ನವದೆಹಲಿ : ಕೊಪ್ಪಳ ಜಿಲ್ಲೆಯ ನವವೃಂದಾವನ ಗಡ್ಡೆಯ ಪೂಜೆ ಮತ್ತು ಇತರ ಆಚರಣೆಗಳನ್ನು ನಡೆಸುವ ಬಗ್ಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಮತ್ತು ಉತ್ತರಾದಿ ಮಠದ ನಡುವಿನ ಸುದೀರ್ಘ ಕಾನೂನು ಹೋರಾಟಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ.
ಈ ವಿವಾದ ಬಗೆಹರಿಸಲು 2025ರ ಮಾರ್ಚ್ 19ರಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನ್ಯಾಯಪೀಠವು ನೇಮಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಎನ್.ಕೋಟೀಶ್ವರ್ ಸಿಂಗ್ ಅವರ ಪೀಠವು, ನಿವೃತ್ತ ನ್ಯಾಯಮೂರ್ತಿ ಕೌಲ್ ಅವರ ಪ್ರಯತ್ನಗಳಿಂದಾಗಿ ಈ ವಿಷಯ ಇತ್ಯರ್ಥವಾಗಿದೆ.
ಮಧ್ಯಸ್ಥಿಕೆದಾರರ ಉತ್ತಮ ಪ್ರಯತ್ನಗಳಿಂದ ಎರಡು ಮಠಗಳ ನಡುವಿನ ವಿವಾದ ಸುಖಾಂತ್ಯಗೊಂಡಿದೆ. 2026ರ ಜ.3ರ ಒಪ್ಪಂದ ಮತ್ತು ಏ.13ರ ತಿಳಿವಳಿಕೆ ಪತ್ರದ ಆಧಾರದಲ್ಲಿ ವಿಶೇಷ ಮೇಲ್ಮನವಿ ಅರ್ಜಿ ವಿಲೇವಾರಿ ಮಾಡಬಹುದು ಎಂದು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಇದೇ ವೇಳೆ ಕಕ್ಷಿದಾರರ ಪರವಾಗಿ ಹಿರಿಯ ವಕೀಲ ಡಿ.ಎಸ್.ನಾಯ್ಡು ಮತ್ತು ವಕೀಲ ಅಲ್ಜೋ ಕೆ.ಜೋಸೆಫ್ ಅವರು ಸಲ್ಲಿಸಿದ ದಾಖಲೆಗಳನ್ನು ಸ್ವೀಕರಿಸಿದೆ.
ಉತ್ತರಾದಿ ಮಠ ಹಾಗೂ ಮಂತ್ರಾಲಯ ಮಠ ಮಾಡಿಕೊಂಡ ಒಪ್ಪಂದ ಮತ್ತು ತಿಳುವಳಿಕೆ ಒಪ್ಪಂದವು ಈ ಆದೇಶದ ಭಾಗವಾಗಿರುತ್ತದೆ. ಮಾಧ್ವ ಪರಂಪರೆಯ ಎರಡು ಪ್ರಮುಖ ಮಠಗಳಾದ ಉತ್ತರಾದಿ ಮಠ ಹಾಗೂ ರಾಘವೇಂದ್ರ ಸ್ವಾಮಿ ಮಠದ ನಡುವಿನ ಹಲವು ದಶಕಗಳ ವಿವಾದಗಳು ಹಾಗೂ ವ್ಯಾಜ್ಯಗಳನ್ನು ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಸಲು ಎರಡು ಮಠಗಳು ಜನವರಿಯಲ್ಲಿ ಒಪ್ಪಿಗೆ ಸೂಚಿಸಿದ್ದವು. ಬೆಂಗಳೂರಿನಲ್ಲಿ ನಡೆದಿದ್ದ ಸೌಹಾರ್ದ ಸಮಾವೇಶದಲ್ಲಿ ಒಪ್ಪಂದಕ್ಕೆ ಎರಡು ಮಠದ ಸ್ವಾಮೀಜಿಗಳು ಸಹಿ ಹಾಕಿದ್ದರು ಎಂದು ಹೇಳಿದೆ.















