ಎಂದರು.
ತಮಿಳುನಾಡು ಸೇರಿದಂತೆ ಅನೇಕ ಕಡೆ ಸೀಟುಗಳ ಸಂಖ್ಯೆಯನ್ನು ಏರಿಸಲಾಗಿದೆ. ಸೀಟು ಹೆಚ್ಚಳ ಸಂಬಂಧ ಕೆಎಸ್ಸಿಎ ಅವರ ಬಳಿ ಪ್ರಸೆಂಟೇಷನ್ ನೀಡುವಂತೆ ಹೇಳಿದ್ದೇವೆ. ಪ್ರಸಂಟೇಷನ್ ಬಳಿಕ ಸೀಟು ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ ಎಂದು ಡಿಕೆಶಿ ಹೇಳಿದರು. ಸದ್ಯ ಚಿನ್ನಸ್ವಾಮಿಯಲ್ಲಿ 35 ಸಾವಿರ ಮಂದಿ ಕುಳಿತು ಕ್ರಿಕೆಟ್ ನೋಡಬಹುದು. ಕೆಎಸ್ಸಿಎ ನೀಡುವ ಪ್ರಸಂಟೇಷನ್ ಎಲ್ಲಾ ಮಾನದಂಡಗಳ ಪ್ರಕಾರ ಸರಿಯಿದ್ದು ಸರ್ಕಾರ ಒಪ್ಪಿಗೆ ನೀಡಿದರೆ ಕುಳಿತುಕೊಳ್ಳುವ ಆಸನಗಳ ಸಂಖ್ಯೆ 55 ಸಾವಿರಕ್ಕೆ ಏರಿಕೆಯಾಲಿದೆ.
ಬೆಂಗಳೂರಿನಲ್ಲಿ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಐಪಿಎಲ್ ಸೇರಿದಂತೆ ಯಾವುದೇ ಕ್ರಿಕೆಟ್ ಟೂರ್ನಿ ಇದ್ದರೂ ಕೆಲವೇ ನಿಮಿಷಗಳಲ್ಲಿ ಟಿಕೆಟ್ ಮಾರಾಟವಾಗುತ್ತದೆ. ಬೇರೆ ಎರಡು ದೇಶಗಳ ಮಧ್ಯೆ ಪಂದ್ಯ ನಡೆದರೂ ಮೈದಾನಕ್ಕೆ ಅಭಿಮಾನಿಗಳು ಬರುತ್ತಾರೆ. 2023ರ ಏಕದಿನ ವಿಶ್ವಕಪ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಾಗ ಪೆವಿಲಿಯನ್ ಅಭಿಮಾನಿಗಳಿಂದ ತುಂಬಿತ್ತು. ಮಹಿಳೆಯರ ಪೀಮಿಯರ್ ಲೀಗ್ನಲ್ಲೂ ಆರ್ಸಿಬಿ ಹೊರತಾದ ಪಂದ್ಯ ವೀಕ್ಷಿಸಲು ಜನ ಸ್ಟೇಡಿಯಂಗೆ ಬಂದಿದ್ದರು.















